ಸಾರಾಂಶ
ಬೆಳಕು, ಬೆಂಕಿ, ನೀರು, ಗಾಳಿಯಲ್ಲಿ ಅಪಾರ ಶಕ್ತಿ ಇರಬೇಕಾದರೆ, ಧ್ಯಾನದಲ್ಲಿಯೂ ಅಪಾರ ಶಕ್ತಿಯಿದೆ
ನರಗುಂದ: ಜಗತ್ತಿನಲ್ಲಿ ಜಾತಿ ಬೇಧ ಹಾಗೂ ವರ್ಣಬೇಧ ಹೆಚ್ಚಾಗಿದೆ.ಇದಕ್ಕೆ ಭಗವದ್ಗೀತೆ ಪರಿಹಾರ ನೀಡಲಿದೆ ಎಂದು ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಪ್ರಭಕ್ಕನವರ ಹೇಳಿದರು.
ಅವರು ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡ ಭಗವದ್ಗೀತಾ ಜಯಂತಿ ಹಾಗೂ ವಿಶ್ವ ಧ್ಯಾನ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಕೆಟ್ಟ ವಿಚಾರಗಳನ್ನು ಬಿಟ್ಟು ಸಂತೋಷದಾಯಕ ಜೀವನ ನಡೆಸಬೇಕಿದೆ. ನಮ್ಮಲ್ಲಿನ ಮೌಲ್ಯ ಯುವ ಪೀಳಿಗೆಯನ್ನು ಜಾಗೃತಗೊಳಿಸಬೇಕು. ಮಕ್ಕಳು ತಪ್ಪು ಮಾಡಿದಾಗ ತಪ್ಪನ್ನು ತಿದ್ದಿ ಬುದ್ದಿಮಾತನ್ನು ಹೇಳಲೇಬೇಕು. ಸುಮ್ಮನಿದ್ದರೆ ಅದು ನಮ್ಮನ್ನೆ ಬಲಿ ಪಡೆಯುತ್ತದೆ. ಶ್ರದ್ಧೆ, ಭಕ್ತಿ, ಪ್ರೀತಿಯಿಂದ ಪರಮಾತ್ಮನನ್ನು ನೆನಪಿಸಿಕೊಂಡರೆ ಅವನು ನಮ್ಮನ್ನು ಕೈಬಿಡಲ್ಲ. ಭಗವಂತನಿಗೆ ಸತ್ಯವಂತರ ಹೃದಯ ಬೇಕಾಗಿದೆ. ಸತ್ಯದ ದಾರಿಯಲ್ಲಿ ನಡೆದಾಗ ನಮ್ಮ ಬದುಕು ಸುಂದರವಾಗುತ್ತದೆ ಎಂದರು.ಬೆಳಕು, ಬೆಂಕಿ, ನೀರು, ಗಾಳಿಯಲ್ಲಿ ಅಪಾರ ಶಕ್ತಿ ಇರಬೇಕಾದರೆ, ಧ್ಯಾನದಲ್ಲಿಯೂ ಅಪಾರ ಶಕ್ತಿಯಿದೆ. ಧ್ಯಾನದ ಶಕ್ತಿ ತಪಸ್ವಿಗಳಲ್ಲಿ ಕಾಣಬಹುದು. ಹೀಗಾಗಿ ನಾವು ನಿತ್ಯ ಧ್ಯಾನ ಮಾಡುತ್ತಾ ಶಕ್ತಿ ಸಂಪಾಧಿಸಿ ಅಮೃತ ಪಡೆಯಬಹುದೆಂದು ತಿಳಿಸಿದರು.
ಮಂಜುನಾಥ ಬೆಳಗಾವಿ ಮಾತನಾಡಿ, ಒಳ್ಳೆಯದನ್ನು ಪಡೆಯಲು ಸಜ್ಜನರ ಸಂಘದಿಂದ ಮಾತ್ರ ಸಾಧ್ಯ. ಜಗತ್ತಿನಲ್ಲಿ ಒಳ್ಳೆಯ ಕೆಲಸ ಕಾರ್ಯಗಳು ನಡೆಯಬೇಕೆಂದರೆ ಆತ್ಮ ಮತ್ತು ಮನಸ್ಸು ಶುದ್ಧಿಯಾಗಿರಬೇಕು. ಪ್ರಸ್ತುತ ದಿನಮಾನದಲ್ಲಿ ಯುವ ಸಮೂಹವು ಕಡ್ಡಾಯವಾಗಿ ಭಗವದ್ಗೀತೆ ಅಭ್ಯಸಿಸಬೇಕಾಗಿದೆ. ಸಾಮಾಜಿಕ ಸೇವೆಗೆ ಸಜ್ಜನರ ಸಂಘ ಹಾಗೂ ಮಂದಿರಗಳಿಗೆ ಭೇಟಿ ನೀಡುವುದು ಅತೀ ಅವಶ್ಯವಿದೆ ಎಂದರು.ಭಾವನಾ ಮೋಟೆ ಮಾತನಾಡಿ, ದೇಶದಲ್ಲಿನ ಅನೇಕ ಸಮಸ್ಯೆಗಳಿಗೆ ಈ ನೆಲದ ಸಂಸ್ಕೃತಿ ಪೂಜಿಸುವ ಜನರಿಂದಲೇ ಪರಿಹಾರ ಸಿಗಬೇಕಾಗಿದೆ. ಭಾರತೀಯರು ಯಾವ ಮಾರ್ಗದಲ್ಲಿ ಸಾಗುತ್ತಾರೋ ಮುಂದಿನ ಪೀಳಿಗೆಯು ಅದೇ ಮಾರ್ಗದಲ್ಲಿ ಸಾಗುತ್ತದೆ. ರಾಷ್ಟ್ರ ಕಾರ್ಯಕ್ಕೆ ನಾವೆಲ್ಲರೂ ಒಟ್ಟಾಗಿ ಸಾಗಬೇಕಾಗಿದೆ. ವೈಮನಸ್ಸುಗಳನ್ನು ಮರೆತು ಮೌಲ್ಯಯುತ ಶಿಕ್ಷಣ ಮತ್ತು ಸಂಸ್ಕಾರ ಪಡೆದುಕೊಂಡು ಸಾಗಿದರೆ ನಮ್ಮ ಕುಟುಂಬ ಮತ್ತು ದೇಶ ಸದೃಢವಾಗಿರುತ್ತವೆ ಎಂದರು.
ಈ ಸಂದರ್ಭದಲ್ಲಿ ಯಲ್ಲಣ್ಣ ಬೆಳಗಾವಿ, ಕಲ್ಪನಾ ಕುಲಕರ್ಣಿ, ಅನೀತಾ ಪೂಜಾರ, ಹನುಮಂತ ಮಾದರ ಸೇರಿದಂತೆ ಮುಂತಾದವರು ಇದ್ದರು.