ಸಾರಾಂಶ
ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತೇ ಪ್ರಧಾನಿಯಾಗಬೇಕೆಂಬ ಎಂಬ ಸಂಕಲ್ಪದೊಂದಿಗೆ ಬಿಜೆಪಿ ಕಾರ್ಯಕರ್ತರು ನಗರದ ಶಂಕರಮಠದ ಆವರಣದಲ್ಲಿ ಚಂಡಿಕಾ ಹೋಮ ನಡೆಸಿ ಪ್ರಾರ್ಥನೆ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಕೇಂದ್ರದಲ್ಲಿ ಮತ್ತೇ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಹಾಗೂ ಅವರಿಗೆ ದೀರ್ಘಾಯುಷ್ಯ ಲಭಿಸಲಿ ಎಂಬ ಸಂಕಲ್ಪದೊಂದಿಗೆ ಬಿಜೆಪಿ ಕಾರ್ಯಕರ್ತರು ನಗರದ ಶಂಕರಮಠದ ಆವರಣದಲ್ಲಿ ಸೋಮವಾರ ಚಂಡಿಕಾ ಹೋಮ ನಡೆಸಿ ಪ್ರಾರ್ಥನೆ ಸಲ್ಲಿಸಿದರು.ನಂತರ ಮಾತನಾಡಿದ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಸೀತಾರಾಮಭರಣ್ಯ, ದೇಶದಲ್ಲಿ ಎನ್ಡಿಎ 400ಕ್ಕೂ ಹೆಚ್ಚು ಸ್ಥಾನ ಲಭಿಸುವ ಮೂಲಕ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಮೋದಿ ಹಿಡಿಯಬೇಕು ಎಂಬ ದೃಷ್ಟಿಯಿಂದ ಕಳೆದ ಎರಡೂವರೆ ತಿಂಗಳಿನಿಂದ ಪ್ರತಿನಿತ್ಯವು ವಿವಿಧ ಹೋಮ-ಹವನ ನಡೆಸಿ ಪೂರ್ಣಗೊಂಡಿದೆ ಎಂದರು.
ಅರ್ಚಕ ಉದಯಶಂಕರ್ ಮಾತನಾಡಿ, ಶೃಂಗೇರಿ ಶಂಕರಮಠವು ಇತಿಹಾಸ ಬರೆಯುವ ಕ್ಷೇತ್ರವಾಗಿದೆ. ಇಲ್ಲಿನ ಗುರುಗಳು ಸಂಸ್ಕೃತಿ, ಪುರಾತನ ತತ್ವ, ಧಾರ್ಮಿಕ ನೆಲಗಟ್ಟನ್ನು ಉಳಿಸುವ ನಿಟ್ಟಿನಲ್ಲಿ ವಿಶೇಷವಾಗಿ ಪ್ರಾರಂಭಿಸಿದ್ದಾರೆ. ಅದರಂತೆ ದೇಶದಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಜಿಲ್ಲಾ ಬಿಜೆಪಿ ಪರವಾಗಿ ಚಂಡಿಕಾ ಹೋಮ ನಡೆಸಲಾಗಿದೆ ಎಂದರು.ಕಳೆದ ಶಿವರಾತ್ರಿಯಿಂದ ನಿತ್ಯಪೂಜೆ, ಚಕ್ರರಾರ್ಚನೆ, ಚಂಡಿಕಾ ಪಾರಾಯಣ, ರುದ್ರಾಭಿಷೆಕ ಪ್ರಾರಂಭಿಸಿ ಅಂತಿನ ದಿನವಾದ ಇಂದು ಚಂಡಿಕಾ ಹೋಮ ನೆರವೇರಿಸುವ ಮೂಲಕ ಸಂಪನ್ನಗೊಂಡಿದೆ. ವಿಶೇಷ ಪೂಜೆ ನಂತರ ಒಂಭತ್ತು ಮಂದಿ ಮುತ್ತೈದೆಯರಿಗೆ ಬಾಗಿನ ಅರ್ಪಣೆ ಮಾಡಲಾಯಿತು.
ಇದೇ ವೇಳೆ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್ ಮಾತನಾಡಿದರು. ಬಿಜೆಪಿ ಮಾಧ್ಯಮ ಸಹ ಪ್ರಮುಖ್ ಕೇಶವಮೂರ್ತಿ, ಮುಖಂಡರಾದ ನರಸಿಂಹಮೂರ್ತಿ, ಮೋಹನ್, ಜಯಣ್ಣ, ಪುಟ್ಟರಂಗಶೆಟ್ಟಿ, ನಿಶಾಂತ್, ಶಿವು, ನವೀನ್ಶೆಟ್ಟಿ ಹಾಜರಿದ್ದರು.