ಪ್ರಧಾನಿ ಮೋದಿಯಿಂದ ಸದೃಢ ಭಾರತ ನಿರ್ಮಾಣ

| Published : Dec 21 2023, 01:15 AM IST / Updated: Dec 21 2023, 01:16 AM IST

ಪ್ರಧಾನಿ ಮೋದಿಯಿಂದ ಸದೃಢ ಭಾರತ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ಪ್ರಾಣ ತ್ಯಾಗ ಮಾಡಿದ್ದಾರೆ, ನಮ್ಮ ಧರ್ಮ, ಸಂಸ್ಕೃತಿ ಉಳಿಸುವ ಜವಾಬ್ದಾರಿ ಯುವಕರ ಮೇಲಿದೆ

ಡಂಬಳ: 75 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ ಪಕ್ಷದಿಂದ ದೇಶದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ, ಕೇವಲ 9 ವರ್ಷದ ಅವಧಿಯಲ್ಲಿ ಎಲ್ಲರ ಜನಮಾನಸದಲ್ಲಿ ನೆಲೆ ನಿಂತಿರುವ ಪ್ರಧಾನಿ ನರೇಂದ್ರ ಮೋದಿ ದೇಶದ ಸಂಸ್ಕೃತಿ, ಧರ್ಮ ಉಳಿಸುವುದರ ಜತೆಗೆ ಸದೃಢ ಭಾರತ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಹೇಳಿದರು.

ಡಂಬಳ ಹೋಬಳಿಯ ಜಂತ್ಲಿಶಿರೂರ ಗ್ರಾಮದಲ್ಲಿ ಬುಧವಾರ ಬಿಜೆಪಿ ಮುಖಂಡ ವೆಂಕಟೇಶ ಕುಲಕರ್ಣಿ ಅವರ ನಿವಾಸದ ಆವರಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ಪ್ರಾಣ ತ್ಯಾಗ ಮಾಡಿದ್ದಾರೆ, ನಮ್ಮ ಧರ್ಮ, ಸಂಸ್ಕೃತಿ ಉಳಿಸುವ ಜವಾಬ್ದಾರಿ ಯುವಕರ ಮೇಲಿದೆ ಎಂದರು.

ಚುನಾವಣೆ ಬಂದಾಗ ಮಾತ್ರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಬಿಜೆಪಿಯವರು ಹೇಳುತ್ತಾರೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು, ಜ.22ರಂದು ರಾಮಮಂದಿರ ಉದ್ಘಾಟನೆಯಾಗಲಿದೆ. ಹಾಗೇ ಮುಸ್ಲಿಮರು ಆಕ್ರಮಿಸಿಕೊಂಡಿರುವ ಕಾಶಿಯಲ್ಲಿ ವಿಶ್ವನಾಥ, ಮಧುರೈ ದೇವಸ್ಥಾನ ನಿರ್ಮಾಣವಾಗುವುದು ನಿಶ್ಚಿತ ಎಂದರು.

ಬಿಜೆಪಿ ಕಾರ್ಯಕರ್ತರನ್ನು ಗುರುತಿಸುವ ಪಕ್ಷವಾಗಿದೆ, ಹೀಗಾಗಿ ಲಕ್ಷಾಂತರ ನಾಯಕರು ನಿಷ್ಠೆ ಮತ್ತು ದೇಶಾಭಿಮಾನದಿಂದ ಸಂಘಟನೆ ಮಾಡುತ್ತಿದ್ದಾರೆ. ಪಕ್ಷ ನನಗೆ ಎಲ್ಲ ಕೊಟ್ಟಿದೆ, ಆದರೆ ಯಾರೋ ಸಂಘಟನೆ ಮಾಡಿದ ಪಕ್ಷದಲ್ಲಿ ಇನ್ಯಾರೋ ಲಾಭ ಮಾಡಿಕೊಂಡಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಗೆ ಹಾವೇರಿ ಕ್ಷೇತ್ರದಿಂದ ಕಾಂತೇಶ ಇರಲಿ, ಯಾರೇ ಇರಲಿ ಪಕ್ಷ ಟಿಕೆಟ್‌ ನೀಡಿದವರನ್ನು ಗೆಲ್ಲಿಸಲು ಪ್ರಯತ್ನಿಸುತ್ತೇನೆ. ನಾವೆಲ್ಲ ವ್ಯಕ್ತಿ ಜಾತಿಯಿಂದ ಗುರುತಿಸಿಕೊಳ್ಳದೇ ಪಕ್ಷ, ಚಿಹ್ನೆಯಿಂದ ಗುರುತಿಸಿಕೊಂಡಿದ್ದೇವೆ ಎಂದರು.

ಮುಂಡರಗಿ ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ವೆಂಕಟೇಶ ಕುಲಕರ್ಣಿ ಮಾತನಾಡಿ, ಮಾಜಿ ಸಚಿವ ಈಶ್ವರಪ್ಪ ಅವರು ಪಕ್ಷ ಸಂಘಟಿಸುತ್ತಾ ಬಲಿಷ್ಠ ಕಾರ್ಯಕರ್ತರ ಪಡೆ ನಿರ್ಮಾಣ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದೇಶದ ಅಖಂಡತೆ, ಏಕತೆಗಾಗಿ ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಅವಶ್ಯಕತೆ ಇದ್ದು, ಅವರ ಕೈ ಬಲಪಡಿಸಲು ಈಶ್ವರಪ್ಪ ಅವರ ಶ್ರಮ ಹಾಗೂ ಮಾರ್ಗದರ್ಶನ ಬಿಜೆಪಿಗೆ ಬೇಕಾಗಿದೆ. ಅವರ ಪುತ್ರ ಕಾಂತೇಶ ಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೆ ಅವರ ಗೆಲುವಿಗೆ ಶ್ರಮಿಸಲಾಗುವುದು ಎಂದರು.

ದತ್ತಣ್ಣ ಜೋಶಿ ಮಾತನಾಡಿ, ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಸಮರ್ಥ ಆಡಳಿತ ನೀಡುತ್ತಿದ್ದು, ವಿಶ್ವದಲ್ಲಿಯೇ ಭಾರತ ಗುರ್ತಿಸಿಕೊಂಡು ಸದೃಢ ದೇಶ ಎನಿಸಿಕೊಂಡಿದೆ ಎಂದರು.

ಈ ಸಂದರ್ಭದಲ್ಲಿ ಕಾಂತೇಶ ಈಶ್ವರಪ್ಪ, ಪ್ರಹ್ಲಾದ್‌ ಪಾಟೀಲ, ಕೃಷ್ಣಾ ನಾಡಿಗೇರ, ಯಲ್ಲಪ್ಪ ಮದಗಣ್ಣವರ, ಚಿನ್ನಪ್ಪ ವಡ್ಡಟ್ಟಿ, ಪ್ರಕಾಶ ಸಂಕಣ್ಣವರ, ಸಿದ್ದಣ್ಣ ವಡ್ಡಟ್ಟಿ, ಯಲ್ಲಪ್ಪ ಬಳೂಟಗಿ, ಪರಶುರಾಮ ಕರಡಿಕೊಳ್ಳ, ಶ್ರೀಕಾಂತ ಚವಡಿ, ವಿಜಯ ಕೋಳೇಕಾರ, ಸಿದ್ದೇಶ ಜಂಬಾಳಿ, ಬಡಿಗೇರ ನಿರೂಪಿಸಿದರು.