ಸಾರಾಂಶ
ಸಾಮರಸ್ಯದ ಸಂಕೇತವಾದ ರಂಜಾನ್ ಹಬ್ಬವನ್ನು ಜಿಲ್ಲಾದ್ಯಂತ ಮುಸ್ಲಿಂ ಬಾಂಧವರು ಆಚರಿಸಿದರು. ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.
ಮಡಿಕೇರಿ : ಸಾಮರಸ್ಯದ ಸಂಕೇತವಾದ ಪವಿತ್ರ ಈದುಲ್ ಫಿತರ್ (ರಂಜಾನ್) ಹಬ್ಬವನ್ನು ಬುಧವಾರ ಜಿಲ್ಲಾದ್ಯಂತ ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿಯೊಂದಿಗೆ ಸಂಭ್ರಮದಿಂದ ಆಚರಿಸಿದರು.
ಮಡಿಕೇರಿ, ವಿರಾಜಪೇಟೆ, ನಾಪೋಕ್ಲು, ಕಡಂಗ, ಕೊಂಡಂಗೇರಿ, ಸಿದ್ದಾಪುರ, ನೆಲ್ಯಾಹುದಿಕೇರಿ, ಕುಶಾಲನಗರ, ಸೇರಿದಂತೆ ಜಿಲ್ಲೆಯದ್ಯಂತವಿರುವ ಮಸೀದಿಗಳಲ್ಲಿ ವಿಷೇಶ ಪ್ರಾರ್ಥನೆಗಳು ನಡೆಯಿತು. ಬೆಳಗ್ಗೆ ಪ್ರಾರ್ಥನಾ ಮಂದಿರಗಳಿಗೆ ತೆರಳಿದ ಮುಸಲ್ಮಾನ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ಹಬ್ಬಗಳು ಭಾವೈಕ್ಯ ದ ಸಂದೇಶವನ್ನು ಸಾರುತ್ತದೆ, ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುವ ನಮ್ಮ ಭಾರತ ಎಂದಿಗೂ ಶಾಂತಿ ನೆಮ್ಮದಿಯನ್ನು ಬಯಸುತ್ತದೆ ಹೊರತು ದ್ವೇಷದ ವಾತಾವರಣವಲ್ಲ ಎಂದು ಫಝಲುಲ್ ರೆಹಮಾನ್ ಹಾಫಿಝ್ ಹೇಳಿದರು.
ನಗರದ ಬದ್ರಿಯಾ ಮಸೀದಿಯಲ್ಲಿ ಈದ್ ನಮಾಝ್ ನೇತೃತ್ವ ವಹಿಸಿದ ನಂತರ ಮಾತನಾಡಿದ ಅವರು, ಪ್ರವಾದಿ ( ಸ) ಅವರು ನೀವು ಎಲ್ಲಿಯವರೆಗೆ ನಿಮ್ಮ ನೆರೆಯವರನ್ನು ಗೌರವಿಸುವುದಿಲ್ಲವೋ ಅಲ್ಲಿಯವರೆಗೆ ಓರ್ವ ಉತ್ತಮ ವಿಶ್ವಾಸಿಯಾಗಲು ಸಾಧ್ಯವಿಲ್ಲ ಎಂದು ಹೇಳಿರುವುದಾಗಿ ಉಲ್ಲೇಖಿಸಿದ ಅವರು ಸಮಾಜದಲ್ಲಿ ಎಲ್ಲರೊಂದಿಗೂ ಸಹೋದರರಂತೆ ಬಾಳುವಂತೆ ಕರೆ ನೀಡಿದರು.ಬಳಿಕ ನಾಡಿನಲ್ಲಿ ಉತ್ತಮ ಮಳೆ ಬೆಳೆ ಹಾಗೂ ಸಮೃದ್ದಿಗಾಗಿ ಸಾಮೂಹಿಕ ಪ್ರಾರ್ಥನೆ ನಡೆಯಿತು.
ಹಬ್ಬದ ಅಂಗವಾಗಿ ನಗರದಲ್ಲಿ ಮೆರವಣಿಗೆ ನಡೆಸಿದ ಮುಸ್ಲಿಂ ಬಾಂಧವರು ಈದ್ಗಾ ಮೈದಾನಕ್ಕೆ ತೆರಳಿ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರಲ್ಲದೆ, ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಮುಂಜಾಗೃತ ಕ್ರಮವಾಗಿ ಅಲ್ಲಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.