ಸಾರಾಂಶ
ಶನಿವಾರದ ಸಭೆಯಲ್ಲಿ ಪಾಸ್ ಎಂದು ಹೊರಹೋಗಿರುವ ಸಭೆಯ ಠರಾವನ್ನು ರದ್ದುಪಡಿಸಬೇಕು. ವಾರದೊಳಗೆ ವಿಶೇಷ ಸಾಮಾನ್ಯಸಭೆ ಕರೆಯಲು ಪ್ರತಿಪಕ್ಷದ ಸದಸ್ಯರು ಮನವಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಡಿ. 30ರಂದು ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬರಬೇಕಿದ್ದ ವಿಷಯಗಳ ಚರ್ಚೆಗೆ ಮತ್ತೊಮ್ಮೆ ವಿಶೇಷ ಸಭೆ ಕರೆಯಬೇಕು ಎಂದು ಆಗ್ರಹಿಸಿ ಪ್ರತಿಪಕ್ಷದ ಸದಸ್ಯರು ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಅವರಿಗೆ ಮನವಿ ಸಲ್ಲಿಸಿದ್ದಾರೆ.ಶನಿವಾರ ಸಾಮಾನ್ಯ ಸಭೆ ಇತ್ತು. ಆದರೆ, ಹೆಚ್ಚಿನ ವಿಷಯ ಪ್ರಸ್ತಾಪಿಸಿ, ಮೊದಲೇ ಪೂರ್ವನಿಯೋಜಿತ ಯೋಜನೆಯಂತೆ ಆಡಳಿತ ಪಕ್ಷದ ಸದಸ್ಯರು ಎಲ್ಲ ವಿಷಯಗಳನ್ನು ಚರ್ಚೆಗೆ ತೆಗೆದುಕೊಳ್ಳದೇ ಪಾಸ್ ಪಾಸ್ ಎನ್ನುತ್ತಾ ಸಭೆಯಿಂದ ಹೊರನಡೆದಿದ್ದಾರೆ. ಇದರಿಂದಾಗಿ ಯಾವುದೇ ವಿಷಯ ಚರ್ಚೆಗೆ ಬರಲಿಲ್ಲ. ಆದಕಾರಣ ಶನಿವಾರದ ಸಭೆಯಲ್ಲಿ ಪಾಸ್ ಎಂದು ಹೊರಹೋಗಿರುವ ಸಭೆಯ ಠರಾವನ್ನು ರದ್ದುಪಡಿಸಬೇಕು. ವಾರದೊಳಗೆ ವಿಶೇಷ ಸಾಮಾನ್ಯಸಭೆ ಕರೆಯಬೇಕು ಎಂದು ಆಗ್ರಹಿಸಿದರು.
ವಿಶೇಷ ಸಭೆಯಲ್ಲಿ ಮಹಾನಗರದಲ್ಲಿನ ಕುಡಿಯುವ ನೀರಿನ ಸಮಸ್ಯೆ, 15ನೇ ಹಣಕಾಸು ಅನುದಾನವನ್ನು ಎಲ್ಲ ವಾರ್ಡ್ಗಳಿಗೆ ಸರಿಸಮನಾಗಿ ಹಂಚಿಕೆ ಮಾಡುವ ಚರ್ಚೆ ನಡೆಸಬೇಕು. ಅದಕ್ಕಾಗಿ ವಾರದೊಳಗೆ ವಿಶೇಷ ಸಾಮಾನ್ಯ ಸಭೆ ಕರೆಯಬೇಕು ಎಂದು ಆಗ್ರಹಿಸಿದ್ದಾರೆ.ಈ ವೇಳೆ ಪ್ರತಿಪಕ್ಷದ ನಾಯಕಿ ಸುವರ್ಣ ಕಲ್ಲಕುಂಟ್ಲಾ, ಸದಸ್ಯರಾದ ಎಂ.ಎಂ. ಭದ್ರಾಪೂರ, ಮಹ್ಮದ ಇಕ್ಬಾಲ್ ನವಲೂರ, ಸಂಥೀಲಕುಮಾರ ಎಸ್., ಇಮ್ರಾನ ಎಲಿಗಾರ, ಶಂಕರಪ್ಪ ಹರಿಜನ, ಮಂಜುನಾಥ ಬುರ್ಲಿ, ಶಿವಕುಮಾರ ರಾಯನಗೌಡ್ರ, ದಿಲ್ಶಾದ್ ಬೇಗಂ ನದಾಫ, ಕವಿತಾ ಕಬ್ಬೇರ, ಸೂರವ್ವ ಬಾಳಗೌಡ ಪಾಟೀಲ, ಸರತಾಜ ಅದವಾನಿ ಹಾಗೂ ದೀಪಾ ನೀರಲಕಟ್ಟಿ ಉಪಸ್ಥಿತರಿದ್ದರು.