ಸಾರಾಂಶ
ರಾಮನಗರ: ಸಾಂಸ್ಕೃತಿಕ ಮನಸ್ಸನ್ನು ಕಟ್ಟುವಲ್ಲಿ ಶೈಕ್ಷಣಿಕ ಕ್ಷೇತ್ರ ಸಫಲವಾದಾಗ ಜೀವಪರವಾದ ಸಮಾಜವನ್ನು ನಿರ್ಮಾಣ ಮಾಡುವುದು ಸಾಧ್ಯವಾಗುತ್ತದೆ ಎಂದು ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಬಿಡದಿಯ ಶ್ರೀ ಬಸವೇಶ್ವರಸ್ವಾಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆಯು (ಪದವಿ ಪೂರ್ವ) ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಫರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಮನುಷ್ಯರನ್ನು ಹಾಗೂ ಜೀವ ವೈವಿಧ್ಯತೆಯನ್ನು ಪ್ರೀತಿಸುವುನ್ನೇ ಸಾಂಸ್ಕೃತಿಕ ಮನಸ್ಸು ಎನ್ನುತ್ತೇವೆ ಎಂದು ಹೇಳಿದರು.ಯುದ್ಧ, ಕ್ರೌರ್ಯ, ಹಿಂಸೆ, ಜನಾಂಗೀಯ ದ್ವೇಷಗಳಿಂದ ಜನ ತತ್ತರಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ತಿರುಚಿದ ಚರಿತ್ರೆಯನ್ನು ಬೋಧಿಸುವುದರಿಂದ ಯುವಜನರ ಮನಸ್ಸು ಹಾದಿ ತಪ್ಪುತ್ತಿದೆ. ಕ್ರೌರ್ಯ, ಹಿಂಸೆಗಳು ಹಿಂದೆಂದೂ ಈ ಪ್ರಮಾಣದಲ್ಲಿ ಘಟಿಸುತ್ತಿರಲಿಲ್ಲ. ಬರ, ಪ್ರವಾಹ, ಇತ್ಯಾದಿ ಪ್ರಾಕೃತಿಕ ವಿಕೋಪಗಳನ್ನು ಕಂಡಿದ್ದೇವೆ. ಮನುಷ್ಯ ನಿರ್ಮಿತವಾದ ಎರಡು ಮಹಾ ಯುದ್ಧಗಳ ನಂತರ ಬಂದ ರಾಜಕಾರಣಿಗಳು ಹಿಂಸೆಯನ್ನು ಪ್ರತಿಪಾದಿಸುವ ಮನಸ್ಸನ್ನು ಹೊಂದಿರಲಿಲ್ಲ ಎಂದು ಹೇಳಿದರು.
ಇಸ್ರೇಲ್ ಪ್ರಧಾನಿ ನೆತನ್ಯಾಹು ಅದೆಷ್ಟೋ ಜನರ ಕೊಲೆ, ಹಿಂಸೆ, ಕಣ್ಣೀರಿಗೆ ಕಾರಣನಾಗಿದ್ದಾನೆ. ಅವನು ಸಾಂಸ್ಕೃತಿಕ ಮನಸ್ಸಿಗನಲ್ಲ. ರಾಜಕಾರಣಿಗಳಿಗೆ ಸಾಂಸ್ಕೃತಿಕ ಮನಸ್ಸು ಇದ್ದಲ್ಲಿ ಕ್ರೌರ್ಯ ನಡೆಯದೆ ಶಾಂತಿ ನೆಲೆಸುತ್ತದೆ. ಹಿಟ್ಲರ್ ಜನಾಂಗೀಯ ದ್ವೇಷ ಮತ್ತು ವರ್ಣ ದ್ವೇಷ ಇತ್ಯಾದಿಗಳನ್ನು ನಡೆಸಿದ್ದರಿಂದಾಗಿ ಕ್ರೌರ್ಯ ವಿಪರೀತವಾಯಿತು ಎಂದು ವಿಷಾದಿಸಿದರು.ಸಾಂಸ್ಕೃತಿಕ ಮನಸ್ಸು ಸ್ಪರ್ಧೆಯಲ್ಲಿ ಸ್ನೇಹ ಮತ್ತು ಬಾಂಧವ್ಯವನ್ನು ಸಂವಧಿಸುತ್ತದೆ. ರಾಷ್ಟ್ರ ರಾಷ್ಟ್ರಗಳ ನಡುವಿನ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳು ಮನಷ್ಯ, ಮನುಷ್ಯನ ನಡುವಿನ ಸ್ನೇಹ ಮತ್ತು ಭ್ರಾತೃತ್ವ ಭಾವನೆಗಳನ್ನು ವೃದ್ಧಿಸುತ್ತವೆ. ಗೆದ್ದವರು ಸೋತವರಿಗೆ ಹಸ್ತ ಲಾಘವ ನೀಡಿ, ಆತ್ಮವಿಶ್ವಾಸ ವೃದ್ಧಿಸಬೇಕು. ಆದರೆ, ಮೊನ್ನೆ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯದಲ್ಲಿ ಆಟಗಾರರು ಹಸ್ತಲಾಘವ ನೀಡದಿರುವುದು ದೇಶ ತಲೆ ತಗ್ಗಿಸುವ ವಿಚಾರವಾಗಿದೆ. ಶತೃತ್ವವನ್ನು ಗೆಲ್ಲುವುದೇ ಕ್ರೀಡಾ ಸ್ಫೂರ್ತಿ. ಸೋಲು ಗೆಲುವಿಗಿಂತ ಮುಖ್ಯವಾಗಿ ಸ್ನೇಹ ಬಾಂಧವ್ಯ ವೃದ್ಧಿಯಾಗಬೇಕು. ಅದು ನಿಜವಾದ ಸಾಂಸ್ಕೃತಿಕ ಗೆಲುವು ಎಂದು ಸಿದ್ದರಾಮಯ್ಯ ಹೇಳಿದರು.
ಸ್ಪರ್ಧೆಯಿಂದ ಬಾಂಧವ್ಯ ವೃದ್ಧಿಯಾಗಬೇಕು. ಆದರೆ, ಅಸಾಂಸ್ಕೃತಿಕ ಮನಸ್ಸು ಇದ್ದರೆ ಬಾಂಧವ್ಯ ವೃದ್ಧಿಯಾಗುವ ಬದಲು ದ್ವೇಷ ಸೃಷ್ಟಿಯಾಗುತ್ತದೆ. ವಿಶ್ವ ಬಾಂಧವ್ಯವನ್ನು ಬೆಸೆಯುವಲ್ಲಿ ಸಾಂಸ್ಕೃತಿಕ ನಡವಳಿಕೆ ನೆರವಾಗುತ್ತದೆ. ಜನಾಂಗೀಯ ದ್ವೇಷ ದಳ್ಳುರಿಗೆ ದೇಶ ನಾಶವಾಗುತ್ತದೆ. ಸಾಂಸ್ಕೃತಿಕ ಸಂವೇದನೆಯಿಂದ ರಾಷ್ಟ್ರ ಕಟ್ಟಬೇಕು. ಬಹು ಧರ್ಮ, ಬಹು ಜಾತಿ, ಬಹು ಸಂಸ್ಕೃತಿಯುಳ್ಳ ಭಾರತದಲ್ಲಿ ನಾವೆಲ್ಲರೂ ಒಟ್ಟಿಗೆ ಬಾಳಿದಾಗ ಬಹುತ್ವದ ಭಾರತ ಬೆಳವಣಿಗೆಯಾಗುತ್ತದೆ. ಇಲ್ಲದಿದ್ದರೆ ಭಾರತೀಯತೆಯೇ ನಾಶವಾಗುತ್ತದೆ ಎಂದು ಎಚ್ಚರಿಸಿದರು.ವಿದ್ಯಾರ್ಥಿಗಳಿಗೆ ಪಠ್ಯ ವಿಷಯಗಳನ್ನು ಮೂಟೆಗಟ್ಟಲೆ ತುಂಬುವುದು ಶಿಕ್ಷಕರ ಕೆಲಸವಲ್ಲ. ವಿದ್ಯಾರ್ಥಿಗಳ ಮೃದು ಮನಸ್ಸನ್ನು ಮನುಷ್ಯ ಮತ್ತು ಜೀವ ಜಗತ್ತನ್ನು ಪ್ರೀತಿಸುವಂತೆ ಮಾಡುವ ಜವಾಬ್ದಾರಿಯುತ ಪ್ರಜೆಗಳನ್ನಾಗಿ ಬೆಳೆಸಬೇಕು. ಜೀವ ಜಗತ್ತಿನ ಉಳಿವಿಗೆ ಮಿಡಿಯುವಂತೆ ಮಾಡುವುದೇ ನಿಜವಾದ ಸಾಂಸ್ಕೃತಿಕ ಜವಾಬ್ದಾರಿ ಎಂದು ಸಿದ್ದರಾಮಯ್ಯ ತಿಳಿಸಿದರು.
ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಮಾತನಾಡಿ, ಜಾನಪದ ಗೀತೆ, ಭಾವಗೀತೆಗಳು ನಮ್ಮ ಸಾಂಸ್ಕೃತಿಕ ವ್ಯವಸ್ಥೆಯನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸೊಗಸಾಗಿ ಗೀತೆ ಹಾಡುವವರು ದೈಹಿಕ ಚಟುವಟಿಕೆಗಳಾದ ಕ್ರೀಡೆಗಳಲ್ಲಿ ಭಾಗವಹಿಸುವವರು ಸಮಾಜದಲ್ಲಿ ಉತ್ಕೃಷ್ಟ ವ್ಯಕ್ತಿತ್ವವನ್ನು ರೂಢಿಸಿಕೊಳ್ಳುತ್ತಾರೆ ಎಂದು ತಿಳಿಸಿದರು.ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯ. ಸೋಲು, ಗೆಲುವು, ಪ್ರಶಸ್ತಿ ಪತ್ರ, ಸ್ಮರಣಿಕೆ ಪತ್ರ, ಬಹುಮಾನಗಳು ಮುಖ್ಯವಾಗುವುದಿಲ್ಲ. ಪ್ರತಿಭಾನ್ವಿತ ವಿದ್ಯಾರ್ಥಿಗಳ ನಡುವಿನ ಒಡನಾಟ, ನೃತ್ಯ ಮಾಡುವ ಶೈಲಿ, ವಾದ ಮಂಡಿಸುವ ರೀತಿ, ಪರಸ್ಪರ ಪ್ರೀತಿ, ವಿಶ್ವಾಸಗಳನ್ನು ಬೆಳೆಸಿಕೊಳ್ಳುವುದು ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ದೊರೆಯುವ ಪ್ರಮುಖ ಪ್ರಯೋಜನಗಳಾಗಿರುತ್ತವೆ ಎಂದು ತಿಳಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಮರಿಸ್ವಾಮಿ ಮಾತನಾಡಿ, ಪಠ್ಯದ ಜತೆಗೆ ಸಾಂಸ್ಕೃತಿಕ ಸ್ಪರ್ಧೆಗಳಾದ ರಸಪ್ರಶ್ನೆ, ಪ್ರಬಂಧ, ಭಾವಗೀತೆ, ಜಾನಪದ ನೃತ್ಯ, ಚರ್ಚಾ ಸ್ಪರ್ಧೆ ಇತ್ಯಾದಿಗಳಲ್ಲಿ ಪಾಲ್ಗೊಂಡಾಗ ವ್ಯಕ್ತಿಗತ ಪ್ರಯೋಜನಗಳು ಹಾಗೂ ಸಾಮಾಜಿಕ ಜವಾಬ್ದಾರಿಗಳು ಹೆಚ್ಚುತ್ತವೆ. ವಿದ್ಯಾರ್ಥಿಗಳು ಹಿಂಜರಿಕೆ ಬಿಟ್ಟು ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಕಾಲೇಜು ಹಾಗೂ ಪೋಷಕರಿಗೆ ಕೀರ್ತಿ ತರಬೇಕು ಎಂದು ಕಿವಿಮಾತು ಹೇಳಿದರು.ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಜಿ.ಶಿವಣ್ಣ ಮಾತನಾಡಿ, ಜಿಲ್ಲೆಯ ೯೫ ಕಾಲೇಜುಗಳಿಂದ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದಾರೆ. ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದರಿಂದ ಸುಪ್ತವಾಗಿದ್ದ ಪ್ರತಿಭೆಗಳನ್ನು ಪ್ರದರ್ಶಿಸಲು ಅವಕಾಶ ಲಭ್ಯವಾಗಿದೆ. ಬಹುಮಾನ ಜತೆಗೆ ಸ್ಪರ್ಧಾ ವಿಷಯದಲ್ಲಿ ಆಳವಾದ ಅಧ್ಯಯನ ಮತ್ತು ಪ್ರದರ್ಶನ ಮಾಡುವ ಅವಕಾಶದಿಂದ ವಾರ್ಷಿಕ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಲು ಹಾಗೂ ಸಾರ್ವಜನಿಕ ಜೀವನದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ನೆರವಾಗುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರ ಸಂಘದ ಪ್ರಧಾನ ಕಾರ್ಯದರ್ಶಿ ದೊಡ್ಡಬೋರಯ್ಯ, ಖಜಾಂಚಿ ಬಿ.ಮಹೇಶ್, ಜೆವಿಎಸ್ ಬಿ.ಆರ್.ನಾಗರಾಜು, ಬಿ.ಎನ್.ಗಂಗಾಧರಯ್ಯ, ಎಲ್.ಸತೀಶ್ಚಂದ್ರ, ಉಪನ್ಯಾಸಕರ ಸಂಘದ ಅಧ್ಯಕ್ಷ ಎನ್.ವೇಣುಗೋಪಾಲ್, ಸಾಂಸ್ಕೃತಿಕ ಸಂಚಾಲಕ ಜೆ.ವಿ.ಚನ್ನವೀರಯ್ಯ, ಎಂ.ಎನ್.ಪ್ರದೀಪ್, ಶರತ್, ಎಂ.ಸಿ.ಗೋವಿಂದರಾಜು, ಪ್ರಾಂಶುಪಾಲ ಸರವಣನ್.ಜಿ, ಉಪನ್ಯಾಸಕ ಚಿಕ್ಕಪುಟ್ಟಯ್ಯ ಮತ್ತಿತರರು ಉಪಸ್ಥಿತರಿದ್ದರು.16ಕೆಆರ್ ಎಂಎನ್ 3.ಜೆಪಿಜಿ
ಬಿಡದಿಯ ಬಸವೇಶ್ವರಸ್ವಾಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಫರ್ಧೆಯನ್ನು ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಉದ್ಘಾಟಿಸಿದರು. ಇಲಾಖೆ ಉಪ ನಿರ್ದೇಶಕ ಮರಿಸ್ವಾಮಿ, ಪ್ರಾಂಶುಪಾಲರ ಸಂಘದ ಪ್ರಧಾನ ಕಾರ್ಯದರ್ಶಿ ದೊಡ್ಡಬೋರಯ್ಯ, ಖಜಾಂಚಿ ಬಿ.ಮಹೇಶ್ ಇತರರಿದ್ದರು.;Resize=(128,128))
;Resize=(128,128))