ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ತಾಲೂಕಿನ ವ್ಯಾಪ್ತಿಯ ಬಹುತೇಕ ಎಲ್ಲ ಅರ್ಹ ಮತದಾರರಿಗೆ ಗಣತಿ ನಮೂನೆ (ಎನುಮರೇಷನ್ ಫಾರಂ) ತಲುಪಿಸಲಾಗಿದೆ ಎಂದು ಶೃಂಗೇರಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ (ಎಆರ್‌ಒ) ಪೂರ್ಣಿಮಾ ಮಾಹಿತಿ ನೀಡಿದರು.

ಶುಕ್ರವಾರ ತಾಲೂಕು ಆಡಳಿತ ಸೌಧದಲ್ಲಿ ತಹಸೀಲ್ದಾರ್ ಡಾ. ನೂರುಲ್ ಹುದಾ ಅಧ್ಯಕ್ಷತೆಯಲ್ಲಿ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಅಧ್ಯಕ್ಷರೊಂದಿಗೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಾಹಿತಿ ನೀಡಲು ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.

ತಾಲೂಕಿನ ವ್ಯಾಪ್ತಿಯಲ್ಲಿ 55,823 ಮತದಾರರಿದ್ದು ಎಲ್ಲಾ ಮತದಾರ ಗಣತಿ ನಮೂನೆ ದ್ವಿಪ್ರತಿಯಲ್ಲಿ ಬಂದಿದ್ದು, ಇದರಲ್ಲಿ 54,0,77 ಮತದಾರರಿಗೆ ಗಣತಿ ನಮೂನೆ ಬಿಎಲ್‌ಒಗಳ ಮೂಲಕ ಮನೆಗಳಿಗೆ ತಲುಪಿಸಲಾಗಿದೆ. ಕುಗ್ರಾಮಗಳು, ಗುಡ್ಡಗಾಡು ಪ್ರದೇಶಗಳು ಮತ್ತಿತರ ಸ್ಥಳಗಳಿಗೆ ಹೋಗಲು ಸಾಧ್ಯವಾಗದ ಪ್ರದೇಶದಲ್ಲಿರುವವರ 1046 ನಮೂನೆಗಳನ್ನು ವಿತರಿಸಲಾಗಿಲ್ಲ. ಈ ಸ್ಥಳಗಳಿಗೆ ಭೇಟಿ ನೀಡಿ ಅಂದೇ ಮಾಹಿತಿ ತುಂಬಿಸಿಕೊಂಡು ಬರಲಾಗುವುದು . ಮಾಹಿತಿ ತುಂಬಿಸಿ ವಾಪಾಸು ನೀಡಿರುವ 12,683 ಗಣತಿ ನಮೂನೆಗಳನ್ನು ಡಿಜಿಟಲಿಕರಣ ಮಾಡಲಾಗಿದೆ. ಎರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರಿರುವವರು, ಬೇರೆ ಊರಿಗೆ ವರ್ಗಾವಣೆಯಾಗಿರುವವರು, ಮರಣಹೊಂದಿದವರು ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗುವುದು. ಬಿಎಲ್‌ಒಗಳ ಜತೆಗೆ ರಾಜಕೀಯ ಪಕ್ಷದಿಂದ ನೋಂದಾಯಿಸಿರುವ ಬಿಎಲ್‌ಒ-2ಗಳು ಮಾಹಿತಿ ತುಂಬಲು, ಮಾಹಿತಿ ತುಂಬಿದ ನಮೂನೆಗಳನ್ನು ಹಿಂದಿರುಗಿಸಲು ಸಹಾಯ ಮಾಡಬೇಕು. ಇದರಿಂದ ಭರ್ತಿಯಾದ ನಮೂನೆಗಳನ್ನು ಶೀಘ್ರವಾಗಿ ಡಿಜಿಟಲೀಕರಣ ಮಾಡಲು ಸಾಧ್ಯವಾಗುತ್ತದೆ. ಬಿಎಲ್‌ಒಗಳ ಜತೆ ರಾಜಕೀಯ ಪಕ್ಷದಿಂದ ನೋಂದಾಯಿಸಿರುವ ಬಿಎಲ್‌ಒ-2ಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಜು.29 ರೊಳಗೆ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಳ್ಳಬೇಕಾಗಿದೆ. ಶೀಘ್ರವಾಗಿ ಪ್ರಕ್ರಿಯೆ ಪೂರ್ಣಗೊಳಿಸಲು ಸಹಕಾರ ನೀಡಬೇಕು ಎಂದರು.

ತಹಸೀಲ್ದಾರ್ ನೂರುಲ್ ಹುದಾ ಮಾತನಾಡಿ, ಮತದಾರರಿಗೆ ತಲುಪಿಸಿರುವ ಭರ್ತಿ ಮಾಡಿದ ಗಣತಿ ನಮೂನೆಯನ್ನು ಹಿಂದಕ್ಕೆ ಪಡೆಯಲು ನೀರುಗಂಟಿಗಳು, ಕಂದಾಯ ಇಲಾಖೆ ಸಿಬ್ಬಂದಿ ಸೇರಿದಂತೆ ಎಲ್ಲರ ಸಹಾಯ ಪಡೆದುಕೊಳ್ಳಲಾಗುತ್ತಿದೆ. ಶೇ.21ರಷ್ಟು ನಮೂನೆಗಳ ಮಾಹಿತಿಯನ್ನು ಡಿಜಿಟಲೀಕರಣ ಮಾಡಲಾಗಿದೆ. ಯಾವುದೇ ಸಮಸ್ಯೆಯಿದ್ದರೂ ಕೂಡಲೇ ಗಮನಕ್ಕೆ ತರಬೇಕು ಎಂದರು.


ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಂ.ಅರುಣ್ ಕುಮಾರ್ ಮಾತನಾಡಿ, ಮೆಣಸೂರು ಗ್ರಾಮದ ವ್ಯಾಪ್ತಿಯಲ್ಲಿ ಎಸ್ ಐ ಆರ್ ಪ್ರಕ್ರಿಯೆ ವೇಗವಾಗಿ ನಡೆಯುತ್ತಿಲ್ಲ. ಕೆಲವರಿಗೆ ಗಣತಿ ನಮೂನೆ ಇನ್ನೂ ತಲುಪಿಲ್ಲ ಎಂಬ ದೂರು ಬಂದಿದೆ. ಈ ಬಗ್ಗೆ ಪರಿಶೀಲಿಸಬೇಕು ಎಂದರು.

ತಾಲೂಕು ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್, ತಾಲೂಕು ಜೆಡಿಎಸ್ ಘಟಕದ ಕಾರ್ಯದರ್ಶಿ ವಿಜಯನ್, ಮುಖಂಡ ಚಿನ್ನಯ್ಯಗೌಡ, ಚುನಾವಣಾ ಶಿರಸ್ತೇದಾರ್ ವೇಣುಗೋಪಾಲ್‌ ಇದ್ದರು.