ಮೆದುಳು ಜ್ವರ ಹರಡದಂತೆ ಎಚ್ಚರಿಕೆ ಅಗತ್ಯ

| Published : Nov 29 2024, 01:02 AM IST

ಸಾರಾಂಶ

ಮೆದುಳು ಜ್ವರ ಹರಡದಂತೆ ಎಚ್ಚರಿಕೆ ಅಗತ್ಯ. ಸುತ್ತಮುತ್ತಲು ನೈರ್ಮಲ್ಯ ಕಾಪಾಡಿಕೊಳ್ಳಬೇಕು. ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ವೈದ್ಯರನ್ನು ಕಾಣಬೇಕು ಎಂದು ಪುರಸಭೆ ಅಧ್ಯಕ್ಷ ಬನಶಂಕರಿ ರಘು ಹೇಳಿದ್ದಾರೆ. ಮೆದುಳು ಜ್ವರಕ್ಕೆ ಕಾರಣವಾಗುವ ಕ್ಯೂಲೆಕ್ಸ್ ಸೊಳ್ಳೆಯ ನಿಯಂತ್ರಣ ಅಗತ್ಯವಿದೆ. ಈ ವೈರಾಣು ತಡೆಯಲು ಸ್ವಚ್ಛತೆ ಅಗತ್ಯವಿದೆ, ೧೫ ವರ್ಷದೊಳಗಿನ ಮಕ್ಕಳು ಹೆಚ್ಚಾಗಿ ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ನರ ದೌರ್ಬಲ್ಯ ಹಾಗೂ ಬುದ್ಧಿಮಾಂದ್ಯತೆ ಉಂಟಾಗುವ ಸಾಧ್ಯತೆ ಇದೆ. ೯ ಹಾಗೂ ೧೮ನೇ ತಿಂಗಳಲ್ಲಿ ಮಕ್ಕಳಿಗೆ, ಈ ರೋಗದ ವಿರುದ್ಧ ಮದ್ದನ್ನ ಹಾಕಿಸಬೇಕು ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಮೆದುಳು ಜ್ವರ ಹರಡದಂತೆ ಎಚ್ಚರಿಕೆ ಅಗತ್ಯ. ಸುತ್ತಮುತ್ತಲು ನೈರ್ಮಲ್ಯ ಕಾಪಾಡಿಕೊಳ್ಳಬೇಕು. ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ವೈದ್ಯರನ್ನು ಕಾಣಬೇಕು ಎಂದು ಪುರಸಭೆ ಅಧ್ಯಕ್ಷ ಬನಶಂಕರಿ ರಘು ಹೇಳಿದ್ದಾರೆ.

ಅವರು ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಹಾಗೂ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಮೆದುಳು ಜ್ವರ ನಿಯಂತ್ರಣ ಹಾಗೂ ನಿವಾರಣೆ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೆದುಳು ಜ್ವರಕ್ಕೆ ಕಾರಣವಾಗುವ ಕ್ಯೂಲೆಕ್ಸ್ ಸೊಳ್ಳೆಯ ನಿಯಂತ್ರಣ ಅಗತ್ಯವಿದೆ. ಈ ವೈರಾಣು ತಡೆಯಲು ಸ್ವಚ್ಛತೆ ಅಗತ್ಯವಿದೆ, ನಾಗರಿಕರು ಇಲಾಖೆಯೊಂದಿಗೆ ಸಹಕಾರ ನೀಡಬೇಕು ಎಂದರು. ಕೀಟರೋಗ ಶಾಸ್ತ್ರಜ್ಞರಾದ ರಾಜೇಶ್ ಕುಲಕರ್ಣಿ ಅವರು ಮಾತನಾಡಿ, ೧೫ ವರ್ಷದೊಳಗಿನ ಮಕ್ಕಳು ಹೆಚ್ಚಾಗಿ ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ನರ ದೌರ್ಬಲ್ಯ ಹಾಗೂ ಬುದ್ಧಿಮಾಂದ್ಯತೆ ಉಂಟಾಗುವ ಸಾಧ್ಯತೆ ಇದೆ. ೯ ಹಾಗೂ ೧೮ನೇ ತಿಂಗಳಲ್ಲಿ ಮಕ್ಕಳಿಗೆ, ಈ ರೋಗದ ವಿರುದ್ಧ ಮದ್ದನ್ನ ಹಾಕಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಲಸಿಕೆ ಉಚಿತವಾಗಿ ಲಭ್ಯವಿದೆ ಎಂದರು. ಪಶುಸಂಗೋಪನೆ ಇಲಾಖೆಯ ಅಧಿಕಾರಿ ಡಾ. ಆನಂದ್ ಮಾತನಾಡಿ, ಹಂದಿಗಳ ಗೂಡನ್ನು ಪಟ್ಟಣದ ಮೂರು ಕಿಲೋಮೀಟರ್‌ ದೂರದಲ್ಲಿ ಇಡಬೇಕು ಹಾಗೂ ಸ್ವಚ್ಛತೆಯನ್ನ ಕಾಪಾಡಬೇಕೆಂದರು.

ಸರ್ಕಾರಿ ಆಸ್ಪತ್ರೆಯ ಆಹಾರ ಸಂರಕ್ಷಣಾಧಿಕಾರಿ ಶರತ್ ಮಾತನಾಡಿ, ಆಹಾರ ಪದಾರ್ಥಗಳ ತಯಾರಿ ಮಾರಾಟ, ನಿಯಮದ ಅನುಸಾರ ಆಗಬೇಕು. ಇಲ್ಲದಿದ್ದರೆ ದಂಡ ವಿಧಿಸಲಾಗುವುದು ಎಂದರು.ಜಿಲ್ಲಾ ಆರೋಗ್ಯ ನಿಯಂತ್ರಣ ಅಧಿಕಾರಿ ಅನಿತಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿ ಆಡಿದರು. ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಆನಂದ್, ಸಿಡಿಪಿಒ ಅರ್ಚನಾ, ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಶಿವಲಿಂಗಯ್ಯ, ಪುರಸಭೆ ಉಪಾಧ್ಯಕ್ಷೆ ರಾಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್ ಮುಂತಾದವರಿದ್ದರು.