ಮೋದಿ ಪ್ರಧಾನಿ ಆಗೋದನ್ನು ತಪ್ಪಿಸಲು ಆಗದು: ರಮೇಶ ಜಿಗಜಿಣಗಿ

| Published : Apr 09 2024, 12:46 AM IST

ಮೋದಿ ಪ್ರಧಾನಿ ಆಗೋದನ್ನು ತಪ್ಪಿಸಲು ಆಗದು: ರಮೇಶ ಜಿಗಜಿಣಗಿ
Share this Article
  • FB
  • TW
  • Linkdin
  • Email

ಸಾರಾಂಶ

ವಿಕಸಿತ‌ ಭಾರತದ ಸಂಕಲ್ಪ ತೊಟ್ಟಿರುವ ಸಮರ್ಥ ನಾಯಕ ನರೇಂದ್ರ ಮೋದಿಯವರು ಮೂರನೇ ಬಾರಿ ದೇಶದ ಪ್ರಧಾನಿಯಾಗುವುದನ್ನು ತಪ್ಪಿಸಲು ಯಾವ ಶಕ್ತಿಯಿಂದಲೂ‌ ಸಾಧ್ಯವಿಲ್ಲ ಎಂದು ಸಂಸದ ಹಾಗೂ ವಿಜಯಪುರ ಲೋಕಸಭೆ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವಿಕಸಿತ‌ ಭಾರತದ ಸಂಕಲ್ಪ ತೊಟ್ಟಿರುವ ಸಮರ್ಥ ನಾಯಕ ನರೇಂದ್ರ ಮೋದಿಯವರು ಮೂರನೇ ಬಾರಿ ದೇಶದ ಪ್ರಧಾನಿಯಾಗುವುದನ್ನು ತಪ್ಪಿಸಲು ಯಾವ ಶಕ್ತಿಯಿಂದಲೂ‌ ಸಾಧ್ಯವಿಲ್ಲ. ಅವರು 3ನೇ ಬಾರಿ ಪ್ರಧಾನಿಯಾಗಲು ಸಂಸತ್ತಿನಲ್ಲಿ ನಾನು ಅವರ ಪರವಾಗಿ ಮತ್ತೆ ಕೈ ಎತ್ತಬೇಕೆಂಬುದು ನನ್ನ ಕೊನೆಯ ಆಸೆಯಾಗಿದೆ ಎಂದು ಸಂಸದ ಹಾಗೂ ವಿಜಯಪುರ ಲೋಕಸಭೆ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಹೇಳಿದರು.

ಲೋಕಸಭೆ ಚುನಾವಣೆ ಪ್ರಚಾರಾರ್ಥ ಬಬಲೇಶ್ವರ ಮತಕ್ಷೇತ್ರದ ಮಮದಾಪುರ ಬಿಜೆಪಿ ಮಹಾಶಕ್ತಿ‌ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ‌ ಅವರು ಮಾತನಾಡಿದರು.

ದೇಶದ ರಕ್ಷಣೆ ಮತ್ತು ಉಳಿವಿಗಾಗಿ ಈ ಹಿಂದೆ ಎರಡು ಬಾರಿ ಮೋದಿಯವರ ಪರವಾಗಿ ಕೈ ಎತ್ತಲು ವಿಜಯಪುರ ಜನ ನನಗೆ ಅವಕಾಶ ಮಾಡಿಕೊಟ್ಟಿದ್ದೀರಿ. ಇದು ಕೊನೆಯ ಆಸೆ. ಇನ್ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ. ಆದರೆ, ಮೋದಿಯವರನ್ನು 3ನೇ ಸಲ ಪ್ರಧಾನಿ ಮಾಡಲು ಈ ಬಾರಿಯೂ ಕೈ ಎತ್ತಬೇಕು ಎಂಬುದು ನನ್ನ ಕೊನೆಯ ಆಸೆ. ಹಾಗಾಗಿ ಈ ಬಾರಿಯೂ ವಿಜಯಪುರ ಜನತೆ ನನಗೆ ಆಶಿರ್ವದಿಸಬೇಕೆಂಬುದು ನನ್ನ ಪ್ರಾರ್ಥನೆ. ಪ್ರಧಾನಿಯಾಗಲು ಉತ್ಕೃಷ್ಟ ವ್ಯಕ್ತಿತ್ವ ಹೊಂದಿರುವ ಸಮರ್ಥ ನಾಯಕನಾಗಿರಬೇಕು. ಕಾಂಗ್ರೆಸ್ ನವರು ಪಪ್ಪು ಎಂದು ಕರೆಯುವ ಹುಡುಗನನ್ನು ದೇಶದ ಪ್ರಧಾನಿ ಮಾಡಲು ಹೊರಟ್ಟಿದ್ದಾರೆ. ಇಂತಹ ವ್ಯಕ್ತಿಯನ್ನು ಜನ ಒಪ್ಪಲು ಸಾಧ್ಯವೇ ಎಂದು ಜಿಗಜಿಣಗಿ ಪ್ರಶ್ನಿಸಿದರು.

ಈ ಹಿಂದೆ ನಾನು ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿಸಿದರೂ‌ ಜನ ನನ್ನನ್ನು ಲಕ್ಷಾಂತರ‌ ಮತಗಳ ಅಂತರದಿಂದ‌ ಗೆಲ್ಲಿಸಿದರು. ರಾಮಕೃಷ್ಣ ಹೆಗಡೆ ಅವರ ನಿಧನದ ನಂತರ ಬಹಳಷ್ಟು ಜನ ನನಗೆ ಕಾಂಗ್ರೆಸ್ ಪಕ್ಷ ಸೇರಿಕೊಳ್ಳುವಂತೆ ಒತ್ತಡ ಹಾಕಿದರು. ಕಾಂಗ್ರೆಸ್ ಪಕ್ಷ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಅಂತ್ಯಸಂಸ್ಕಾರಕ್ಕೆ ಕೇವಲ 6 ಅಡಿ ಜಾಗ ನೀಡಲಿಲ್ಲ. ಅಂತಹ ಕಾಂಗ್ರೆಸ್ ಪಕ್ಷವನ್ನು ನಾನು ಸೇರುವುದಿಲ್ಲ ಎಂದು ತಿರಸ್ಕರಿಸಿದೆ. ಆಗಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಯಡಿಯೂರಪ್ಪ ಅವರಿಗೆ ಒತ್ತಡ ಹೇರಿ ನಾನು ಬಿಜೆಪಿ ಸೇರಿಕೊಂಡೆ.‌ ಅಂದಿನಿಂದ ಇಂದಿನವರೆಗೂ ಬಿಜೆಪಿಯಲ್ಲಿ ನಿಷ್ಠನಾಗಿದ್ದೇನೆ ಎಂದು ಹೇಳಿದರು.

ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ 2004 ರಿಂದ ವಿಜಯಪುರ ಜನ ಸತತ ಮೂರು ಬಾರಿ ನನ್ನನ್ನು ಆರಿಸಿ ತಂದಿದ್ದೀರಿ. ಹಾಗೆಂದು ನಾನು ಸುಮ್ಮನೆ ಕೂರದೆ ವಿಜಯಪುರ ಮತಕ್ಷೇತ್ರದ ಅಭಿವೃದ್ಧಿಗೆ ಜಿಲ್ಲೆಯಲ್ಲಿ ಈ ಹಿಂದಿನ ಕಾಂಗ್ರೆಸ್ ಸಂಸದರಾರೂ ತರಲಾರದಷ್ಟು ಅನುದಾನ ಕೇಂದ್ರದಿಂದ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ‌. ನಮ್ಮ ಹಾಗೂ ದೇಶದ ರಕ್ಷಣೆಗಾಗಿ ಮೋದಿ‌ ಮತ್ತೊಮ್ಮೆ ಬರಲೇಬೇಕು ಎಂದು ಇಡಿ ದೇಶವೇ ಕೂಗಿ ಹೇಳುತ್ತಿದೆ ಎಂದರು.

ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಮಾತನಾಡಿ, ಅಭಿವೃದ್ಧಿಗೆ ಮತ್ತೊಂದು ಹೆಸರು ಬಿಜೆಪಿ. ಅಧಿಕಾರವಿರಲಿ, ಬಿಡಲಿ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ, ಬಬಲೇಶ್ವರ ಮತಕ್ಷೇತ್ರದ ಮನೆಯ ಮಗನಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಮೋದಿಯವರ ಕೈ ಬಲಪಡಿಸಲು ಬಬಲೇಶ್ವರ ಮತಕ್ಷೇತ್ರ ಹಾಗೂ ಜಿಲ್ಲೆಯ ಜನತೆ ಈ‌ ಬಾರಿಯೂ ರಮೇಶ ಜಿಗಜಿಣಗಿ ಅವರಿಗೆ ಮತ್ತೊಮ್ಮೆ ಆಶಿರ್ವದಿಸಬೇಕೆಂದರು. ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿದರು.

ಜಿಲ್ಲಾ ಚುನಾವಣೆ ಸಂಚಾಲಕ ಅರುಣ ಶಹಾಪುರ, ಮಂಡಲ ಅಧ್ಯಕ್ಷ ಸಂತೋಷ ಕುರದಡ್ಡಿ, ಕ್ಷೇತ್ರ ಸಂಚಾಲಕ ಸಂಜಯ ಪಾಟೀಲ ಕನಮಡಿ, ಕ್ಷೇತ್ರ ಪ್ರಭಾರಿ ಕೃಷ್ಣಾ ಗುನ್ನಾಳಕರ, ಜಿಲ್ಲಾ ಉಪಾಧ್ಯಕ್ಷ ಉಮೇಶ ಕೊಳಕೂರ, ವಿವೇಕ ಡಬ್ಬಿ, ಮಂಡಲ ಪ್ರಧಾನ ಕಾರ್ಯದರ್ಶಿ ಈರಣ್ಣ ರಾವೂರ, ಸಾಬು ಮಾಶ್ಯಾಳ. ಮಂಡಲ ಕಾರ್ಯಕಾರಿಣಿ ಸದಸ್ಯರು, ಮೋರ್ಚಾ ಕಾರ್ಯಕಾರಿಣಿ ಸದಸ್ಯರು, ಮಮದಾಪುರ ಮಹಾಶಕ್ತಿ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.