ಚಿತ್ರಕಲೆ, ಶಿಲ್ಪಗಳ ಪ್ರದರ್ಶನ, ಮಾರಾಟಕ್ಕೆ ಕುಲಪತಿ ಕರೆ

| Published : Nov 28 2024, 12:32 AM IST

ಚಿತ್ರಕಲೆ, ಶಿಲ್ಪಗಳ ಪ್ರದರ್ಶನ, ಮಾರಾಟಕ್ಕೆ ಕುಲಪತಿ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯದ ವಜ್ರ ಮಹೋತ್ಸವ ಅಂಗವಾಗಿ ಕಾಲೇಜಿನಲ್ಲಿ ಆಯೋಜಿಸಿರುವ ಶಿಲ್ಪಕಲಾ ಸಮಕಾಲೀನ ಸಮೂಹ ಶಿಲ್ಪಕಲಾ ಪ್ರದರ್ಶನವನ್ನು ದಾವಿವಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಉದ್ಘಾಟಿಸಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆಯುವ ಕಲಾವಿದರು, ಕಲಾ ವಿದ್ಯಾರ್ಥಿಗಳು ತಾವು ರಚಿಸಿದ ಚಿತ್ರಕಲೆ, ಶಿಲ್ಪಗಳನ್ನು ಸಾರ್ವಜನಿಕ ಪ್ರದರ್ಶನಕ್ಕಿಟ್ಟು, ಮಾರಾಟ ಮಾಡುವ ಮೂಲಕ ಹೆಸರು ಗಳಿಸುವ ಜೊತೆಗೆ ಆರ್ಥಿಕವಾಗಿಯೂ ಸಬಲರಾಗಬೇಕು ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಕರೆ ನೀಡಿದರು. ನಗರದ ದಾವಿವಿ ದೃಶ್ಯಕಲಾ ಮಹಾವಿದ್ಯಾಲಯದ ವಜ್ರ ಮಹೋತ್ಸವ ಅಂಗವಾಗಿ ಕಾಲೇಜಿನಲ್ಲಿ ಆಯೋಜಿಸಿರುವ ಶಿಲ್ಪಕಲಾ ಸಮಕಾಲೀನ ಸಮೂಹ ಶಿಲ್ಪಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ತಮ್ಮ ಕಲೆಯನ್ನು ಜಗತ್ತಿಗೆ ತಿಳಿಸುವ ಜೊತೆಗೆ ಅವುಗಳನ್ನು ಮಾರಾಟ ಮಾಡುವ ಮೂಲಕ ಆರ್ಥಿಕವಾಗಿಯೂ ಸಬಲರಾಗಬೇಕು ಎಂದರು.ನಿಮ್ಮಲ್ಲಿ ಕಲೆ ಇದ್ದರೆ ನಿಮ್ಮ ಕಲಾಕೃತಿಗಳು, ಶಿಲ್ಪಗಳಿಗೆ ಒಳ್ಳೆಯ ಬೆಲೆಯ ಜೊತೆಗೆ ನಿಮಗೆ ಹೆಸರೂ ಸಿಗುತ್ತದೆ. ಅಲ್ಲದೇ, ಇಡೀ ಸಮಾಜ ನಿಮ್ಮ ಪ್ರತಿಭೆ, ಕಲಾ ಸಾಮರ್ಥ್ಯವನ್ನು ಹಾಡಿ ಹೊಗಳುತ್ತದೆ. ಆಗ ನಿಮ್ಮ ಪರಿಶ್ರಮಕ್ಕೂ ಒಂದು ಬೆಲೆ ಸಿಕ್ಕಂತಾಗುತ್ತದೆ. ಕಲಾ ಪ್ರದರ್ಶನದಿಂದ ಸಮಾಜ ಸುಧಾರಿಸಬಹುದೆಂಬುದಕ್ಕೆ ಇಂದಿನ ಶಿಲ್ಪಕಲಾ ಪ್ರದರ್ಶನವೇ ಸಾಕ್ಷಿ ಎಂದು ತಿಳಿಸಿದರು. ಪ್ರಸ್ತುತ ದಿನಮಾನಗಳಲ್ಲಿ ಯುವ ಜನರು ಕುಡಿತ, ಮಾದಕ ದ್ರವ್ಯಗಳ ವ್ಯಸನಕ್ಕೆ ತುತ್ತಾಗಿ, ತಮ್ಮ ಬದುಕು, ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಾದಕ ವ್ಯಸನ, ದುಶ್ಚಟಗಳ ಮುಕ್ತ ಸಮಾಜ ನಿರ್ಮಾಣಕ್ಕೆ ಕಲೆಯು ಸಹಕಾರಿಯಾಗಿದೆ. ಕಲೆಯು ಏಕಾಗ್ರತೆ ಸಾಧಿಸಲು, ಸಾಧನೆ ಮೆರೆಯಲು ಪ್ರೇರಣೆ ನೀಡುತ್ತದೆ. ಹಳೆಬೀಡು, ಬೇಲೂರು, ಯಲ್ಲೋರಾ, ಹಂಪಿ ಸೇರಿದಂತೆ ವಿವಿಧೆಡೆ ಇರುವಂತಹ ಶಿಲ್ಪಕಲೆಗಳನ್ನು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತವೆ ಎಂದು ಹೇಳಿದರು. ಪ್ರಾಚೀನ ಶಿಲ್ಪಕಲೆಗಳು ಭಾರತೀಯರಷ್ಟೇ ಅಲ್ಲ, ವಿದೇಶೀಯರನ್ನೂ ಸೆಳೆಯುತ್ತಿವೆ. ಅಂದಿನ ಶಿಲ್ಪಕಲೆಗಳನ್ನು ಜಕಣಾಚಾರಿ ಎಂಬ ಶಿಲ್ಪಿ ಕೆತ್ತಿ, ವಿಶ್ವಾದ್ಯಂತ ಪ್ರಸಿದ್ಧಿ ಪಡೆದಿದ್ದಾರೆ. ನೀವು ಸಹ ಜಕಣಾಚಾರಿಯಂತೆ ಸಾಧನೆ ಮಾಡಲು ಪ್ರಯತ್ನಶೀಲರಾಗಬೇಕು. ಅಂತಹ ಕಲೆಯನ್ನು ನೀವು ಹೊಂದಬೇಕು. ಶಿಲ್ಪಗಳನ್ನು ರಚಿಸಬೇಕು. ಹಿರಿಯರು, ಅನುಭವಿ ಶಿಲ್ಪಿಗಳು, ಚಿತ್ರ ಕಲಾವಿದರ ಸಲಹೆ, ಸಹಕಾರ, ಮಾರ್ಗದರ್ಶನವನ್ನೂ ಪಡೆಯಬೇಕು ಎಂದು ಪ್ರೊ.ಕುಂಬಾರ್ ಸಲಹೆ ನೀಡಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ವ್ಯಂಗ್ಯ ಚಿತ್ರಕಾರ ಎಚ್.ಬಿ.ಮಂಜುನಾಥ ಮಾತನಾಡಿ, ಅನಾದಿಯಿಂದಲೂ ಭಾರತದಲ್ಲಿ ಅತ್ಯಪರೂಪದ ಶಿಲ್ಪಕಲೆಗಳಿವೆ. ದೇಶದಲ್ಲಿ ಶಿಲ್ಪಕಲೆ ಅತ್ಯಂತ ಪಕ್ವತೆ ಪಡೆದಿದೆ. ಸಮಕಾಲೀನ ಶಿಲ್ಪಗಳು, ಚಿತ್ರಕಲೆಗಲಿಗೆ ಹೆಚ್ಚು ಪ್ರೋತ್ಸಾಹ ಸಿಗುತ್ತಿವೆ. ಆಧುನಿಕ ಸದೃಢ ಭಾರತದಲ್ಲಿ ಶಿಲ್ಪಕಲೆಗಳ ಪಾತ್ರ ಬಹು ದೊಡ್ಡದು. ವಿಶ್ವಕರ್ಮರನ್ನು ದೇವಶಿಲ್ಪಿಯೆಂದು ಕರೆದು, ದೇವರ ಸ್ಥಾನದಲ್ಲಿ ನಿಲ್ಲಿಸಿರುವ ಮಹಾನ್ ದೇಶ ನಮ್ಮದು ಎಂದರು. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಹಾಗೂ ಕಾಲೇಜು ಅಧ್ಯಾಪಕರ ಒಕ್ಕೂಟದ ಮಾಜಿ ಅಧ್ಯಕ್ಷ ಪ್ರೊ.ಸಿ.ಎಚ್.ಮುರಿಗೇಂದ್ರಪ್ಪ, ಐಕ್ಯೂಎಸಿ ಸಂಯೋಜನಾಧಿಕಾರಿ ಡಾ.ಸತೀಶಕುಮಾರ ಪಿ ವಲ್ಲೆಪುರೆ, ಮಹಾವಿದ್ಯಾಲಯದ ಬೋಧನಾ ಸಹಾಯಕರಾದ ಎಂ.ಕೆ.ಗಿರೀಶಕುಮಾರ, ಓಂಕಾರಮೂರ್ತಿ, ಎನ್.ನವೀನಕುಮಾರ, ಪ್ರಾಚಾರ್ಯ ಡಾ.ಜೈರಾಜ.ಎಂ.ಚಿಕ್ಕಪಾಟೀಲ, ಸಹಾಯಕ ಪ್ರಾಧ್ಯಾಪಕ ದತ್ತಾತ್ರೇಯ ಎನ್. ಭಟ್, ಹಿರಿಯ ಕಲಾವಿದ ಎ.ಮಹಲಿಂಗಪ್ಪ, ಹಿರಿಯ ರಂಗಕರ್ಮಿ ಬಾ.ಮ.ಬಸವರಾಜಯ್ಯ, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ಇಡೀ ರಾಜ್ಯದಲ್ಲಿ ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯದಂತೆ ಹೆಮ್ಮೆ ಪಡುವಂತಹ ಮತ್ತೊಂದು ವಿದ್ಯಾಲಯವಿಲ್ಲ. ಬೆಂಗಳೂರಿನಲ್ಲಿ ಸಾಕಷ್ಟು ದೃಶ್ಯಕಲಾ ವಿದ್ಯಾಲಯಗಳಿರಬಹುದು. ಆದರೆ, 69ನೇ ವರ್ಷದ ವಜ್ರ ಮಹೋತ್ಸವದ ಸಂಭ್ರಮವನ್ನು ಆಚರಿಸುತ್ತಿರುವ ವಿದ್ಯಾಲಯಕ್ಕೆ ಅದರದ್ದೇ ಆದ ಇತಿಹಾಸವೂ ಇದೆ. ಇದಕ್ಕೆ ವಿದ್ಯಾರ್ಥಿಗಳು ಹೆಮ್ಮೆಪಡಬೇಕು. -ಪ್ರೊ.ಬಿ.ಡಿ.ಕುಂಬಾರ, ಕುಲಪತಿ, ದಾವಿವಿ