ಹಿರಿಯ ಹಿಂದೂ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ರವರ ಮೇಲೆ ಕೋಮು ಪ್ರಚೋದನೆ ಎಂಬ ಕಪೋಲಕಲ್ಪಿತ ಆರೋಪ ಹೊರಿಸಿ ಪ್ರಕರಣ ದಾಖಲಿಸಿರುವುದು, ಉಡುಪಿ ಪರ್ಯಾಯದಲ್ಲಿ ಕೇಸರಿ ಧ್ವಜ ಕುರಿತಾಗಿ ವಿವಾದ ಎಬ್ಬಿಸಿರುವುದು ಕಾಂಗ್ರೆಸಿನ ಹಿಂದೂ ವಿರೋಧಿ ಮನಸ್ಥಿತಿಯನ್ನು ಬಹಿರಂಗ
ಮಂಗಳೂರು: ಹಿರಿಯ ಹಿಂದೂ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ರವರ ಮೇಲೆ ಕೋಮು ಪ್ರಚೋದನೆ ಎಂಬ ಕಪೋಲಕಲ್ಪಿತ ಆರೋಪ ಹೊರಿಸಿ ಪ್ರಕರಣ ದಾಖಲಿಸಿರುವುದು, ಉಡುಪಿ ಪರ್ಯಾಯದಲ್ಲಿ ಕೇಸರಿ ಧ್ವಜ ಕುರಿತಾಗಿ ವಿವಾದ ಎಬ್ಬಿಸಿರುವುದು ಕಾಂಗ್ರೆಸಿನ ಹಿಂದೂ ವಿರೋಧಿ ಮನಸ್ಥಿತಿಯನ್ನು ಬಹಿರಂಗಗೊಳಿಸಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಡಾ. ಕಲ್ಲಡ್ಕ ಪ್ರಭಾಕರ ಭಟ್ ಕಾರ್ಯಕ್ರಮವೊಂದರಲ್ಲಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇತಿಹಾಸ ಹಾಗೂ ಸಮಾಜದಲ್ಲಿ ಪ್ರಸ್ತುತ ನಡೆಯುತ್ತಿರುವ ಅನೇಕ ಗಂಭೀರ ವಿಷಯಗಳ ಬಗ್ಗೆ ಪ್ರಸ್ತಾಪಿಸಿದ್ದರು. ಅದನ್ನೇ ನೆಪವಾಗಿಟ್ಟುಕೊಂಡು ಧರ್ಮಗಳ ಮಧ್ಯೆ ದ್ವೇಷ ಎಂಬ ರಾಜಕೀಯ ಪ್ರೇರಿತ ಪ್ರಕರಣದ ದಾಖಲಿಸಲಾಗಿದೆ. ಈ ಮೂಲಕ ವಾಕ್ ಸ್ವಾತಂತ್ರ್ಯವನ್ನೇ ಹತ್ತಿಕ್ಕಿ ಅಘೋಷಿತ ತುರ್ತುಪರಿಸ್ಥಿತಿ ಹೇರಲಾಗುತ್ತಿದೆ. ಹೇಗಾದರೂ ಮಾಡಿ ಡಾ. ಪ್ರಭಾಕರ್ ಭಟ್ ಅವರನ್ನು ಬಂಧಿಸಿ ತಮ್ಮ ವೋಟ್ ಬ್ಯಾಂಕನ್ನು ಖುಷಿಪಡಿಸುವ ಕಾಂಗ್ರೆಸ್ಸಿನ ಹುನ್ನಾರ ಯಾವುದೇ ಕಾರಣಕ್ಕೂ ಯಶಸ್ವಿಯಾಗುವುದಿಲ್ಲ ಎಂದರು.ಉಡುಪಿ ಪರ್ಯಾಯದ ಕೇಸರಿ ಧ್ವಜ ವಿಷಯದಲ್ಲಿ ಉದ್ದೇಶಪೂರ್ವಕವಾಗಿ ವಿವಾದ ಎಬ್ಬಿಸಿರುವ ಕಾಂಗ್ರೆಸಿಗರು ಈ ಮಣ್ಣಿನ ಮೂಲ ಸಂಸ್ಕೃತಿಯನ್ನೇ ಅವಮಾನಿಸುತ್ತಿದ್ದಾರೆ. ಇದು ಆ ಪಕ್ಷದ ಅವನತಿಯ ಸಂಕೇತ. ಹಿಂದೂ ಧಾರ್ಮಿಕ ಕಾರ್ಯಕ್ರಮದಲ್ಲಿ ಭಗವಾದ್ವಜವಲ್ಲದೆ ಮತ್ತೇನು ಹಾರಬೇಕು? ಪ್ರಜಾಪ್ರಭುತ್ವದ ದೇಗುಲ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದ ಪಕ್ಷದವರಿಗೆ ಬುದ್ಧಿಹೇಳಿಸಿಕೊಳ್ಳುವ ದುರ್ಗತಿ ಹಿಂದೂ ಸಮಾಜಕ್ಕೆ ಬಂದಿಲ್ಲ. ಹಿಂದುತ್ವದ ಭದ್ರಕೋಟೆ ಕರಾವಳಿಯಲ್ಲಿ ಪವಿತ್ರ ಭಗವಾಧ್ವಜ ಹಿಂದೆಯೂ ಹಾರಿದೆ, ಈಗಲೂ ಹಾರುತ್ತಿದೆ, ಮುಂದೆಯೂ ರಾರಾಜಿಸುತ್ತದೆ. ಅದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.