ಸಾರಾಂಶ
ಮಾಲೀಕ ಮಂಜುನಾಥ್ ಕೊಟ್ಟಿದ್ದ ದೂರಿನನ್ವಯ ಪ್ರಕರಣ ಬೇಧಿಸಿದ ಚಿಕ್ಕಬಳ್ಳಾಪುರ ನಗರ ಪೊಲೀಸರು ಆರೋಪಿ ಗಂಗಾಧರ್ ನನ್ನು ಬಂಧಿಸಿ ಆತನಿಂದ 60 ಸಾವಿರ ರು. ನಗದು ಹಾಗೂ 50 ಸಾವಿರ ರು. ಬೆಲೆಬಾಳುವ 500 ಗ್ರಾಂ ತೂಕದ ಬೆಳ್ಳಿ ಸಾಮಗ್ರಿಗಳು, ಕೃತ್ಯಕ್ಕೆ ಬಳಸಿದ್ದ ಟಾಟಾ ಇಂಡಿಕಾ ಕಾರು ಹಾಗೂ ಕಬ್ಬಿಣದ ರಾಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ: ಏಪ್ರಿಲ್ 4 ರಂದು ನಗರದ ಪೇಂಟ್ ಅಂಗಡಿಯ ಶೆಟರ್ ಮುರಿದು ನಗದು ಕದ್ದು ಪರಾರಿಯಾಗಿದ್ದ ಕಳ್ಳನನ್ನು ಚಿಕ್ಕಬಳ್ಳಾಪುರ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಬಂಧಿತ ಚೋರನನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬುಗೆರೆ ಹೋಬಳಿಯ ಕಾರ್ನಾಳ ಗ್ರಾಮದ ಗಂಗಾಧರ್ ಬಿನ್, ಮುದ್ದಪ್ಪ ಎನ್ನಲಾಗಿದೆ. ಈತನು ಏಪ್ರಿಲ್ 4 ರಂದು ನಗರದ ಎಂ.ಜಿ. ರಸ್ತೆಯ ಶುಭಾ ಪೇಂಟ್ಸ್ ಅಂಗಡಿ ಶೆಟರ್ ಮುರಿದು ಒಳನುಗ್ಗಿ ಟೇಬಲ್ ಡ್ರಾಯರ್ ನಲ್ಲಿದ್ದ 1,24,000 ರು. ನಗದು ಕದ್ದು ಪರಾರಿಯಾಗಿದ್ದನು. ಮಾಲೀಕ ಮಂಜುನಾಥ್ ಕೊಟ್ಟಿದ್ದ ದೂರಿನನ್ವಯ ಪ್ರಕರಣ ಬೇಧಿಸಿದ ಚಿಕ್ಕಬಳ್ಳಾಪುರ ನಗರ ಪೊಲೀಸರು ಆರೋಪಿ ಗಂಗಾಧರ್ ನನ್ನು ಬಂಧಿಸಿ ಆತನಿಂದ 60 ಸಾವಿರ ರು. ನಗದು ಹಾಗೂ 50 ಸಾವಿರ ರು. ಬೆಲೆಬಾಳುವ 500 ಗ್ರಾಂ ತೂಕದ ಬೆಳ್ಳಿ ಸಾಮಗ್ರಿಗಳು, ಕೃತ್ಯಕ್ಕೆ ಬಳಸಿದ್ದ ಟಾಟಾ ಇಂಡಿಕಾ ಕಾರು ಹಾಗೂ ಕಬ್ಬಿಣದ ರಾಡುಗಳನ್ನು ವಶಪಡಿಸಿಕೊಂಡಿದ್ದಾರೆ. ಇದೇ ಆಸಾಮಿ ನಂದಿಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ತನ್ನ ಕೈಚಳಕ ತೋರಿದ್ದು ,ಎಲ್ಲೆಲ್ಲಿ ಏನೇನು ಕದ್ದಿದ್ದ , ಇವನ ಜತೆ ಯಾರ್ಯಾರಿದ್ದಾರೆ ಎಂಬ ಮಾಹಿತಿಗಾಗಿ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.