ಭ್ರಷ್ಟಾಚಾರ, ದೌರ್ಜನ್ಯ ಪ್ರಶ್ನಿಸಿ, ಹಕ್ಕುಗಳ ಪಡೆದುಕೊಳ್ಳಿ

| Published : Oct 09 2024, 01:43 AM IST

ಸಾರಾಂಶ

ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವುದು ಪ್ರಜಾಪ್ರಭುತ್ವ. ಆದರೆ, ವಾಸ್ತವದಲ್ಲಿ ಜನರು ಮೂಕರಾಗಿ, ಜನಪ್ರತಿನಿಧಿಗಳು ಕಿವುಡರಾಗಿರುವಂತೆ ಈ ಪ್ರಜಾಪ್ರಭುತ್ವದ ವ್ಯವಸ್ಥೆ ಅನಿಸುತ್ತಿದೆ ಎಂದು ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ರವಿನಾರಾಯಣ ಅಭಿಪ್ರಾಯಪಟ್ಟಿದ್ದಾರೆ.

- ಮಾಹಿತಿ ಕಾರ್ಯಾಗಾರದಲ್ಲಿ ನಿವೃತ್ತ ಎಸ್‌ಪಿ ರವಿನಾರಾಯಣ ಸಲಹೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವುದು ಪ್ರಜಾಪ್ರಭುತ್ವ. ಆದರೆ, ವಾಸ್ತವದಲ್ಲಿ ಜನರು ಮೂಕರಾಗಿ, ಜನಪ್ರತಿನಿಧಿಗಳು ಕಿವುಡರಾಗಿರುವಂತೆ ಈ ಪ್ರಜಾಪ್ರಭುತ್ವದ ವ್ಯವಸ್ಥೆ ಅನಿಸುತ್ತಿದೆ ಎಂದು ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ರವಿನಾರಾಯಣ ಅಭಿಪ್ರಾಯಪಟ್ಟರು.

ನಗರದ ರೋಟರಿ ಬಾಲಭವನದಲ್ಲಿ ಸಿವಿಕ್ ಬೆಂಗಳೂರು ಹಾಗೂ ನೆರಳು ಬೀಡಿ ಕಾರ್ಮಿಕರ ಯೂನಿಯನ್ ಸಹಭಾಗಿತ್ವದಲ್ಲಿ ನಡೆದ 74ನೇ ತಿದ್ದುಪಡಿ (ನಗರಪಾಲಿಕೆ ಕಾಯಿದೆ) ಕುರಿತು ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

30 ವರ್ಷದಿಂದ ತಿದ್ದುಪಡಿ ಕಾಯ್ದೆಯೇ ಜಾರಿಯಾಗಿಲ್ಲ:

ನಗರಪಾಲಿಕೆ ಈ ಕಾಯಿದೆಗೆ ತಿದ್ದುಪಡಿ ಬಂದು 30 ವರ್ಷ ಕಳೆದಿದ್ದರೂ, ಅದರ ಅನುಷ್ಠಾನವಾಗಿಲ್ಲ. ಇದರಿಂದ ನಮ್ಮ ಆಡಳಿತಾತ್ಮಕ ವ್ಯವಸ್ಥೆ ಹೇಗಿದೆ ಎಂಬುದು ತಿಳಿಯುತ್ತದೆ. ಎಲ್ಲವನ್ನು ಅಧಿಕಾರಿಗಳು, ಜನಪ್ರತಿನಿಧಿಗಳ ಮೇಲೆ ಹೊರಿಸಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಇದೊಂದೇ ವಿಷಯವಲ್ಲ. ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಶೋಷಣೆ, ಅನ್ಯಾಯ, ದೌರ್ಜನ್ಯಗಳ ವಿರುದ್ಧ ಜನರು ಜಾಗೃತರಾಗಿ ಪ್ರಶ್ನಿಸಬೇಕು. ಸಮಾಜದಲ್ಲಿ ಹೊರೆ ಹೊರುವವರು (ಶ್ರಮಿಕರು) ಅದರ ಫಲ ಉಣ್ಣುವವರು ಉಳ್ಳವರಾಗಿದ್ದಾರೆ. ನಾವು ಜಾಗೃತರಾಗಿ ನಮ್ಮ ಹಕ್ಕುಗಳನ್ನು ಕೇಳಿ ಪಡೆದುಕೊಳ್ಳಬೇಕು. ಆ ನಿಟ್ಟಿನಲ್ಲಿ ಈ ಕಾರ್ಯಾಗಾರ ಯಶಸ್ವಿಯಾಗಲಿ ಎಂದು ಆಶಿಸಿದರು.

ವಾರ್ಡ್‌ ಸಮಿತಿ ರಚಿಸಬೇಕು:

ಸಿವಿಕ್ ಸಂಸ್ಥೆ ರಾಜರಾಜೇಶ್ವರಿ ಮಾತನಾಡಿ, ಪ್ರತಿ ವಾರ್ಡ್ ಸಮಿತಿಯಲ್ಲಿ 10 ಸದಸ್ಯರು ಇರಬೇಕು. ಅದರಲ್ಲಿ 9 ಮಂದಿ ನಾಗರಿಕರು. ಒಬ್ಬರು ಆ ಭಾಗದ ಪಾಲಿಕೆ ಸದಸ್ಯರು. ಆ ಸಮಿತಿಯಲ್ಲಿ ಇಡೀ ವಾರ್ಡಿನೊಳಗಿನ ಸಮಸ್ಯೆಗಳನ್ನು ಚರ್ಚಸಿ ಪರಿಹಾರ ಕಂಡುಕೊಳ್ಳಲು ಅವಕಾಶವಿದೆ. ಆದರೆ, ನಗರ ಪಾಲಿಕೆ ಕಾಯ್ದೆಗೆ ತಿದ್ದುಪಡಿ ತಂದು 30 ವರ್ಷ ಕಳೆದರೂ ರಾಜ್ಯದ 10 ಮಹಾನಗರ ವ್ಯಾಪ್ತಿಯಲ್ಲಿ ವಾರ್ಡ್ ಸಮಿತಿಗಳು ರಚನೆಯಾಗಿಲ್ಲ. ಮುಂದಿನ ದಿನಗಳಲ್ಲಿ ವಾರ್ಡ್ ಸಮಿತಿ ರಚನೆ ಆಗಬೇಕು ಎಂದರು.

ಮಹಾನಗರ ಪಾಲಿಕೆ ಮೇಯರ್‌ ಕೆ.ಚಮನ್ ಸಾಬ್ ಮಾತನಾಡಿ, ಚಿಕ್ಕವನಿರುವಾಗ ನನ್ನಮ್ಮನೊಂದಿಗೆ ನಾನು ಬೀಡಿ ಕಟ್ಟಿದ್ದೇನೆ. ನಾನು ಬೀಡಿ ಕಾರ್ಮಿಕರ ಮಗ. ಬೀಡಿ ಉದ್ಯಮ ಮತ್ತು ಬೀಡಿ ಕಟ್ಟುವವರ ಕಷ್ಟಗಳೇನು ಎಂಬುದು ನನಗೆ ತಿಳಿದಿದೆ. ನಾನು ಮೇಯರ್ ಆಗಿರುವ ಈ ಅಲ್ಪಾವಧಿಯಲ್ಲಿ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. 3 ಸಾವಿರಕ್ಕಿಂತ ಹೆಚ್ಚು ಬೀಡಿ ಕಾರ್ಮಿಕರು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿದ್ದಾರೆ. ಅವರಿಗಾಗಿ ಇಎಸ್‌ಐ ಆಸ್ಪತ್ರೆ ಘಟಕ ಸ್ಥಾಪಿಸುವಂತೆ ಸಂಸದರ ಗಮನಕ್ಕೆ ತಂದು ಹೋರಾಟ ಮಾಡೋಣ, ನೀವು ನನ್ನೊಂದಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಜಬೀನಾ ಖಾನಂ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್‌.ಎಚ್‌. ಅರುಣಕುಮಾರ್‌, ಪಾಲಿಕೆ ಸಹಾಯಕ ಆಯುಕ್ತೆ ಲಕ್ಷ್ಮೀ ದೇವಿ ಹಾಗೂ ಬೀಡಿ ಕಾರ್ಮಿಕರು ಭಾಗವಹಿಸಿದ್ದರು.

- - - -ಫೋಟೋ:

ದಾವಣಗೆರೆಯಲ್ಲಿ ನಡೆದ 74ನೇ ತಿದ್ದುಪಡಿ (ನಗರಪಾಲಿಕೆ ಕಾಯಿದೆ) ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಸಿವಿಕ್ ಸಂಸ್ಥೆಯ ರಾಜೇಶ್ವರಿ ಮಾತನಾಡಿದರು.