ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮುಂದೆ ಚಲಿಸುತ್ತಿದ್ದ ಕ್ಯಾಂಟರ್‌ಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ್ದು ಮತ್ತೋರ್ವನ ಸ್ಥಿತಿ ಚಿಂತಾಜನಕವಾಗಿರುವ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 44 ಶೆಟ್ಟಿಗೆರೆ ಕ್ರಾಸ್ ಬಳಿ ನಡೆದಿದೆ.

ಮೃತರನ್ನು ರಕ್ಷಿತಾ ರೆಡ್ಡಿ (23), ಪವನ್ ರೆಡ್ಡಿ (30) ಮತ್ತು ಗಾಯಾಳುವನ್ನು ರಾಜಶೇಖರರೆಡ್ಡಿ (32) ಎಂದು ಗುರ್ತಿಸಲಾಗಿದೆ. ಮೃತ ರಕ್ಷಿತಾ ರೆಡ್ಡಿ ಮತ್ತು ರಾಜಶೇಖರರೆಡ್ಡಿ ನವ ವಿವಾಹಿತರಾಗಿದ್ದು, ಪವನ್ ರೆಡ್ಡಿಯು ರಾಜಶೇಖರರೆಡ್ಡಿ ತಮ್ಮ. ಇವರು ಬೆಂಗಳೂರಲ್ಲಿ ವಾಸವಾಗಿದ್ದರು. ಬಳ್ಳಾರಿ ಮೂಲದ ರಾಜಶೇಖರ್ ರೆಡ್ಡಿ ಹಾಗೂ ಆಂಧ್ರದ ಉರುವಕೊಂಡ ಮೂಲದ ರಕ್ಷಿತಾ ರೆಡ್ಡಿ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಮೂವರು ಬಳ್ಳಾರಿಯಲ್ಲಿರುವ ರಾಜಶೇಖರರೆಡ್ಡಿಯ ದೊಡ್ಡಪ್ಪನ ಮನೆಗೆ ಹೋಗುತ್ತಿದ್ದರು ಎನ್ನಲಾಗಿದೆ.

ಮೂವರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 44 ಶೆಟ್ಟಿಗೆರೆ ಕ್ರಾಸ್ ಬಳಿ ಮುಂದೆ ತೆರಳುತ್ತಿದ್ದ ಕ್ಯಾಂಟರ್ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಅರ್ಧಕ್ಕೂ ಹೆಚ್ಚು ಬಾಗ ಕ್ಯಾಂಟರ್ ನಡಿ ಸಿಲುಕಿ ನುಜ್ಜು ಗುಜ್ಜಾಗಿ ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಪಘಾತದ ಸುದ್ದಿ ತಿಳಿದ ತಕ್ಷಣ ಪೇರೆಂಸಂದ್ರ ಪೊಲೀಸ್ ಠಾಣೆಯ ಪಿಎಸ್ಐ ಗುಣವತಿ ತಮ್ಮ ಸಿಬ್ಬಂದಿಯೊಂದಿಗೆ ಘಟನಾ ಸ್ಥಳಕ್ಕೆ ತಲುಪಿ ಸಾರ್ವಜನಿಕರ ಸಹಕಾರದಿಂದ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಿ, ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೇಂಗಳೂರಿಗೆ ರವಾನಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಕ್ಷಿತಾ ರೆಡ್ಡಿ, ಪವನ್ ರೆಡ್ಡಿ ಮೃತರಾದರೆ, ರಾಜಶೇಖರರೆಡ್ಡಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.


ಬೆಂಗಳೂರಿನಿಂದ ಮೃತರ ಶವಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ತರಲಾಗಿದ್ದು, ಆಸ್ಪತ್ರೆಯ ಬಳಿ ಮೃತರ ಕುಟುಂಬಸ್ಥರ ಮತ್ತು ಸಂಬಂದಿಕರ ಅಕ್ರದನ ಮುಗಿಲು ಮುಟ್ಟಿತ್ತು.

ಸಿಕೆಬಿ-4 ಅಪಘಾತದ ರಭಸಕ್ಕೆ ನುಜ್ಜು ಗುಜ್ಜಾಗಿರುವ ಕಾರು