ಸಿರಿಧಾನ್ಯ ಭಾರತೀಯರ ಸಾಂಪ್ರದಾಯಿಕ ಆಹಾರ

| Published : Apr 25 2024, 01:07 AM IST

ಸಾರಾಂಶ

ಸಿರಿಧಾನ್ಯಗಳ ಮಹತ್ವದ ಅರಿವು ಮೂಡಿಸುವ ಉದ್ದೇಶದಿಂದ ಮಹಿಳೆಯರಿಗಾಗಿ ಸಿರಿಧಾನ್ಯ ಅಡುಗೆ ತಯಾರಿಕೆಯ ಸ್ಪರ್ಧೆ

ಗದಗ: ಭಾರತಕ್ಕೆ ಬ್ರಿಟಿಷರ ಆಗಮನದ ನಂತರ ನಾವು ಮೈದಾ,ಗೋದಿಯಂಥ ಪಾಶ್ಚಾತ್ಯ ಆಹಾರದ ಕಡೆಗೆ ವಾಲಿದ್ದೇವೆ, ಆದರೆ ಅವರ ಆಗಮನಕ್ಕೂ ಮೊದಲು ಸಿರಿಧಾನ್ಯಗಳೇ ಭಾರತೀಯರ ಆಹಾರವಾಗಿದ್ದವು ಎಂದು ಕೆಎಲ್ಇ ಮಹಾವಿದ್ಯಾಲಯದ ಉಪನ್ಯಾಸಕಿ ವೀಣಾ ತಿರ್ಲಾಪೂರ ಹೇಳಿದರು.

ಅವರು ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ತೋಂಟದಾರ್ಯ ಮಠದ ಜಾತ್ರಾಮಹೋತ್ಸವದ ಅಂಗವಾಗಿ ಮಹಿಳೆಯರಿಗಾಗಿ ಜರುಗಿದ ಸಿರಿಧಾನ್ಯಗಳ ಅಡುಗೆ ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಭಾಗವಹಿಸಿ ಮಾತನಾಡಿ, ಪಾಶ್ಚಾತ್ಯ ಖಾದ್ಯಗಳಿಂದ ಪ್ರಭಾವಿತರಾಗಿ ನಮ್ಮ ಮೂಲ ಆಹಾರವಾದ ಸಿರಿಧಾನ್ಯಗಳನ್ನು ನಾವು ಕಡೆಗಣಿಸಿದ ಫಲವಾಗಿ ಆಧುನಿಕ ದಿನಗಳಲ್ಲಿ ರೋಗಗಳು ಹೆಚ್ಚಾಗುತ್ತಿದ್ದು, ರೋಗಮುಕ್ತ-ಆರೋಗ್ಯಕರ ಜೀವನಕ್ಕೆ ಸಿರಿಧಾನ್ಯಗಳ ಬಳಕೆ ಅವಶ್ಯಕ. ಶ್ರೀಮಠದ ಜಾತ್ರೆಯು ತನ್ನ ಸಾಮಾಜಿಕ ಕಾಳಜಿಗೆ ಹೆಸರುವಾಸಿಯಾಗಿದ್ದು, ಈ ಬಾರಿ ಸಿರಿಧಾನ್ಯಗಳ ಮಹತ್ವದ ಅರಿವು ಮೂಡಿಸುವ ಉದ್ದೇಶದಿಂದ ಮಹಿಳೆಯರಿಗಾಗಿ ಸಿರಿಧಾನ್ಯ ಅಡುಗೆ ತಯಾರಿಕೆಯ ಸ್ಪರ್ಧೆ ಆಯೋಜಿಸಿದ್ದು ಶ್ಲಾಘನೀಯವಾಗಿದೆ ಎಂದರು.

ಇನ್ನೋರ್ವ ನಿರ್ಣಾಯಕ ಅನುಸೂಯಾ ದೇವಾಂಗಮಠ ಮಾತನಾಡಿ, ಅಡುಗೆ ಹೆಣ್ಣಿಗೆ ದಥವದತ್ತವಾಗಿ ಒಲಿದು ಬಂದಿದ್ದು, ಇತ್ತೀಚಿನ ದಿನಗಳಲ್ಲಿ ಮಹಿಳೆ ಅಡುಗೆಕೋಣೆ ಮೀರಿ ಅನೇಕ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವುದು ವಿಶೇಷ. ಸ್ಪರ್ಧಾಳುಗಳೆಲ್ಲರೂ ಸಿರಿಧಾನ್ಯ ಬಳಸಿ ರುಚಿಯಾದ ಅಡುಗೆ ಮಾಡಿದ್ದು, ಯಾರಿಗೆ ಬಹುಮಾನ ನೀಡಬೇಕು ಎಂಬುದೇ ಜಿಜ್ಞಾಸೆಯಾಗಿದೆ.ಇಂತಹ ಅರ್ಥಪೂರ್ಣ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯವೇ ವಿನಃ ಗೆಲ್ಲುವುದಷ್ಟೇ ಅಲ್ಲ ಎಂದರು.

ಸಿರಿಧಾನ್ಯಗಳ ಸಿಹಿ ಅಡುಗೆ ತಯಾರಿಕೆಯಲ್ಲಿ ಸುಧಾ ಕೆರೂರ ಪ್ರಥಮ, ವಿದ್ಯಾ ಗಂಜಿಹಾಳ ದ್ವಿತೀಯ, ಲತಾ ಮಾನೆ ತೃತೀಯ ಸ್ಥಾನ ಪಡೆದರೆ ಸಿರಿಧಾನ್ಯಗಳ ಖಾರದ ಅಡುಗೆಯಲ್ಲಿ ಸುಮಲತಾ ಕೋರಿಶೆಟ್ಟರ ಪ್ರಥಮ, ವಿದ್ಯಾ ಗಂಜಿಹಾಳ ದ್ವಿತೀಯ, ರತ್ನಕ್ಕ ತೆಲ್ಲೂರ ತೃತೀಯ ಸ್ಥಾನ ಪಡೆದರು.

ಈ ಸಂದರ್ಭದಲ್ಲಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಕೆ.ಎಚ್. ಬೇಲೂರ, ಉಪಾಧ್ಯಕ್ಷ ಶ್ರೀದೇವಿ ಶೆಟ್ಟರ್, ಕಾರ್ಯದರ್ಶಿ ಪ್ರವೀಣ ವಾರಕರ, ಶ್ರೀಮಠದ ಮ್ಯಾನೇಜರ್ ಎಂ.ಎಸ್ .ಅಂಗಡಿ, ಅಮರೇಶ ಅಂಗಡಿ, ಗವಿಸಿದ್ಧಪ್ಪ ಗಾಣಿಗೇರ, ಶಿವಲೀಲಾ ಅಕ್ಕಿ, ಸುರೇಖಾ ಪಿಳ್ಳೆ, ಅಕ್ಕಮಹಾದೇವಿ ಚಟ್ಟಿ, ರತ್ನಕ್ಕ ಪಾಟೀಲ, ಪ್ರಭು ಗಂಜಿಹಾಳ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.