ಸಾರಾಂಶ
ಕನ್ನಡಪ್ರಭ ವಾರ್ತೆ ಕೆರೂರ
ಹಬ್ಬಗಳ ಆಚರಣೆ ವೇಳೆ ಶಾಂತಿ ಕಾಪಾಡಬೇಕು. ಹಬ್ಬಗಳ ಮಹತ್ವ ಪೂರ್ಣವಾಗಿ ಸಂಭ್ರಮಿಸಲು ಶಾಂತಿ ಅಗತ್ಯ ಎಂದು ಪಿಎಸೈ ಆನಂದ ಆದಗೊಂಡ ಹೇಳಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಹೋಳಿ ಹಾಗೂ ರಂಜಾನ್ ಹಬ್ಬದ ನಿಮಿತ್ತ ಕರೆದ ಶಾಂತಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಹೋಳಿ, ರಂಜಾನ್ ಹಬ್ಬಗಳ ಜೊತೆಗೆ ಮಕ್ಕಳ ಪರೀಕ್ಷಾ ದಿನಗಳು ಏಕಕಾಲಕ್ಕೆ ಬಂದಿವೆ. ನಾಗರಿಕರು ಶಾಂತಿ ಸೌಹಾರ್ದತೆಯಿಂದ ಹಬ್ಬಗಳ ಆಚರಿಸಬೇಕು ಎಂದು ಮನವಿ ಮಾಡಿದರು.ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಒದಗಿಸುತ್ತದೆ. ನಾಗರಿಕರು ಇಲಾಖೆಯೊಂದಿಗೆ ಸಹಕರಿಸಬೇಕು. ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಪಕ್ಷದ ಬ್ಯಾನರ್, ಫ್ಲೆಕ್ಸ್, ರಾಜಕೀಯ ಫೋಟೋ ಅಂಟಿಸುವುದು ನಿಷೇಧವಿದೆ. ಕಾನೂನು ಬಾಹಿರ ಚಟುವಟಿಕೆಗೆ ಅವಕಾಶವಿಲ್ಲ. ಅಂಥವರ ಮೇಲೆ ಕಾನೂನು ಕ್ರಮ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಬಿ.ಬಿ.ಸೂಳಿಕೇರಿ, ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಅಶೋಕ ಜಿಗಳೂರ, ಮಮಟಗೇರಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ರಾಮಣ್ಣ ಡೊಳ್ಳಿನ ಮಾತನಾಡಿ, ಇಲ್ಲಿಯವರೆಗೂ ಎಲ್ಲ ಹಬ್ಬವನ್ನು ಶಾಂತಿಯುತವಾಗಿ ಆಚರಿಸುತ್ತ ಬಂದಿದ್ದೇವೆ. ಇನ್ಮುಂದು ಹಬ್ಬಗಳನ್ನು ಸೌಹಾರ್ದಯುತವಾಗಿ ಆಚರಿಸುತ್ತೇವೆ ಎಂದು ಭರವಸೆ ನೀಡಿದರು.ಸಭೆಯಲ್ಲಿ ಉಸ್ಮಾನಸಾಬ್ ಅತ್ತಾರ, ಬಸವರಾಜ ಹರಣಶಿಕಾರಿ, ಉಸ್ಮಾನಸಾಬ್ ಮುಲ್ಲಾ, ಕರೀಮಸಾಬ್ ದೊಡಮನಿ, ರಾಮಣ್ಣ ಕುಂಬಾರಹಳ್ಳಿ, ಗೈಬುಸಾಬ್ ಎಂ.ವಠಾರದ ಸೇರಿದಂತೆ ಅನೇಕ ಗಣ್ಯರು ಹಾಗೂ ಸಿಬ್ಬಂದಿ ಪರಶುರಾಮ ಸೋರಕಟ್ಟಿ, ಎಂ.ಆರ್.ಹೊನ್ನಾನಾಯಕ, ಆರ್.ವಿ.ಬಡೇಖಾನ, ಎ.ಎಂ.ಭಜಂತ್ರಿ ಇದ್ದರು.