ಹೊನ್ನಾವರ ತಾಲೂಕಿನ ಬಂಗಾರಮಕ್ಕಿ ಮಾರುತಿ ಗುರೂಜಿ ಅವರ ನೇತೃತ್ವದಲ್ಲಿ ಪಶ್ಚಿಮ ಘಟ್ಟದ ರಕ್ಷಣೆಗೆ ಜನಾಂದೋಲನದ ಕಾರ‍್ಯಕ್ರಮಕ್ಕೆ ಅರಣ್ಯವಾಸಿಗಳು ಭಾಗವಹಿಸಿ ಬೆಂಬಲಿಸಬೇಕು ಎಂದು ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಕೋರಿದ್ದಾರೆ.

ಹೊನ್ನಾವರ: ತಾಲೂಕಿನ ಬಂಗಾರಮಕ್ಕಿ ಮಾರುತಿ ಗುರೂಜಿ ಅವರ ನೇತೃತ್ವದಲ್ಲಿ ಪಶ್ಚಿಮ ಘಟ್ಟದ ರಕ್ಷಣೆಗೆ ಜನಾಂದೋಲನದ ಕಾರ‍್ಯಕ್ರಮಕ್ಕೆ ಅರಣ್ಯವಾಸಿಗಳು ಭಾಗವಹಿಸಿ ಬೆಂಬಲಿಸಬೇಕು ಎಂದು ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಕೋರಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಹ್ಯಾದ್ರಿ ಜ್ಞಾನ ಹಾಗೂ ಸಂರಕ್ಷಣಾ ಸಮಾವೇಶದ ಅಂಗವಾಗಿ ಮಾ. ೨೯ರಂದು ಮುಂಜಾನೆ ೧೦ ಗಂಟೆಯಿಂದ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಕರೆ ನೀಡಿದ್ದಾರೆ.

ಪಶ್ಚಿಮ ಘಟ್ಟಗಳ ಸಂರಕ್ಷಣೆ ಕೇವಲ ಪ್ರಾದೇಶಿಕ ಕಾಳಜಿಯಲ್ಲ, ಬದಲಾಗಿ ಜೀವವೈವಿಧ್ಯತೆಯನ್ನು ರಕ್ಷಿಸಲು ಮತ್ತು ಹವಾಮಾನ ಬದಲಾವಣೆ ಎದರಿಸಲು ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಜಾಗೃತಿ ಮಾಡುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಜನಾಂದೋಲನದಲ್ಲಿ ಅರಣ್ಯವಾಸಿಗಳು ಭಾಗವಹಿಸುವುದು ಅವಶ್ಯವಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಶ್ಚಿಮ ಘಟ್ಟಗಳಲ್ಲಿನ ಹಾನಿಕಾರಕ ಯೋಜನೆಗಳನ್ನು ನಿಲ್ಲಿಸಲು ಮತ್ತು ಸಮರ್ಪಕವಾದ ಸಂರಕ್ಷಣಾ ತಂತ್ರಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಯನ್ನು ಒತ್ತಾಯಿಸುವ ಉದ್ದೇಶವನ್ನು ಮಾರುತಿ ಗುರೂಜಿ ಹೊಂದಿರುವುದು ಅಭಿನಂದನಾ ಕಾರ್ಯ ಎಂದು ಅವರು ಶ್ಲಾಘಿಸಿದರು.

ಯೋಜನೆಗೆ ೬೪ ಸಾವಿರ ಹೇಕ್ಟೆರ್ ಅರಣ್ಯ ಭೂಮಿ: ಸ್ವಾತಂತ್ರ್ಯ ನಂತರ ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಷ್ಟ್ರೀಯ ಮತ್ತು ಮೂಲಭೂತ ಸೌಕರ‍್ಯಗಳಿಗಾಗಿ ಜಿಲ್ಲೆಯ ಯೋಜನೆಗಳಾದ ಕಾಳಿ ಹೈಡ್ರೋ ಪ್ರಾಜೆಕ್ಟ್‌ಗೆ ೧೫೨೦೫.೩೬೫ ಹೆಕ್ಟೇರ್‌, ಶರಾವತಿ ಟೇಲರೆಸ್ ೭೦೦ ಹೆಕ್ಟೇರ್‌, ಕೈಗಾ ಅಣುಸ್ಥಾವರಕ್ಕೆ ೭೩೨ ಹೆಕ್ಟೇರ್‌, ನೌಕಾ ನೆಲೆ ೨೨೫೯ ಹೆಕ್ಟೇರ್‌, ಕೊಂಕಣ ರೈಲ್ವೆ ೨೭೨.೧೪೦ ಹೆಕ್ಟೇರ್‌, ಹುಬ್ಬಳ್ಳಿ -ಅಂಕೋಲಾ ರೈಲ್ವೆ ಯೋಜನೆಗೆ ಪರಿಸರ ಸೂಕ್ಷ್ಮ ಪ್ರದೇಶ ಹೊರತಾಗಿ ೬೦೦ರಿಂದ ೭೭೦ ಹೆಕ್ಟೇರ್‌, ನಿಯೋಜಿತ ಶರಾವತಿ ಪಂಪ್ಡ್‌ ಸ್ಟೋರೇಜ್‌ ೧೯೩.೩೪ ಹೆಕ್ಟೇರ್‌, ಅಂಕೋಲಾ ಹುಬ್ಬಳ್ಳಿ ರಸ್ತೆ ಅಗಲೀಕರಣಕ್ಕೆ ೪೯.೪೩೧ ಹೆಕ್ಟೇರ್‌, ಕಾಳಿ ಮತ್ತು ಕೈಗಾ ಪುನರ್ ವಸತಿ ಯೋಜನೆಗೆ ೩೧೬.೪೧೦ ಹೆಕ್ಟೇರ್‌, ಕೈಗಾ ೪೦೦ ಕೆಪಿಡಿಸಿ ಪರ‍್ಯಾಯ ವಿದ್ಯುತ್ ಪ್ರಸರಣಾ ಮಾರ್ಗ ನಿರ್ಮಾಣಕ್ಕೆ ೩೩೦ ಹೆಕ್ಟೇರ್‌, ಎನ್ಎಚ್ ೬೬ ಅಗಲೀಕರಣ ೨೦೧೩ರ ಆನಂತರ ೧೫೯.೮೦ ಹೆಕ್ಟೇರ್‌, ನೌಕಾ ನೆಲೆ ಮೊದಲು ಮತ್ತು ಎರಡನೇ ಹಂತ ಅಂದಾಜು ೫೬೮೪ ಹೆಕ್ಟೇರ್‌, ಸಿವಿಲ್ ಏರ್‌ಪೋರ್ಟ್‌, ಬೇಡ್ತಿ ಏತ ನೀರಾವರಿ ಸೇರಿದಂತೆ ೬೪ ಸಾವಿರ ಹೆಕ್ಟೇರ್ ಪ್ರದೇಶವನ್ನು ಅರಣ್ಯೇತರ ಚಟುವಟಿಕೆಗೆ ನೀಡಿರುವುದು ವಿಷಾದಕರ. ವಾಸ್ತವ್ಯ ಮತ್ತು ಜೀವನಕ್ಕಾಗಿ ಜಿಲ್ಲೆಯಲ್ಲಿ ೮೦ ಸಾವಿರ ಅರಣ್ಯವಾಸಿಗಳು ಸಾಗುವಳಿ ಕ್ಷೇತ್ರವಾದ ೫೩ ಸಾವಿರ ಎಕರೆ ಪ್ರದೇಶ ಅರಣ್ಯವಾಸಿಗಳಿಗೆ ಒದಗಿಸದೇ ಇರುವುದು ವಿಷಾದಕರ.

ಯೋಜನೆ ಬೇಡ, ಬದುಕಿಗಾಗಿ ಅರಣ್ಯವಾಸಿಗಳಿಗೆ ಅರಣ್ಯ ಭೂಮಿ ನೀಡುವುದು ಅವಶ್ಯ ಎಂದು ಪ್ರತಿಪಾದಿಸಿರುವ ಅವರು, ಮಾ. ೨೯ರಂದು ಗೇರುಸೊಪ್ಪದಲ್ಲಿ ಮಾರುತಿ ಗುರೂಜಿ ನೇತೃತ್ವದಲ್ಲಿ ಜರುಗುವ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅವರು ಹೇಳಿದರು.