ನರಗುಂದ: ರೋಗಿಗಳ ಸೇವೆ ಮಾಡಲು ಪುಣ್ಯ ಮಾಡಿರಬೇಕು. ರೋಗಿಗಳನ್ನು ಪ್ರೀತಿಯಿಂದ ಕಾಣಬೇಕೆಂದು ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ. ರೇಣುಕಾ ಕೊರವನವರ ತಿಳಿಸಿದರು.

ಮಂಗಳವಾರ ಪಟ್ಟಣದ ತಾಲೂಕು ಆಸ್ಪತ್ರೆ, ತಾಲೂಕು ಆರೋಗ್ಯ ಅಧಿಕಾರಿಗಳ ಸಹಯೋಗದಲ್ಲಿ ವಿಶ್ವ ದಾದಿಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಜನರಿಗೆ ಯಾವುದೇ ಕಾಯಿಲೆಗಳ ಬಂದರೆ ಅವರು ವೈದ್ಯರ ಹತ್ತಿರ ಚಿಕಿತ್ಸೆಗಾಗಿ ಬರುತ್ತಾರೆ. ರೋಗಿಗಳನ್ನು ಪ್ರೀತಿ, ವಾತ್ಸಲ್ಯದಿಂದ ಚಿಕಿತ್ಸ ನೀಡುವುದು ಅವಶ್ಯವಿದೆ ಎಂದರು.

ಭಾರತಿ ಪಾಟೀಲ ಮಾತನಾಡಿ, ಆಸ್ಪತ್ರೆಯಲ್ಲಿ ದಾದಿಯರ ಸೇವೆ ಅತಿ ಮುಖ್ಯವಾದ ಒಂದು ಅಂಗ. ಪ್ರತಿಯೊಬ್ಬ ರೋಗಿಗಳ ಜತೆಗೆ ನಾವು ಸಂಪರ್ಕದಲ್ಲಿ ಇರುತ್ತೇವೆ. ಕಾಯಿಲೆಗೆ ನಾವು ಔಷಧ ಕೊಡುವ ಜತೆಗೆ ಮಾತೃ ಹೃದಯದ ಪ್ರೀತಿಯಿಂದ ಅವರನ್ನು ನೋಡಿಕೊಂಡರೆ ಸಮಾಜದ ಪ್ರತಿಯೊಬ್ಬ ಜನರು ನಮ್ಮನ್ನು ಗುರುತಿಸುವಂತಹದಾಗುತ್ತದೆ ಎಂದರು.

ದಿನನಿತ್ಯದ ಕರ್ತವ್ಯದಲ್ಲಿ ಯಾವುದೇ ರಜೆಯನ್ನು ತೆಗೆದುಕೊಳ್ಳುವುದೇ ಸೇವೆ ಮಾಡುವ ಯಾವುದಾದರೂ ಒಂದು ವೃತ್ತಿ ಇದ್ದರೆ ಅದು ದಾದಿಯರ ವೃತ್ತಿ ಮಾತ್ರ. ಒಬ್ಬ ವ್ಯಕ್ತಿಗೆ ಔಷಧಿ ಜತೆಗೆ ನಮ್ಮ ಭರವಸೆಯ ಮಾತುಗಳು ಆ ವ್ಯಕ್ತಿಯ ಜೀವನವನ್ನು ಇನ್ನಷ್ಟು ಚೇತರಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದರು.

ಡಾ. ಜಡೇಶ ಭದ್ರಗೌಡರು ಮಾತನಾಡಿ, ಆರೋಗ್ಯ ಇಲಾಖೆಯಲ್ಲಿ ಯಾವುದಾದರೂ ಒಂದು ಸೇವೆ ಅದು ಸಮಾಜ ಹಾಗೂ ಇಲಾಖೆಗೆ ಗೌರವ ತರುವಂತಾದರೂ ಯಾವುದಾದರೂ ಇದ್ದರೆ ಅದು ದಾದಿಯರ ಹುದ್ದೆ ಎಂದರು.


ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಹಿರೇಮಠ ಮಾತನಾಡಿ, ದಿನದ 24 ಗಂಟೆ ಸೇವೆ ಸಲ್ಲಿಸುತ್ತಿರುವ ದಾದಿಯರ ಸೇವೆ ಈಶ್ವರನಿಗೆ ಸಮನಾದ ಸೇವೆ ಎಂದರು.

ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸದ 12 ಜನ ದಾದಿಯರನ್ನು ಗುರುತಿಸಿ ಸನ್ಮಾನಿಸಲಾಯಿತು. ಆರೋಗ್ಯ ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿ ಇದ್ದರು. ಸರೋಜಿನಿ ಬಿರಾದಾರ ಸ್ವಾಗತಿಸಿದರು. ಪ್ರದೀಪ ನಿರೂಪಿಸಿದರು. ಸುರೇಶ ಹಡಪದ ವಂದಿಸಿದರು.