ಮಹದಾಯಿ ಯೋಜನಗೆ ರಾಜ್ಯ ಸರ್ಕಾರ ಈಗಾಗಲೇ ಟೆಂಡರ್‌ ಕರೆದು ಗುತ್ತಿಗೆದಾರರಿಗೆ ಕಾರ್ಯಾದೇಶ ಕೂಡ ನೀಡಲಾಗಿದೆ. ಆದರೆ, ಕೇಂದ್ರದಿಂದ ಅನುಮತಿಯೇ ಸಿಗುತ್ತಿಲ್ಲ.

ನವಲಗುಂದ:

ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕು ಎಂದು ಶಾಸಕ ಎನ್‌.ಎಚ್‌. ಕೋನರಡ್ಡಿ ಆಗ್ರಹಿಸಿದರು.

ಸ್ಥಳೀಯ ಮಾಡಲ್ ಹೈಸ್ಕೂಲ್ ಮೈದಾನದಲ್ಲಿ ತಾಲೂಕಾಡಳಿತದಿಂದ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವದಲ್ಲಿ ಮಾತನಾಡಿದ ಅವರು, ಮಹದಾಯಿ ಯೋಜನಗೆ ರಾಜ್ಯ ಸರ್ಕಾರ ಈಗಾಗಲೇ ಟೆಂಡರ್‌ ಕರೆದು ಗುತ್ತಿಗೆದಾರರಿಗೆ ಕಾರ್ಯಾದೇಶ ಕೂಡ ನೀಡಲಾಗಿದೆ. ಆದರೆ, ಕೇಂದ್ರದಿಂದ ಅನುಮತಿಯೇ ಸಿಗುತ್ತಿಲ್ಲ. ಅನುಮತಿ ಸಿಕ್ಕ ತಕ್ಷಣ ಕಾಮಗಾರಿ ಆರಂಭಿಸಲಾಗುವುದು. ಕೇಂದ್ರ ಸರ್ಕಾರ ತಕ್ಷಣವೇ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.

ಮುಂಗಾರು ಮಳೆ ಕೊರತೆಯಿಂದಾಗಿ ಅಪಾರ ಹಾನಿಯಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪರಿಹಾರ ಬಿಡುಗಡೆಗಾಗಿ ಒತ್ತಾಯಿಸುವ ಮೂಲಕ ರೈತರ ಪರವಾಗಿ ಧ್ವನಿಯಾಗಿದ್ದೇನೆ ಎಂದರು.

ಕ್ಷೇತ್ರದಲ್ಲಿ ಹಾಳಾದ ರಸ್ತೆಗಳನ್ನು ಹಂತ-ಹಂತವಾಗಿ ಅಭಿವೃದ್ಧಿಪಡಿಸಲು ₹ 100 ಕೋಟಿ, ತಡಹಾಳ-ನರಗುಂದ ನಡುವೆ ಇರುವ ಬೆಣ್ಣೆಹಳ್ಳ ಹಾಗೂ ದೊಡ್ಡಹಳ್ಳಕ್ಕೆ ₹ 80 ಕೋಟಿ ವೆಚ್ಚದಲ್ಲಿ ನೂತನ ಸೇತುವೆ ನಿರ್ಮಿಸಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದ ಅವರು, ಬೆಣ್ಣಿಹಳ್ಳ ಪ್ರವಾಹ ನಿಯಂತ್ರಣ ಕಾಮಗಾರಿಗೆ ₹ 200 ಕೋಟಿ ಹೂಳೆತ್ತುವ ಹಾಗೂ ತಡೆಗೋಡೆ, ಸೇತುವೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗಿದೆ. ತುಪ್ಪರಿಹಳ್ಳದ 2ನೇ ಹಂತದ ಕಾಮಗಾರಿಗೆ ₹ 162 ಕೋಟಿ ಅನುದಾನದಲ್ಲಿ ಈಗಾಗಲೇ ಟೆಂಡರ್‌ ಕರೆಯಾಗಿದ್ದು ಒಂದು ತಿಂಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದರು.

ತಹಸೀಲ್ದಾರ್‌ ಸುಧೀರ ಸಾಹುಕಾರ, ಅಧಿಕಾರಗಳಾದ ರವಿಂದ್ರಗೌಡ ಪಾಟೀಲ, ಎಸ್.ಪಿ. ಪೂಜಾರ, ರವಿಕುಮಾರ ಕಪ್ಪತನವರ, ಜನಾರ್ದನ ಬಿ, ಅರ್ಜುನ ಕೆಂಬೋಗಿ, ಸೋಮನಗೌಡ ಪಾಟೀಲ, ರಾಘವೇಂದ್ರ ಜಾಲಗಾರ, ಎಸ್‌.ಎಸ್. ಲಂಗೋಟಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು