ಸಾರಾಂಶ
ಕಂಪ್ಲಿ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಅಂಗವಾಗಿ ಎಮ್ಮಿಗನೂರು ಗ್ರಾಪಂ ವ್ಯಾಪ್ತಿಯಲ್ಲಿ ಎತ್ತಿನ ಬಂಡಿಗಳ ಮೆರವಣಿಗೆ ಮೂಲಕ ಮತದಾನ ಜಾಗೃತಿ ಹಮ್ಮಿಕೊಳ್ಳಲಾಗಿತ್ತು.
ಬಳ್ಳಾರಿ: ಚುನಾವಣೆ ಪರ್ವ ದೇಶದ ಗರ್ವ ಎನ್ನುವ ಚುನಾವಣೆ ಆಯೋಗದ ಸಂದೇಶದೊಂದಿಗೆ ಕಂಪ್ಲಿ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಅಂಗವಾಗಿ ಮತದಾನದ ಜಾಗೃತಿ ಕುರಿತು ಎಮ್ಮಿಗನೂರು ಗ್ರಾಪಂ ವ್ಯಾಪ್ತಿಯಲ್ಲಿ ಎತ್ತಿನ ಬಂಡಿಗಳ ಮೆರವಣಿಗೆ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು.
ಕಂಪ್ಲಿ ತಾಲೂಕು ಸ್ವೀಪ್ ನೋಡೆಲ್ ಅಧಿಕಾರಿ ಹಾಗೂ ತಾಪಂ ಇಒ ಶ್ರೀಕುಮಾರ್ ಅವರು, ಗ್ರಾಮದ ಸರ್ಕಾರಿ ಹಿರಿಯ ಶತಮಾನ ಶಾಲೆ ಆವರಣದಲ್ಲಿ ಎತ್ತಿನ ಬಂಡಿ ಜಾಥಾಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ಮೇ 7ರಂದು ನಡೆಯುವ ಮತದಾನ ದಿನದಂದು ಎಲ್ಲರೂ ತಪ್ಪದೇ ಮತದಾನ ಮಾಡಿ, ನಿಮ್ಮವರಿಗೂ ಮತದಾನ ಮಾಡುವಂತೆ ತಿಳಿಸಿ ಎಂದು ಅವರು ಕರೆ ನೀಡಿದರು.
ಎತ್ತಿನ ಬಂಡಿಗಳ ಮೆರವಣಿಗೆ ಜಾಥಾವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಸಾರ್ವಜನಿಕರಲ್ಲಿ ಮತದಾನದ ಅರಿವು ಮೂಡಿಸಲಾಯಿತು.ಗಮನಸೆಳೆದ ಅಲಂಕೃತ ಎತ್ತಿನಬಂಡಿಗಳು: ಮತದಾನ ಜಾಗೃತಿ ಅಂಗವಾಗಿ ಹಮ್ಮಿಕೊಂಡಿದ್ದ ಎತ್ತಿನ ಬಂಡಿಗಳ ಮೆರವಣಿಗೆ ಜಾಥಾದಲ್ಲಿ ಎತ್ತಿನ ಬಂಡಿಗಳಿಗೆ ಅಲಂಕೃತವಾಗಿ ಸಿಂಗರಿಸಲಾಗಿತ್ತು. ತಳಿರು-ತೋರಣ, ಬಲೂನ್ಗಳು ಮತ್ತು ಮತದಾನ ಘೋಷಣೆಗಳ ಫಲಕಗಳು ಗಮನಸೆಳೆದವು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಾರು ನಾಯಕ್, ಟಿಐಇಸಿ ಸಂಯೋಜಕ ಹನುಮೇಶ್, ಆರೋಗ್ಯ ಇಲಾಖೆ ಅಧಿಕಾರಿ ಬಸವನಗೌಡ, ಶಾಲಾ ಮುಖ್ಯ ಶಿಕ್ಷಕ ಜಾತಯ್ಯ ಭಾಗವಹಿಸಿದ್ದರು.