ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಇಲ್ಲದೆ ಕೆಆರೆಸ್ ಜಲಾಶಯಕ್ಕೆ ನೀರು ಬರದೆ ಜಲಾಶಯ ಕೂಡ ಭರ್ತಿಯಾಗಿಲ್ಲ ಆದರೂ ಸಮಿತಿ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ನೀಡಿರುವುದು ಸರಿಯಲ್ಲ. ಇಲ್ಲಿನ ರೈತರ ಬೆಳೆಗಳಿಗೆ ನೀರು ಹರಿಸದೆ, ಸರ್ಕಾರ ಕುಡಿಯುವ ಉದ್ದೇಶಕ್ಕೆ ಸಂಗ್ರಹಣೆ ಮಾಡಿಕೊಳ್ಳಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕೆಆರ್ಎಸ್ ಅಣೆಕಟ್ಟಯಿಂದ ತಮಿಳುನಾಡಿಗೆ 15 ದಿನಗಳ ಕಾಲ 12 ಕ್ಯುಸೆಕ್ ನೀರನ್ನು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶವನ್ನು ಖಂಡಿಸಿ ಪಟ್ಟಣದಲ್ಲಿ ರೈತ ಸಂಘಟನೆ ಕಾರ್ಯಕರ್ತರು ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.ಪಟ್ಟಣದ ಕುವೆಂಪು ವೃತ್ತದ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ರೈತ ಸಂಘದ ಅಧ್ಯಕ್ಷ ಶಂಭುಗೌಡ ನೇತೃತ್ವದಲ್ಲಿ ಸೇರಿ ಹೆದ್ದಾರಿಯಲ್ಲಿ ವಾಹನ ತಡೆದು ಸಮಿತಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಇಲ್ಲದೆ ಕೆಆರೆಸ್ ಜಲಾಶಯಕ್ಕೆ ನೀರು ಬರದೆ ಜಲಾಶಯ ಕೂಡ ಭರ್ತಿಯಾಗಿಲ್ಲ ಆದರೂ ಸಮಿತಿ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ನೀಡಿರುವುದು ಸರಿಯಲ್ಲ. ಇಲ್ಲಿನ ರೈತರ ಬೆಳೆಗಳಿಗೆ ನೀರು ಹರಿಸದೆ, ಸರ್ಕಾರ ಕುಡಿಯುವ ಉದ್ದೇಶಕ್ಕೆ ಸಂಗ್ರಹಣೆ ಮಾಡಿಕೊಳ್ಳಲಾಗುತ್ತಿದೆ. ಜಲಾಶಯದಲ್ಲಿ ನೀರಿನ ಸಂಗ್ರಹಣೆ ಪರಿಶೀಲಿಸದೆ ತಕ್ಷಣದಿಂದ ತಮಿಳುನಾಡಿಗೆ ನೀರು ಬಿಡುವ ಆದೇಶ ಮಾಡಿರುವುದು ಇಲ್ಲಿನ ರೈತರಿಗೆ ವಿಷ ಉಣಿಸಿದಂತಾಗಿದೆ ಎಂದು ಕಿಡಿಕಾರಿದರು.ಪ್ರತಿ ಬಾರಿಯೂ ಸಮಿತಿ ತಮಿಳುನಾಡು ಪರವಾಗಿ ಕೆಲಸ ಮಾಡಿದೆ. ಕಳೆದ ತಿಂಗಳಿಂದ ತಮಿಳುನಾಡಿಗೆ ಹರಿಸುತ್ತಾ ಬಂದಿದ್ದರೂ ಕರ್ನಾಟಕದ ಮೇಲೆ ಮಲತಾಯಿ ಧೋರಣೆ ಮಾಡುತ್ತಿರುವ ಸಮಿತಿ ಆದೇಶ ಸರ್ಕಾರ ಧಿಕ್ಕರಿಸಿ ಕರ್ನಾಟಕದ ಜನರ ಪರವಾಗಿ ನಿಲ್ಲಬೇಕು ಎಂದು ಆಗ್ರಹಿಸಿದರು.
ಸರ್ಕಾರ ಕೂಡ ಇಲ್ಲಿನ ನೀರಿನ ಮಾಹಿತಿಯನ್ನು ಸರಿಯಾಗಿ ಸಮಿತಿಗೆ ನೀಡದೆ ತಮಿಳುನಾಡಿಗೆ ನೀರು ಹರಿಸಲು ಮುಂದಾಗುವಂತಿದೆ. ಯಾವುದೇ ಕಾರಣಕ್ಕೂ ಇರುವ ನೀರನ್ನು ತಮಿಳುನಾಡಿಗೆ ಸರ್ಕಾರ ಬಿಡದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ದವೇ ರೈತರು ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ರೈತ ಸಂಘದ ಅಧ್ಯಕ್ಷ ಶಂಭುಗೌಡ, ದೊಡ್ಡಪಾಳ್ಯ ಜಯರಾಮು, ಮರಳಗಾಲ ಕೃಷ್ಣೇಗೌಡ, ಪಾಂಡು, ಬಾಲಕೃಷ್ಣ, ಕರವೇ ಅಧ್ಯಕ್ಷ ಶಂಕರ್ ಚಂದಗಾಲು, ಕರವೇ ಸ್ವಾಮೀಗೌಡ, ತಮ್ಮಣ್ಣ ರೇಡಿಯೋ ರಮೇಶ್, ಕೃಷ್ಣಪ್ಪ, ಮಧು, ಬಿ.ಎಸ್ ರಮೇಶ್, ಸೇರಿದಂತೆ ಇತರ ರೈತ ಮುಖಂಡರು ಹಾಗೂ ಕನ್ನಡಪರ ಸಂಘಟನೆಗಳು ಮುಖಂಡರು ಭಾಗವಹಿಸಿದ್ದರು.