ಸಾರಾಂಶ
ಗುಂಡ್ಲುಪೇಟೆ: ಆಲ್ಟೋ ಕಾರು ಹಾಗೂ ಪ್ಯಾಸೆಂಜರ್ ಆಟೋ ಮುಖಾಮುಖಿ ಡಿಕ್ಕಿ ಹೊಡೆದು ೮ ಮಂದಿ ಗಾಯಗೊಂಡ ಘಟನೆ ತಾಲೂಕಿನ ಚಿಕ್ಕಹುಂಡಿ-ಚಿಕ್ಕಾಟಿ (ಮೈಸೂರು-ಊಟಿ ಹೆದ್ದಾರಿ) ಗೇಟ್ ನಡುವೆ ನಡೆದಿದೆ. ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಕೊತ್ತೇಗಾಲ ಗ್ರಾಮದ ರಾಮು, ನೇತ್ರಾವತಿ, ನಮೃತ, ಆಯುಷ, ನಂಜನಗೂಡು ತಾಲೂಕಿನ ಗೊಂತಗಾಲ ಹುಂಡಿ ಗ್ರಾಮದ ಕೆಂಚಶೆಟ್ಟಿ, ಕೂಡ್ಲಾಪುರ ಗ್ರಾಮದ ಸಿದ್ದರಾಜು, ಗುಂಡ್ಲುಪೇಟೆ ತಾಲೂಕಿನ ಬೆಳಚಲವಾಡಿ ಗ್ರಾಮದ ನಾಗೇಶ್, ಬೇಗೂರು ಗ್ರಾಮದ ಸಿದ್ದಮ್ಮ ಗಾಯಗೊಂಡಿದ್ದಾರೆ. ಗಾಯಗೊಂಡ ಸಿದ್ದರಾಜುವಿನ ಬಲ ಗಾಲು ತುಂಡಾಗಿದೆ. ಸಿದ್ದಮ್ಮ, ರಾಜುಗೆ ಕೈ ಮೂಳೆ ಮುರಿದಿದೆ. ಕೆಂಚಶೆಟ್ಟಿ, ನೇತ್ರಾವತಿ, ಆಯುಷ್ ತಲೆಗೆ ತೀವ್ರ ಪೆಟ್ಟು ಬಿದ್ದಿದೆ ಎಂದು ಬೇಗೂರು ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಶಿವಸ್ವಾಮಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.ಏನಿದು ಘಟನೆ?: ಪ್ಯಾಸೆಂಜರ್ ಆಟೋದಲ್ಲಿ ೮ ಮಂದಿ ಪ್ರಯಾಣಿಕರಿದ್ದ ನಂಜನಗೂಡು ಕಡೆಗೆ ತೆರಳುತ್ತಿದ್ದಾಗ ಚಿಕ್ಕಹುಂಡಿ-ಚಿಕ್ಕಾಟಿ ಗೇಟ್ ನಡುವೆ ಎದುರು ಬಂದ ಆಲ್ಟೋ ಕಾರು ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತದಲ್ಲಿ ಹೆದ್ದಾರಿಯಲ್ಲಿ ಗಾಯಾಳುಗಳು ಬಿದ್ದು ಒದ್ದಾಡುತ್ತಿದ್ದ ವಿಷಯ ತಿಳಿದ ಬೇಗೂರು ಸರ್ಕಲ್ ಇನ್ಸ್ಪೆಕ್ಟರ್ ವಿ.ಸಿ.ವನರಾಜು, ಸಬ್ ಇನ್ಸ್ಪೆಕ್ಟರ್ ಚರಣ್ ಗೌಡ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿದರು. ಗಾಯಗೊಂಡವರನ್ನು ಸಿಪಿಐ,ಪಿಎಸ್ಐ, ಹೈ ಪಾಟ್ರಾಲ್ ವಾಹನಗಳನ್ನು ಎಲ್ಲಾ ಗಾಯಾಳುಗಳನ್ನು ತುಂಬಿಕೊಂಡು ಬೇಗೂರು ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚು ಗಾಯಗೊಂಡವರನ್ನು ಮೈಸೂರು ಆಸ್ಪತ್ರೆಗೆ ಸಾಗಿಸಿದರು. ಈ ಸಂಬಂಧ ಅಪಘಾತವಾದ ಕಾರು ಹಾಗು ಪ್ಯಾಸೆಂಜರ್ ಆಟೋವನ್ನು ಬೇಗೂರು ಪೊಲೀಸರು ವಶಕ್ಕೆ ಪಡೆದು ಮುಂದಿನ ತನಿಖೆ ನಡೆಸುತ್ತಿದ್ದಾರೆ.