ಕರಾವಳಿಗರಿಗೆ ತುಳು ಭಾಷೆ ಕೇವಲ ಭಾವನಾತ್ಮಕ ಮಾತ್ರವಲ್ಲ, ಅದು ನಮ್ಮ ಅಸ್ಮಿತೆಯ ವಿಚಾರ. ಅದಕ್ಕೆ ಮಾನ್ಯತೆ ಸಿಗಬೇಕು ಎಂಬುದು ಎಲ್ಲರ ಅಭಿಲಾಷೆಯಾಗಿದ್ದು, ಕರಾವಳಿಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಆ ಬೇಡಿಕೆ ಈಡೇರುವ ನಿರೀಕ್ಷೆ ಇದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್‌ ನಿಕಟಪೂರ್ವ ಅಧ್ಯಕ್ಷ ಹರೀಶ್‌ ಕುಮಾರ್‌ ಹೇಳಿದ್ದಾರೆ.

ಮಂಗಳೂರು: ಕರಾವಳಿಗರಿಗೆ ತುಳು ಭಾಷೆ ಕೇವಲ ಭಾವನಾತ್ಮಕ ಮಾತ್ರವಲ್ಲ, ಅದು ನಮ್ಮ ಅಸ್ಮಿತೆಯ ವಿಚಾರ. ಅದಕ್ಕೆ ಮಾನ್ಯತೆ ಸಿಗಬೇಕು ಎಂಬುದು ಎಲ್ಲರ ಅಭಿಲಾಷೆಯಾಗಿದ್ದು, ಕರಾವಳಿಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಆ ಬೇಡಿಕೆ ಈಡೇರುವ ನಿರೀಕ್ಷೆ ಇದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್‌ ನಿಕಟಪೂರ್ವ ಅಧ್ಯಕ್ಷ ಹರೀಶ್‌ ಕುಮಾರ್‌ ಹೇಳಿದ್ದಾರೆ.ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿ 100 ದಿನಗಳನ್ನು ಪೂರೈಸಿರುವ ಡಿ.ಕೆ. ಶಿವಕುಮಾರ್‌ ಅವರು ಚಟುವಟಿಕೆಯಿಂದ ಕೆಲಸ ಮಾಡುತ್ತಾ ಜನರ ನಾಡಿ ಮಿಡಿತ ಅರಿತು ಸಮಸ್ಯೆಯನ್ನು ನಿವಾರಿಸುವ ಉದ್ದೇಶದಿಂದ ಸಕ್ರಿಯರಾಗಿದ್ದಾರೆ. ಹಾಗಾಗಿ ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕರಾವಳಿಯ ಪ್ರವಾಸೋದ್ಯಮ, ಐಟಿ ಪಾರ್ಕ್, ಮೀನುಗಾರಿಕೆ ಸೇರಿದಂತೆ ಬಹಳಷ್ಟು ನಿರ್ಧಾರಗಳನ್ನು ಕೈಗೊಳ್ಳುವ ಭರವಸೆ ಇದೆ ಎಂದರು.ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿಚೆನ್ನಯ ಹೆಸರಿಡುವ ಕುರಿತಂತೆ ಕೇಂದ್ರವನ್ನು ಒತ್ತಾಯಿಸುವ ನಿಟ್ಟಿನಲ್ಲಿ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.

ಮುಖಂಡರಾದ ಸದಾಶಿವ ಉಳ್ಳಾಲ್‌, ಅಪ್ಪಿ, ಶುಬೋದಯ ಆಳ್ವ, ಸುಹಾನ್‌ ಆಳ್ವ, ನವಾಝ್‌, ಮುಹಮ್ಮದ್‌ ಮೋನು, ಮನುರಾಜ್‌, ಯೋಗೀಶ್‌, ಸಾರಿಕಾ ಪೂಜಾರಿ, ನೀತು ಡಿಸೋಜಾ, ಪದ್ಮನಾಭ, ಯಶವಂತ್‌ ಮತ್ತಿತರರಿದ್ದರು. 20ರೊಳಗೆ ನೂತನ ಅಧ್ಯಕ್ಷರ ಪದಗ್ರಹಣ

ದ.ಕ. ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪದ್ಮರಾಜ್‌ ಅವರ ಪದಗ್ರಹಣ ಸಮಾರಂಭ ಸೆ.20ರೊಳಗೆ ನಡೆಯಲಿದೆ. ಪಕ್ಷದ ಜವಾಬ್ದಾರಿಯನ್ನು ವಹಿಸುತ್ತಿರುವ ಅವರಿಗೆ ಸಂಪೂರ್ಣ ಸಹಕಾರ ನೀಡಲು ಒಮ್ಮತದ ಅಭಿಪ್ರಾಯಕ್ಕೆ ಬರಲಾಗಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಂಟೂ ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವುದು, ಲೋಕಸಭಾ ಚುನಾವಣೆಯನ್ನೂ ಗೆಲ್ಲುವ ಜತೆಗೆ, ಮುಂಬರುವ ಜಿ.ಪಂ., ತಾಪಂ. ಸೇರಿದಂತೆ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯನ್ನು ನಾವೆಲ್ಲಾ ಜತೆಯಾಗಿ ಎದುರಿಸಲು ಪಕ್ಷದ ಅಧ್ಯಕ್ಷರಿಗೆ ಸಹಕಾರ ನೀಡಿ ಶ್ರಮಿಸಲಿದ್ದೇವೆ ಎಂದು ನಿಕಟಪೂರ್ವ ಅಧ್ಯಕ್ಷ ಹರೀಶ್‌ ಕುಮಾರ್‌ ಹೇಳಿದರು.