ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಕುಂದಾಪುರ ತಾಪಂ ಸಭಾಂಗಣದಲ್ಲಿ ಕ್ಷೇತ್ರ ವ್ಯಾಪ್ತಿಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಗೊಳಪಟ್ಟಿರುವ ಪ್ರವರ್ಗ ಎ, ಬಿ ಹಾಗೂ ಸಿ ವರ್ಗದ ದೇವಸ್ಥಾನಗಳ ಮುಖ್ಯಸ್ಥರೊಂದಿಗೆ ದೇವಸ್ಥಾನಗಳ ಜಲ ಮೂಲಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಸಮಾಲೋಚನಾ ಸಭೆ ನಡೆಸಿದರು.
ಬೈಂದೂರು: ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಕುಂದಾಪುರ ತಾಪಂ ಸಭಾಂಗಣದಲ್ಲಿ ಕ್ಷೇತ್ರ ವ್ಯಾಪ್ತಿಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಗೊಳಪಟ್ಟಿರುವ ಪ್ರವರ್ಗ ಎ, ಬಿ ಹಾಗೂ ಸಿ ವರ್ಗದ ದೇವಸ್ಥಾನಗಳ ಮುಖ್ಯಸ್ಥರೊಂದಿಗೆ ದೇವಸ್ಥಾನಗಳ ಜಲ ಮೂಲಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಸಮಾಲೋಚನಾ ಸಭೆ ನಡೆಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕರು, ಬೈಂದೂರು ಕ್ಷೇತ್ರದ ದೇವಸ್ಥಾನಗಳ ವಾಪ್ತಿಯಲ್ಲಿ ಬರುವ ಎಲ್ಲ ಕೆರೆಗಳನ್ನು ಗುರುತು ಮಾಡಿ, ಅವುಗಳನ್ನು ದೇವಸ್ಥಾನ, ಊರಿನ ಹಾಗೂ ಸರ್ಕಾರದ ಸಹಕಾರದೊಂದಿಗೆ ಹಾಗೂ ಸರಕಾರೇತರ ಸಂಸ್ಥೆಗಳ ಸಹ ಭಾಗಿತ್ವದಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಿ, ಈ ಮೂಲಕ ಗ್ರಾಮ ಮಟ್ಟದ ಜಲ ಮೂಲಗಳನ್ನು ಬಲಪಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು. ಆದ್ದರಿಂದ ಅಭಿವೃದ್ಧಿ ಅವಶ್ಯಕತೆ ಇರುವ ದೇವಸ್ಥಾನಗಳಿಗೆ ಸಂಬಂಧಪಟ್ಟ ಎಲ್ಲ ಕೆರೆ ಮತ್ತು ಜಲ ಮೂಲಗಳನ್ನು ಸರ್ವೆ ಮಾಡಿ, ಅವುಗಳ ಅಭಿವೃದ್ಧಿಗೆ ರೂಪುರೇಷೆ ಹಾಕಿ ಕೊಳ್ಳಲಾಗುವುದು ಎಂದರು. ದೇವಳಗಳ ಜಮೀನಿನ ದಾಖಲೆ:
ಹಲವು ದಶಕಗಳಿಂದ ಇಲ್ಲಿನ ಅನೇಕ ದೇವಸ್ಥಾನಗಳ ಅನುಭೋಗದಲ್ಲಿ ಸರಕಾರಿ ಜಮೀನಿದ್ದರೂ, ಅದು ದೇವಸ್ಥಾನದ ಹೆಸರಿಗೆ ಮಾಲೀಕತ್ವ ದಾಖಲೆ ಇಲ್ಲದಿರುವುದರಿಂದ ದೇವಸ್ಥಾನಗಳ ಅಭಿವೃದ್ಧಿಗೆ ತೊಡಕಾಗುತ್ತಿದೆ. ಆದ್ದರಿಂದ ಅಂತಹ ದೇವಸ್ಥಾನಗಳಿಗೆ ಸಂಬಂಧಿಸಿದ ಜಮೀನಿಗೆ ಪಹಣಿಪತ್ರಗಳ ಕಾಲಂ ನಂಬರ್ 9ರಲ್ಲಿ ದೇವಸ್ಥಾನದ ಮಾಲೀಕತ್ವವನ್ನು ನಮೂದು ಮಾಡಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಸಭೆಯಲ್ಲಿ ಉಡುಪಿ ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತೆ ಟಿ.ಎನ್. ಮಂಜುಳಾ ಹಾಗೂ ಕ್ಷೇತ್ರದ ಪ್ರವರ್ಗ ಎ, ಬಿ ಹಾಗೂ ಸಿ ದೇವಸ್ಥಾಗಳ ಮುಖ್ಯಸ್ಥರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.