ಸಾರಾಂಶ
ಮೂರು ದಶಕಗಳ ಒಳಮೀಸಲಾತಿ ಹೋರಾಟಕ್ಕೆ ಸಂದ ಜಯ
ಕನ್ನಡಪ್ರಭ ವಾರ್ತೆ ಚಾಮರಾಜನಗರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ನೀಡಲಾಗಿರುವ ಮೀಸಲಾತಿ ಒಳಗಡೆಯೇ ಮೀಸಲಾತಿ ಕಲ್ಪಿಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದ್ದು, ಒಳ ಮೀಸಲಾತಿ ಕಾನೂನುಬದ್ಧ ಎಂದು ಹೇಳುವ ಮೂಲಕ ಐತಿಹಾಸಿಕ ತೀರ್ಪು ಪ್ರಕಟಿಸಿರುವುದನ್ನು ಸ್ವಾಗತಿಸಿ ನಗರದಲ್ಲಿ ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಬಸವನಪುರ ರಾಜಶೇಖರ ನೇತೃತ್ವದಲ್ಲಿ ಸಮುದಾಯದ ಮುಖಂಡರು ಸಂಭ್ರಮಾಚರಣೆ ಮಾಡಿದರು.ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ಸ್ವಾಗತಿಸಿ ಸಿಹಿ ವಿತರಿಸಿ ಜೈಕಾರ ಕೂಗಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಬಸವನಪುರ ರಾಜಶೇಖರ ಮಾತನಾಡಿ, ಒಳ ಮೀಸಲಾತಿಯನ್ನು ಎತ್ತಿ ಹಿಡಿಯುವ ಮೂಲಕ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ. ಇದು ಸಮುದಾಯದ ಸುಮಾರು 30 ವರ್ಷಗಳ ಹೋರಾಟಕ್ಕೆ ಸಂದ ಜಯವಾಗಿದೆ. ಸಿದ್ದರಾಮಯ್ಯನವರು ಸುಪ್ರೀಂಕೋರ್ಟ್ ಆದೇಶವನ್ನು ಕೂಡಲೇ ಜಾರಿಗೆ ತಂದು ಸಮುದಾಯದವರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.ಬಹುನೀರೀಕ್ಷೆಯ ಒಳ ಮೀಸಲಾತಿ ಪ್ರಕರಣಕ್ಕೆ ಕೊನೆಗೂ ತೆರೆ ಬಿದ್ದಿದೆ. 6:1 ಬಹುಮತದೊಂದಿಗೆ ರಾಜ್ಯಗಳು ಒಳ ಮೀಸಲಾತಿ ನೀಡುವ ಹಕ್ಕನ್ನು ಹೊಂದಿವೆ ಎಂದು ತೀರ್ಪು ನೀಡಿದೆ. ಉದ್ಯೋಗ ಮತ್ತು ಪ್ರವೇಶ ಪರೀಕ್ಷೆಗಳಲ್ಲಿ ಜಾತಿವಾರು ಉಪವರ್ಗೀಕರಣ ಮಾಡಲು ರಾಜ್ಯಕ್ಕೆ ಅಧಿಕಾರವಿದೆ ಎಂದು ಕೋರ್ಟ್ ಹೇಳಿದೆ. ಸುಪ್ರೀಂ ಕೋರ್ಟಿನ 7 ನ್ಯಾಯಾಧೀಶರ ಪೀಠವು 6:1 ಬಹುಮತದಿಂದ, ಮೀಸಲಾತಿ ವರ್ಗಗಳ ಅಂದರೆ ಪರಿಶಿಷ್ಟ ಜಾತಿಗಳು/ಪರಿಶಿಷ್ಟ ಪಂಗಡಗಳ ಉಪ ವರ್ಗೀಕರಣಕ್ಕೆ ಅನುಮತಿಸಿದೆ. ಇದು ಸ್ವಾಗತಾರ್ಹ ಎಂದು ಹರ್ಷ ವ್ಯಕ್ತಪಡಿಸಿದರು.ಸಂಭ್ರಮಾಚರಣೆಯಲ್ಲಿ ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ಉಪಾಧ್ಯಕ್ಷ ಎಸ್. ಬಸವರಾಜು, ಕೆಎಂಎಫ್ ನಿವೃತ್ತ ಅಧಿಕಾರಿ ಜವರಯ್ಯ ಮುಖಂಡರಾದ ಕೆಸ್ತೂರು ಮರಪ್ಪ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಮಾದಿಗ ಮಹಾಸಭಾ ಅಧ್ಯಕ್ಷ ರಾಮಸಮುದ್ರ ಎಂ. ಶಿವಕುಮಾರ್, ವೆಲ್ಡಿಂಗ್ ಲಿಂಗರಾಜು, ಮಳವಳ್ಳಿ ಮಹದೇವಯ್ಯ, ಗುರುಲಿಂಗಯ್ಯ, ಕೆ. ಜಗದೀಶ್, ವೈ.ಎಸ್. ನಾಗರಾಜು, ಪಾಪಣ್ಣ, ನಾರಾಯಣ, ಬಿಸಲವಾಡಿ ಸಿದ್ದರಾಜು, ಡ್ಯಾನ್ಸ್ ಬಸವರಾಜು, ಮುಳ್ಳೂರು ಮಂಜು, ಸುಂದರ್, ರವಿ, ಮರಿಸ್ವಾಮಿ, ಮಹೇಶ್, ಗ್ರಾ.ಪಂ. ಅಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ನಿಂಗರಾಜು, ಚಿನ್ನಸ್ವಾಮಿ, ಶಿವಯ್ಯ, ಮಾಜಿ ಸದಸ್ಯ ಸಂತೇಮರಹಳ್ಳಿ ಆರ್.ರಾಜು, ಮುಖಂಡರಾದ ರಾಜೇಶ್, ಸಂತೋಷ್, ಮುರುಗೇಶ್, ಸಿ.ಎಚ್. ರಂಗಸ್ವಾಮಿ, ಸಿ.ಎಚ್. ಸುರೇಶ್, ಕಿಲಗೆರೆ ವೆಂಕಟೇಶ್. ಚನ್ನಬಸವಯ್ಯ, ಬನ್ನಿಸಾರಿಗೆ ರಾಜು, ಮಹದೇವಸ್ವಾಮಿ, ಲಿಂಗಣ್ಣ ಇತರರು ಹಾಜರಿದ್ದರು.