ಮಾನವೀಯ ಕೆಲಸ ಮಾಡುವಾಗ ಜಾತಿ ನೋಡಬಾರದು, ಒಳ್ಳೆಯ ಉದ್ದೇಶ ಇಟ್ಟುಕೊಂಡು ಕೆಲಸ ಮಾಡಿದಾಗ ಯಶಸ್ಸು ಸಾಧಿಸಲು ಸಾಧ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಶಿಗ್ಗಾಂವಿ: ಮಾನವೀಯ ಕೆಲಸ ಮಾಡುವಾಗ ಜಾತಿ ನೋಡಬಾರದು, ಒಳ್ಳೆಯ ಉದ್ದೇಶ ಇಟ್ಟುಕೊಂಡು ಕೆಲಸ ಮಾಡಿದಾಗ ಯಶಸ್ಸು ಸಾಧಿಸಲು ಸಾಧ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ಬೊಮ್ಮಾಯಿ ನಿವಾಸದಲ್ಲಿ ಬಸವರಾಜ ಬೊಮ್ಮಾಯಿ ಅವರ ಹುಟ್ಟುಹಬ್ಬದ ಪ್ರಯುಕ್ತ ಎಸ್.ಡಿ.ಎಮ್, ನಾರಾಯಣ ಹಾರ್ಟ್ ಸೆಂಟರ್ ಧಾರವಾಡ ಹಾಗೂ ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆ ಹುಬ್ಬಳ್ಳಿ ಸಂಯುಕ್ತ ಆಶ್ರಯದಲ್ಲಿ ಬುಧವಾರ ಸಂಸದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಭಿಮಾನಿ ಬಳಗದಿಂದ ಆಯೋಜಿಸಲಾದ ಉಚಿತ ಹೃದಯ ಹಾಗೂ ನೇತ್ರ ತಪಾಸಣೆ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಅಭಿಮಾನಿಗಳು, ಕಾರ್ಯಕರ್ತರು ಜನ ಸೇವೆ ಮೂಲಕ ನನ್ನ ಜನ್ಮದಿನವನ್ನು ಅರ್ಥಪೂರ್ಣವಾಗಿಸಿದ್ದಾರೆ. ಆರೋಗ್ಯ ಶಿಬಿರದ ಮೂಲಕ ಆರೋಗ್ಯ ತಪಾಸಣೆ, ಪೌರ ಕಾರ್ಮಿಕರಿಗೆ ಸನ್ಮಾನ ಮಾಡಿ ಅವರ ಸೇವೆಗೆ ಗೌರವ ಸೂಚಿಸಿರುವುದು ಅತ್ಯಂತ ಸಂತೋಷ ತಂದಿದೆ. ಕ್ಷೇತ್ರದ ಜನರ ಋಣ ನನ್ನ ಮೇಲಿದೆ, ಅವರ ಸೇವೆ ಮಾಡಲು ಹಗಲಿರಳು ಶ್ರಮಿಸುತ್ತೇನೆ. ರೈತರ ಕಷ್ಟ ಕಾರ್ಪಣ್ಯಗಳನ್ನು ನಾನು ಕಂಡಿದ್ದೇನೆ ಆದ್ದರಿಂದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತರ ಮಕ್ಕಳಿಗಾಗಿ ವಿದ್ಯಾನಿಧಿ ಎಂಬ ಯೋಜನೆ ಜಾರಿಗೊಳಿಸಿದ್ದು ನನಗೆ ಸಂತೋಷವಿದೆ ಎಂದರು.
ಶಾಸಕನಿದ್ದಾಗ ಶಿಗ್ಗಾಂವ ಸಾರ್ವಜನಿಕ ಆಸ್ಪತ್ರೆಗೆ ಡಯಾಲಿಸಿಸ್ ಸೆಂಟರ್ ತಂದಿದ್ದು, ಅದನ್ನು ಅವಶ್ಯವಿರುವ ಸಾರ್ವಜನಿಕರು ಉಚಿತವಾಗಿ ಬಳಸಿಕೊಳ್ಳುತ್ತಿದ್ದಾರೆ. ದೂರದ ನಗರ ಕೇಂದ್ರಗಳಿಗೆ ಅಲಿಯುವುದು ಹೆಚ್ಚಿನ ಹಣವನ್ನು ವ್ಯಯ ಮಾಡುವದಕ್ಕೆ ಮುಕ್ತಿ ಸಿಕ್ಕಂತಾಗಿದೆ. ಹೀಗಾಗಿ, ನಮ್ಮ ಕ್ಷೇತ್ರದಲ್ಲಿ ನಾವು ಮಾಡಿದ ಕೆಲಸಗಳು ಮಾತಾಡುತ್ತಿವೆ. ಅವಕಾಶವಿದ್ದಾಗ ಜನಹಿತ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ ಮುಂದೆಯೂ ನಿಮ್ಮ ಆಶೀರ್ವಾದವಿರಲಿ ಎಂದರು.ಬೆಳಗ್ಗೆಯಿಂದ ಶಿಬಿರದಲ್ಲಿ ವಿವಿಧ ರಕ್ತ ತಪಾಸಣೆ, ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ಹಲವಾರು ರೋಗಿಗಳಿಗೆ ಚಿಕಿತ್ಸೆ ನೀಡಲಾಯಿತು, ನಗರಸಭೆಯ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಭರತ ಬೊಮ್ಮಾಯಿ, ಬಿಜೆಪಿ ತಾಲೂಕಾಧ್ಯಕ್ಷ ವಿಶ್ವನಾಥ ಹರವಿ, ಮಾಜಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಗಂಗಾಧರ ಸಾತಣ್ಣವರ, ಶೋಭಾ ನಶೀಮಗೌಡ್ರ, ಶಂಕರಗೌಡ ಪೊಲೀಸ್ ಪಾಟೀಲ. ಸಂಗೀತಾ ವಾಲ್ಮೀಕಿ, ದೇವಣ್ಣಾ ಚಾಕಲಬ್ಬಿ, ಮಲ್ಲೇಶಪ್ಪ ಹರಿಜನ, ಕರೆಪ್ಪ ಕಟ್ಟಿಮನಿ, ಹನುಮಂತಪ್ಪ ಮಾದರ, ಸಂಜನಾ ರಾಯ್ಕರ, ಸೇರಿದಂತೆ ಹಲವಾರು ಗಣ್ಯರು, ಕಾರ್ಯಕರ್ತರು ಇದ್ದರು. ರೇಣುಕಗೌಡ ಪಾಟೀಲ ಸ್ವಾಗತಿಸಿದರು.ಕಾಯಕ, ಪರೋಪಕಾರದಿಂದ ಆತ್ಮಶಾಂತಿ
ಹಾವೇರಿ: ಕಾಯಕ ಮತ್ತು ಪರೋಪಕಾರವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಆತ್ಮಶಾಂತಿ ಮತ್ತು ಮನಶಾಂತಿ ದೊರೆಯುತ್ತದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ಇಲ್ಲಿನ ಇಜಾರಿಲಕಮಾಪುರದಲ್ಲಿರುವ ಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ತಮ್ಮ 66ನೇ ಜನ್ಮದಿನೋತ್ಸವದ ಅಂಗವಾಗಿ ಮಕ್ಕಳಿಗೆ ಬಟ್ಟೆ, ಪುಸ್ತಕಗಳನ್ನು ವಿತರಿಸುವ ಮೂಲಕ ಸಿಹಿ ಹಚ್ಚಿ ಜನ್ಮದಿನ ಆಚರಿಸಿ ಮಾತನಾಡಿದರು.
ಹುಟ್ಟು ಸಾವು ನಮ್ಮ ಕೈಯಲ್ಲಿ ಇಲ್ಲ, ಹುಟ್ಟು ಯಾತಕ್ಕಾಗಿ ಎನ್ನುವ ಚಿಂತನೆ ಮಾಡುವ ಶಕ್ತಿಯನ್ನು ಭಗವಂತ ನಮಗೆ ಕೊಟ್ಟಿದ್ದಾನೆ. ಅದನ್ನು ಚಿಂತನೆ ಮಾಡಿದರೆ ನಮ್ಮ ಬದುಕಿನ ದಾರಿ ತಿಳಿಯುತ್ತದೆ. ದುಡಿಮೆಯಲ್ಲಿ ದೇವರಿದ್ದಾನೆ. ದುಡಿಮೆಯಲ್ಲಿ ದೈವ ಇದೆ. ಕಾಯಕಕ್ಕೆ ಯಾವುದೇ ಸಮಯ, ಗಡಿ ಮಿತಿ ಇಲ್ಲ. ಎಲ್ಲಿ ಒಳ್ಳೆಯದಾಗುತ್ತದೆಯೋ ಅಲ್ಲಿ ಬಡವರಿಗೆ ಸಹಾಯ ಆಗುತ್ತದೆ. ಬುದ್ಧಿಮಾಂದ್ಯ ಮಕ್ಕಳಿಗೆ ಅನುಕೂಲ ಆಗುತ್ತದೆ. ಆ ಕೆಲಸವನ್ನು ಮಾಡುವುದೇ ಪರೋಪಕಾರ ಎಂದರು.ಇಲ್ಲಿರುವ ಮಕ್ಕಳು ವಿಶೇಷವಾಗಿರುವ ದೇವರ ಮಕ್ಕಳು. ಅವರನ್ನು ನಾವು ಎಷ್ಟು ಅಂತಕರಣದಿಂದ ನೋಡುತ್ತೇವೆ ಎನ್ನುವುದು ನಮ್ಮ ಪರೀಕ್ಷೆ. ಆ ಪರೀಕ್ಷೆಯಲ್ಲಿ ನಮ್ಮ ಜ್ಯೋತಿ ಸಂಸ್ಥೆ ಅತ್ಯಂತ ಯಶಸ್ವಿಯಾಗಿದೆ. ಇದರಲ್ಲಿ ಭಾಗವಹಿಸಲು ನನಗೂ ಹಾಗೂ ನನ್ನ ಪುತ್ರ ಭರತನಿಗೂ ಅವಕಾಶ ಕಲ್ಪಿಸುವ ಪುಣ್ಯ ಒದಗಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ಯುವ ಮುಖಂಡ ಭರತ ಬೊಮ್ಮಾಯಿ, ಮುಖಂಡರಾದ ಬಸವರಾಜ ಅರಬಗೊಂಡ, ವಿರೂಪಾಕ್ಷಪ್ಪ ಕಡ್ಲಿ, ಸಂಘಟಕರಾದ ನವೀನ ಸವಣೂರ ಇತರರಿದ್ದರು.ಬೊಮ್ಮಾಯಿಗೆ ಜನ್ಮದಿನದ ಶುಭ ಕೋರಿದ ಅಮಿತ್ ಶಾಹಾವೇರಿ:
ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಅವರ 66ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಬಸವರಾಜ ಬೊಮ್ಮಾಯಿ ಅವರಿಗೆ ಶುಭ ಕೋರಿದ್ದಾರೆ. ದೂರವಾಣಿ ಮೂಲಕ ಮಾತನಾಡಿರುವ ಅವರು, ದೇವರು ಆಯಸ್ಸು ಆರೋಗ್ಯ ಕರುಣಿಸಲಿ ಎಂದು ಶುಭ ಕೋರಿದ್ದಾರೆ. ಶುಭಕೋರಿದ ಅಮಿತ್ ಶಾ ಅವರಿಗೆ ಸಂಸದ ಬಸವರಾಜ ಬೊಮ್ಮಾಯಿಯವರು ಧನ್ಯವಾದ ತಿಳಿಸಿದ್ದಾರೆ.