ಸಾರಾಂಶ
ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರ ಪುನರ್ವಸತಿಗೆಂದು ಅರಣ್ಯ ಜಮೀನು ಡಿ ರಿಸರ್ವ್ ಸಂಬಂಧ ನಡೆಸುವ ಜಂಟಿ ಸರ್ವೇ ಒಂದು ವಿಭಿನ್ನ ಮತ್ತು ದೊಡ್ಡ ಕಾರ್ಯವಾಗಿದ್ದು, ನಿಯೋಜಿತ ಅಧಿಕಾರಿ, ಸಿಬ್ಬಂದಿ ಯಾವುದೇ ಒತ್ತಡಕ್ಕೆ ಮಣಿಯದೇ ಸಮರ್ಪಕವಾಗಿ ಈ ಕೆಲಸ ಮಾಡಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚನೆ ನೀಡಿದರು.ನಗರದ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಪುನರ್ವಸತಿ ಸೌಲಭ್ಯ ಕಲ್ಪಿಸಲು, ಅರಣ್ಯ ಜಮೀನನ್ನು ಡಿ-ರಿಸರ್ವ್ ಮಾಡಲು ಜಂಟಿ ಸರ್ವೇ ಕಾರ್ಯ ನಡೆಸುವ ಕುರಿತು ಕಂದಾಯ ಇಲಾಖೆ, ಅರಣ್ಯ ಇಲಾಖೆ, ಸರ್ವೇ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳಿಗೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಶರಾವತಿ ಮುಳಗಡೆ ಸಂತ್ರಸ್ತರ ಪುನರ್ವಸತಿಗೆಂದು ಅರಣ್ಯ ಜಮೀನು ಬಿಡುಗಡೆಗಾಗಿ ಅನುಮತಿ ಕೋರಿ ಕೇಂದ್ರ ಸರ್ಕಾರ ಹಾಗೂ ಸರ್ವೋಚ್ಚ ನ್ಯಾಯಾಲಯದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಜಂಟಿ ತನಿಖೆ ಮತ್ತು ಸರ್ವೇ ವರದಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.ಸಂತ್ರಸ್ತರ ಪುನರ್ವಸತಿಗೆ ಸಂಬಂಧಿಸಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಮೂರು ಹಂತದ ಸಭೆ ನಡೆಸಿದೆ. ಸುಪ್ರೀಂ ಕೋರ್ಟಿನಲ್ಲಿ ಈ ಕುರಿತು ಪ್ರಕರಣ ನಡೆಯುತ್ತಿದೆ. ಜಿಲ್ಲೆಯ ಏಳು ತಾಲೂಕುಗಳಲ್ಲಿ ಸೇರಿ ಒಟ್ಟು 1929 ಎಕರೆ ಪ್ರಸ್ತಾವಿತ ಪ್ರದೇಶದ ಜಂಟಿ ಸರ್ವೇ ನಡೆಯಬೇಕಿದೆ. ಜಂಟಿ ಸರ್ವೇ ಮಾಡಲು ವಿಎ, ಆರ್ಐ, ಡಿಆರ್ಎಫ್ಗಳನ್ನೊಳಗೊಂಡ 42 ತಂಡಗಳನ್ನು ನಿಯೋಜನೆ ಮಾಡಲಾಗಿದೆ. 7 ತಾಲೂಕುಗಳಲ್ಲಿಯೂ ಸಂತ್ರಸ್ತರು ಇದ್ದು, ಸ್ಥಳ ಅಳತೆ ಮಾಡಿ ನಕ್ಷೆ ತಯಾರಿಸಲು ಜಿಲ್ಲೆಗೆ 20 ರೋವರ್ಗಳನ್ನು ನೀಡಲಾಗಿದೆ. ಈ ಬಗ್ಗೆ ತರಬೇತಿ ಸಹ ನೀಡಲಾಗಿದೆ ಎಂದರು.ಪ್ರಸ್ತಾವನೆಯಲ್ಲಿನ ದಾಖಲೆ, ಸ್ಕೆಚ್, ಜಿಪಿಎಸ್ ದತ್ತಾಂಶಗಳನ್ನು ಆಧರಿಸಿ ಪ್ರಸ್ತಾಪಿತ ಬ್ಲಾಕ್ ಹಾಗೂ ಸ.ನಂನಲ್ಲಿರುವ ಬ್ಲಾಕ್ನ ಗಡಿ ಹಾಗೂ ವಿಸ್ತೀರ್ಣವನ್ನು ಭೂಮಾಪಕರುಗಳು ಮೋಜಣಿ ಮಾಡಿ ಡಿಜಿಪಿಎಸ್ ದತ್ತಾಂಶಗಳನ್ನು ಸಂಗ್ರಹಿಸಿ ನಂತರ ಬ್ಲಾಕ್ ಗಡಿಯ ಒಳಗಿರುವ ಪ್ರದೇಶದಲ್ಲಿನ ಭೂ ಅನುಭೋಗದಾರರು, ಅನುಭೋಗದಲ್ಲಿರುವ ಪ್ರದೇಶದ ಹಾಗೂ ವಿಸ್ತೀರ್ಣವನ್ನು ಮೋಜಣಿ ಮಾಡಿಕೊಂಡು ಡಿಜಿಪಿಎಸ್ ದತ್ತಾಂಶಗಳು ಹಾಗೂ ವಿಸ್ತೀರ್ಣದ ವಿವರಗಳನ್ನು ಸಂಗ್ರಹಿಸಿಕೊಂಡು ನಿಯಮಾನುಸಾರ ಕ್ರಮ ವಹಿಸಲಾಗುವುದು ಎಂದು ಮಾಹಿತಿ ನೀಡಿದರು.ಹೊರ ಬೌಂಡರಿಗೆ ಯಾವುದೇ ಬದಲಾವಣೆಗೆ ಅವಕಾಶವಿಲ್ಲ. ಇದು ಸ್ಥಿರವಾಗಿರುತ್ತದೆ. ಅನುಭೋಗದಾರರ ನಿಖರ ವಿವರ ಪಡೆಯಬೇಕು. ಸರ್ವೇ ಮಾಡುವ ವೇಳೆ ಅಧಿಕಾರಿ, ಸಿಬ್ಬಂದಿ ಆದಷ್ಟು ಸಂಬಂಧಿಸಿದ ಗ್ರಾಮದ ಪ್ರಮುಖರ ಜೊತೆ ಮಾತನಾಡಿ ನಂತರ ಕ್ರಮ ವಹಿಸಬೇಕು. ಅನುಭೋಗದಾರರನ್ನು ಗುರುತಿಸಿ ಅವರ ಗುರುತಿನ ಪುರಾವೆಯ ದಾಖಲೆ ಪರಿಶೀಲಿಸಿ ತೆಗೆದುಕೊಳ್ಳಬೇಕು. ಬಹಳ ವರ್ಷಗಳಿಂದ ಇರುವ ಅನುಭೋಗದಾರರ ಬಗ್ಗೆ ಮಹಜರು ಮಾಡಿ ನಿಗದಿತ ನಮೂನೆಗಳಲ್ಲಿ ವಿವರ ತುಂಬಬೇಕು. ಅರಣ್ಯ ಭೂಮಿಯನ್ನು ಗುರುತಿಸಬೇಕು. ಹೊಸ ಒತ್ತುವರಿಗೆ ಅವಕಾಶ ಇಲ್ಲ ಎಂದು ಹೇಳಿದರು. ಇದೊಂದು ದೊಡ್ಡ ಕಾರ್ಯವಾಗಿದ್ದು, ರೆಗ್ಯುಲರ್ ಸರ್ವೇಗಿಂತ ಇದು ವಿಭಿನ್ನವಾಗಿದೆ. ಅಧಿಕಾರಿ, ನೌಕರರು ಸುಮಾರು 60 ವರ್ಷಗಳಿಂದ ಬಾಕಿ ಇರುವ ಈ ಸಮಸ್ಯೆ ಬಗೆಹರಿಯಲು ಶ್ರಮಿಸಬೇಕಿದೆ. ಸಮರ್ಪಕವಾಗಿ ಕಾರ್ಯನಿರ್ವಹಿಸಿ ಉತ್ತಮ ಫಲಿತಾಂಶ ನೀಡಬೇಕು. ಕ್ಷೇತ್ರದಲ್ಲಿ ಯಾವುದೇ ಸಮಸ್ಯೆ ಇದ್ದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು. ಒಂದು ತಿಂಗಳ ಅವಧಿಯಲ್ಲಿ ಈ ಜಂಟಿ ಸರ್ವೇ ಕಾರ್ಯ ಮುಗಿಸಬೇಕು ಎಂದರು.ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹನುಮಂತಪ್ಪ ಮಾತನಾಡಿ, ಈಗಾಗಲೇ ಕ್ಷೇತ್ರ ಮಟ್ಟದ ಜಿಪಿಎಸ್ ಸರ್ವೇ, ಸ್ಕೆಚ್ ಆಗಿದೆ. ಆದರೆ ಈಗ ನಿಖರವಾದ ಡಿಜಿಪಿಎಸ್ ವರದಿ ಹಾಗೂ ಅನುಭೋಗದಾರರ ವಿವರವನ್ನು ಸಂಗ್ರಹಿಸಲು ಜಂಟಿ ಸರ್ವೇ ಆಗಬೇಕಿದ್ದು, ತಂಡವನ್ನು ನೇಮಕ ಮಾಡಲಾಗಿದೆ. ೩೪೧ ಬ್ಲಾಕ್ಗಳನ್ನು ಗುರುತಿಸಿದ್ದು, ಬ್ಲಾಕ್ವಾರು ನಮೂನೆ ತುಂಬುವ ಬಗ್ಗೆ, ಡಿಜಿಪಿಎಸ್ ರೀಡಿಂಗ್ ತೆಗೆದುಕೊಳ್ಳುವ ಬಗೆ, ಸ್ಥಳ ಮಹಜರು ಮಾಡುವ ಕುರಿತು ಹಾಗೂ ಕೇಂದ್ರ ಸರ್ಕಾರಕ್ಕೆ ನಿಖರವಾಗಿ, ತಾಂತ್ರಿಕವಾಗಿ ಪ್ರಸ್ತಾವನೆ ಸಲ್ಲಿಸುವ ಕುರಿತು ಮಾಹಿತಿ ನೀಡಿದರು.ಸರ್ವೇ ಇಲಾಖೆಯಿಂದ ಪಿಪಿಟಿ ಪ್ರದರ್ಶನ ಮಾಡಿ, ಜಂಟಿ ಸರ್ವೇ ನಡೆಸುವ ತಾಂತ್ರಿಕ ಮತ್ತು ಇತರೆ ಅಂಶಗಳ ಬಗ್ಗೆ ವಿವರಣೆ ನೀಡಲಾಯಿತು. ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್, ಪ್ರಸನ್ನಕೃಷ್ಣ ಪಟಗಾರ್, ಮೋಹನ್ ಕುಮಾರ್, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಡಿಡಿಎಲ್ಆರ್ ಆಶಾ, ಎಸಿ ಸತ್ಯನಾರಾಯಣ, ತಾಲೂಕುಗಳ ತಹಸೀಲ್ದಾರರು, ರಾಜಸ್ವ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು, ಅರಣ್ಯ ಮತ್ತು ಸರ್ವೇ ಇಲಾಖೆ ನೌಕರರು ಇತರೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
------------------ಪೋಟೋ: 04ಎಸ್ಎಂಜಿಕೆಪಿ04
ಶಿವಮೊಗ್ಗದಲ್ಲಿ ಶುಕ್ರವಾರ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಪುನರ್ವಸತಿ ಸೌಲಭ್ಯ ಕಲ್ಪಿಸಲು ಅರಣ್ಯ ಜಮೀನನ್ನು ಡಿ-ರಿಸರ್ವ್ ಮಾಡಲು ಜಂಟಿ ಸರ್ವೇ ಕಾರ್ಯ ನಡೆಸುವ ಕುರಿತು ಕಂದಾಯ ಇಲಾಖೆ, ಅರಣ್ಯ ಇಲಾಖೆ, ಸರ್ವೇ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳಿಗೆ ತರಬೇತಿ ಕಾರ್ಯಕ್ರಮ ನಡೆಯಿತು.