ಕೆಲವು ವರ್ಷಗಳ ಹಿಂದೆ ನಾವು ಕಲಿಯಲು ಯಾವ ವಿಷಯ ಆಯ್ಕೆ ಮಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಹೊನ್ನಾವರ

ಕೆಲವು ವರ್ಷಗಳ ಹಿಂದೆ ನಾವು ಕಲಿಯಲು ಯಾವ ವಿಷಯ ಆಯ್ಕೆ ಮಾಡಿಕೊಳ್ಳಬೇಕು. ಯಾವುದನ್ನ ಮಾಡಿದರೆ ಭವಿಷ್ಯ ಭದ್ರವಾಗುತ್ತದೆ ಎಂಬ ವಿಚಾರವಾಗಿ ಸರಿಯಾದ ಮಾರ್ಗದರ್ಶನ ನೀಡುವವರೆ ಇರಲಿಲ್ಲ. ಆದರೆ ಈಗಿನ ವಿದ್ಯಾರ್ಥಿಗಳು ಅದೃಷ್ಟವಂತರು ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವಿನಾಯಕ ಅವಧಾನಿ ಅಭಿಪ್ರಾಯ ಪಟ್ಟರು.

ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಉಡುಪಿ ಶಾಖೆಯ ಕರಿಯರ್ ಕೌನ್ಸಲಿಂಗ್ ವತಿಯಿಂದ ಎಂ.ಪಿ.ಇ. ಸೊಸೈಟಿಯ ಎಸ್.ಡಿ.ಎಂ. ಕಾಲೇಜಿನ ಡಾ. ಎನ್.ಆರ್. ನಾಯಕ್ ಬಯಲು ರಂಗಮಂದಿರದಲ್ಲಿ ಗುರುವಾರ ನಡೆದ ಒಂದು ದಿನದ ಬೃಹತ್ ಉದ್ಯೋಗ ಮಾರ್ಗದರ್ಶಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಹಿಂದೆ ಕಲಿಯುವಾಗ ಸರಿಯಾದ ಮಾರ್ಗದರ್ಶಕರು ಇರಲಿಲ್ಲ ಅಲ್ಲದೆ ಕರಿಯರ್ ಗೈಡೆನ್ಸ್ ಬಗೆಗಿನ ಕಾರ್ಯಕ್ರಮ ನಡೆಯುತ್ತಿರಲಿಲ್ಲ. ಯಾರೋ ಹೇಳಿದರು ಎಂದು ನಾವು ಎಸ್ಎಸ್ಎಲ್ಸಿ ಮುಗಿದ ನಂತರ ಒಂದು ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕಾಗಿತ್ತು. ಆದರೆ ಈಗ ಕರಿಯರ್ ಗೈಡೆನ್ಸ್ ಬಗ್ಗೆ ಮಾಹಿತಿ ನೀಡಲು ಸಾಕಷ್ಟು ಅಧಿಕಾರಿಗಳು ಇದ್ದಾರೆ. ಸರ್ಕಾರ ಸಹ ಇಂತಹ ಅಧಿಕಾರಿಗಳನ್ನು ನೇಮಿಸಿದೆ ಎಂದರು. ಅಲ್ಲದೆ ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ನೆರೆಯ ಉಡುಪಿ ಹಾಗೂ ದ.ಕನ್ನಡ ಜಿಲ್ಲೆಗಳಿಗೆ ವಿದ್ಯಾಭ್ಯಾಸಕ್ಕೆ ತೆರಳಿ ಆ ಜಿಲ್ಲೆಗೆ ಹೆಮ್ಮೆ ತರುತ್ತಿದ್ದಾರೆ. ಆದರೆ ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಪ್ರತಿಭಾವಂತರು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಎಂ.ಪಿ.ಇ. ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಕ್ವಿಜ್ ಕಾಂಪಿಟೇಶನ್ ನಡೆಸಲಾಯಿತು. ಎಸ್.ಡಿ.ಎಂ. ಪದವಿ ಪೂರ್ವ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಹಾಗೂ ಪ್ರಭಾತ ನಗರದ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ರನ್ನರ್ ಅಪ್ ಸ್ಥಾನ ಪಡೆದರು.

ಸಿಎ ರಾಘವೇಂದ್ರ ಮೊಗರಾಯ, ಎಸ್.ಡಿ.ಎಂ. ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ. ಡಿ.ಎಲ್. ಹೆಬ್ಬಾರ್, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಂ.ಎಚ್. ಭಟ್ ಉಪಸ್ಥಿತರಿದ್ದರು.

ಐಸಿಎಐ ಮಾಜಿ ಅಧ್ಯಕ್ಷ ಸಿಎ ಪ್ರದೀಪ್ ಜೋಗಿ ಹಾಗೂ ಸಿಎ ರಾಮಚಂದ್ರ ಭಟ್ ಕೆ. ವೃತ್ತಿ ಮಾರ್ಗದರ್ಶನದ ಬಗ್ಗೆ ಮಾಹಿತಿ ನೀಡಿದರು. ಜಿಲ್ಲೆಯ ಪ್ರೌಢಶಾಲೆ, ಪಪೂ ಕಾಲೇಜು ಮತ್ತು ಪದವಿ ಕಾಲೇಜುಗಳಿಂದ ಸುಮಾರು 2500 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಂಗೀತ ವಿಭಾಗದ ಉಪನ್ಯಾಸಕಿ ಸಂಗೀತಾ ನಾಯ್ಕ ಪ್ರಾರ್ಥಿಸಿದರು. ಐಸಿಎಐ ಉಡುಪಿಯ ಮುಖ್ಯಸ್ಥರಾದ ಸಿ.ಎ. ಅರ್ಚನಾ ಮಯ್ಯ ಸ್ವಾಗತಿಸಿದರು. ಡಾ. ಎಂ.ಪಿ. ಕರ್ಕಿ ಇನ್‌ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಆ್ಯಂಡ್‌ ರಿಸರ್ಚ್‌ನ ನಿರ್ದೇಶಕ ಡಾ. ಶಿವರಾಮ ಶಾಸ್ತ್ರಿ ವಂದಿಸಿದರು. ಸಿಎ ಲಕ್ಷ್ಮೀಶ ರಾವ್ ನಿರೂಪಿಸಿದರು.