ಸಾರಾಂಶ
ರಾಜ್ಯ ಸರ್ಕಾರ ಅಥವಾ ಶಾಸಕರೇ ಆಗಲಿ ತಮಿಳುನಾಡಿಗೆ ನೀರು ಹರಿಸುತ್ತಿಲ್ಲ. ಈ ಬಗ್ಗೆ ಸತ್ತೇಗಾಲ ಹೆಡ್ವಾರ್ಸ್ ಸ್ಥಳಕ್ಕೆ ಭೇಟಿ ನೀಡಿ ಸ್ವಷ್ಟನೆ ನೀಡಲಾಗುತ್ತಿದೆ. ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ಮೇಲೆ ರೈತ ಸಂಘದ ನಾಯಕರು ಆರೋಪ ಮಾಡುತ್ತಿರುವುದು ಸರಿಯಲ್ಲ. ಬೆಂಗಳೂರು ಮಹಾನಗರಕ್ಕೆ ಕುಡಿಯುವ ನೀರನ್ನು ಬಿಡುಗಡೆ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಕೆಆರ್ಎಸ್ನಿಂದ ಮಳವಳ್ಳಿ, ಮದ್ದೂರು ಹಾಗೂ ಬೆಂಗಳೂರು ಮಹಾನಗರಕ್ಕೆ ಕುಡಿಯುವ ನೀರನ್ನು ಬಿಡುಗಡೆ ಮಾಡಲಾಗಿದೆ ಹೊರತು ತಮಿಳುನಾಡಿಗೆ ಬಿಟ್ಟಿಲ್ಲ ಎಂದು ಡಾ.ರಾಜ್ಕುಮಾರ್ ಕಲಾ ಸಂಘದ ಅಧ್ಯಕ್ಷ ದೊಡ್ಡಯ್ಯ ಹೇಳಿದರು.ತಾಲೂಕಿನ ಶಿವನಸಮುದ್ರದ ಬಳಿಯ ಸತ್ತೇಗಾಲ ಹೆಡ್ವಾರ್ಸ್ ಬಳಿ ಸ್ವಷ್ಟನೆ ನೀಡಿದ ಅವರು, ಕೆಆರ್ಎಸ್ನಿಂದ ತಮಿಳುನಾಡಿಗೆ ಮಳವಳ್ಳಿ ಮೂಲಕವೇ ಹರಿದುಹೋಗಬೇಕಿದೆ. ತಮಿಳುನಾಡಿಗೆ ನೀರು ಹೋಗುತ್ತಿಲ್ಲ ಎನ್ನುವುದಕ್ಕೆ ಸತ್ತೇಗಾಲದ ಹೆಡ್ವಾರ್ಸ್ ಸ್ಥಳವೇ ಸಾಕ್ಷಿಯಾಗಿದೆ ಎಂದರು.
ಕುಡಿಯುವ ನೀರಿಗಾಗಿ ಮಾತ್ರ ಕಾವೇರಿ ನೀರು ಬಿಡಲಾಗುತ್ತಿದೆ ಎನ್ನುವ ಶಾಸಕ ಪಿ.ಎಂ ನರೇಂದ್ರಸ್ವಾಮಿ ಅವರ ಹೇಳಿಕೆ ಸತ್ಯವಾಗಿದೆ. ಕೆಆರ್ಎಸ್ನಿಂದ ಬಿಟ್ಟ ನೀರನ್ನು ಹೆಡ್ವಾರ್ಸ್ ಬಳಿ ಸಂಗ್ರಹಿಸಲಾಗುತ್ತಿದೆ. ಸಾರ್ವಜನಿಕರು ಆತಂಕ ಪಡಬೇಕಾಗಿಲ್ಲ ಎಂದು ತಿಳಿಸಿದರು.ರಾಜ್ಯ ಸರ್ಕಾರ ಅಥವಾ ಶಾಸಕರೇ ಆಗಲಿ ತಮಿಳುನಾಡಿಗೆ ನೀರು ಹರಿಸುತ್ತಿಲ್ಲ. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಸ್ವಷ್ಟನೆ ನೀಡಲಾಗುತ್ತಿದೆ. ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ಮೇಲೆ ರೈತ ಸಂಘದ ನಾಯಕರು ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದರು.
ಪುರಸಭೆ ಸದಸ್ಯ ಶಿವಸ್ವಾಮಿ ಮಾತನಾಡಿ, ರೈತ ಸಂಘದ ನಾಯಕರು ವಾಸ್ತವ ಅರಿತು ಆರೋಪ ಮಾಡಬೇಕು. ಮಂಡ್ಯದಿಂದ ಮಳವಳ್ಳಿಗೆ ಕೇವಲ 40 ಕಿ.ಮೀ ಇದ್ದು, ರೈತ ಸಂಘದ ಮುಖಂಡರು ಆಗಮಿಸಿ ತಮಿಳುನಾಡಿಗೆ ನೀರು ಹೋಗುತ್ತಿದ್ದಿಯೋ ಅಥವಾ ಇಲ್ಲವೋ ಎನ್ನುವುದನ್ನು ಖುದ್ದಾಗಿ ಆಗಮಿಸಿ ಪರಿಶೀಲನೆ ಮಾಡಿ ವಾಸ್ತವಾಂಶವನ್ನು ಮಾತನಾಡಲಿ ಎಂದು ಸಲಹೆ ಮಾಡಿದರು.ಬರಗಾಲದ ಸಂದರ್ಭದಲ್ಲಿ ಮಳವಳ್ಳಿ ಮದ್ದೂರು ಬೆಂಗಳೂರಿಗೆ ಸಮರ್ಪಕವಾಗಿ ನೀರು ಬಿಡುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೆಆರ್ಎಸ್ನಿಂದ ಕುಡಿಯುವ ನೀರಿಗಾಗಿ ನದಿಗೆ ಕಾವೇರಿ ನೀರನ್ನು ಹರಿಸಲಾಗುತ್ತಿದಿಯೋ ಹೊರತು ತಮಿಳುನಾಡಿಗಲ್ಲ ಎಂದು ಹೇಳಿದರು.
ಈ ವೇಳೆ ಮುಖಂಡರಾದ ಜಗದೀಶ್, ಮಹೇಶ್ ಸೇರಿದಂತೆ ಇತರರು ಇದ್ದರು.