ಚಂದ್ರೇಗೌಡರು ಅತ್ಯುತ್ತಮ ಸಂಸದೀಯ ಪಟು: ಬಿಎಸ್‌ವೈ

| Published : Nov 19 2023, 01:30 AM IST

ಚಂದ್ರೇಗೌಡರು ಅತ್ಯುತ್ತಮ ಸಂಸದೀಯ ಪಟು: ಬಿಎಸ್‌ವೈ
Share this Article
  • FB
  • TW
  • Linkdin
  • Email

ಸಾರಾಂಶ

ಚಂದ್ರೇಗೌಡರು ಅತ್ಯುತ್ತಮ ಸಂಸದೀಯ ಪಟು: ಬಿಎಸ್‌ವೈ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಡಿ.ಬಿ. ಚಂದ್ರೇಗೌಡರು ಒಬ್ಬ ಅತ್ಯುತ್ತಮ ಸಂಸದೀಯ ಪಟು ಮತ್ತು ಕಾನೂನು ತಜ್ಞರಾಗಿದ್ದರು. ಚಂದ್ರೇಗೌಡರು ಸದನದಲ್ಲಿ ಮಾತನಾಡಲು ಎದ್ದು ನಿಂತರೆ ಇಡೀ ಸದನವೇ ಗಂಭೀರವಾಗಿ ಕೇಳುತ್ತಿತ್ತು ಎಂದು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಸ್ಮರಿಸಿದರು.

ಚಿಕ್ಕಮಗಳೂರು ತಾಲೂಕಿನ ಹಾಂದಿಯ ಶಾಲಿಮಾರ್ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಡಿ.ಬಿ. ಚಂದ್ರೇ ಗೌಡರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ರಾಜ್ಯಕ್ಕೆ ಅವರು ಒಬ್ಬ ಉತ್ತಮ ಮಾರ್ಗದರ್ಶಕರಾಗಿದ್ದರು. ಐದು ದಶಕಗಳ ಕಾಲ ಕರ್ನಾಟಕದ ರಾಜಕೀಯದಲ್ಲಿ ವಿಭಿನ್ನ ಪಾತ್ರ ವಹಿಸಿದ್ದರು. ಕಾವೇರಿ ವಿವಾದ ಸೇರಿದಂತೆ ಕ್ಲಿಷ್ಟ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಅವರು ಸಂಪರ್ಕ ಸೇತುವೆಯಾಗಿದ್ದರು. ಅವರ ಅಗಲಿಕೆ ರಾಜ್ಯಕ್ಕೆ ದೇಶಕ್ಕೆ ಅತೀವ ನಷ್ಟವನ್ನುಂಟು ಮಾಡಿದೆ ಎಂದು ಹೇಳಿದರು.ಚಂದ್ರೇಗೌಡರು ಮತ್ತು ತನ್ನ ಬಾಂಧವ್ಯ ಅದು ಪಕ್ಷ ರಾಜಕಾರಣವನ್ನು ಮೀರಿತ್ತು, ಅವರೊಬ್ಬ ಉತ್ತಮ ಸ್ನೇಹಜೀವಿಯಾಗಿದ್ದರು. ಅವರ ಅಪಾರವಾದ ಜ್ಞಾನಭಂಡಾರ ರಾಜ್ಯಕ್ಕೆ ಅನೇಕ ಬಾರಿ ಇಕ್ಕಟ್ಟಿನ ಪರಿಸ್ಥಿತಿಯಿಂದ ಪಾರಾಗಲೂ ಸಹಾಯಕವಾಗುತ್ತಿತ್ತು. ಅವರೊಬ್ಬ ದೇಶದ ಅಪರೂಪದ ರಾಜಕೀಯ ಮುತ್ಸದ್ದಿಯಾಗಿದ್ದರು ಎಂದು ಯಡಿಯೂರಪ್ಪ ಬಣ್ಣಿಸಿದರು.ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾತನಾಡಿ, ಚಂದ್ರೇಗೌಡರು ರಾಜ್ಯದ ಕ್ಲಿಷ್ಟ ರಾಜಕೀಯ ಸನ್ನಿವೇಶದಲ್ಲಿ ಇದ್ದಾಗ ಉತ್ತಮ ಮಾರ್ಗದರ್ಶನ ಮಾಡಿದ್ದರು. ಅವರು ವಿಧಾನಸಭಾ ಸಭಾಪತಿಗಳಾಗಿದ್ದ ಅವಧಿಯಲ್ಲಿ ರಾಜ್ಯದಲ್ಲಿ ಅತ್ಯಂತ ಸಂಕೀರ್ಣ ರಾಜಕೀಯ ಸ್ಥಿತಿ ಕಂಡಿತ್ತು. ಅಂತಹ ಸಂದರ್ಭದಲ್ಲಿ ಚಂದ್ರೇಗೌಡರ ಸಂಸದೀಯ ನಡವಳಿಕೆಗಳು ರಾಜ್ಯಕ್ಕೆ ಮಾರ್ಗದರ್ಶನ ಮಾಡಿದವು ಎಂದರು.ಮಾಜಿ ಸಭಾಪತಿ ಡಾ. ಬಿ.ಎಲ್. ಶಂಕರ್ ಮಾತನಾಡಿ, ಚಂದ್ರೇಗೌಡರು ಕುವೆಂಪು ಅವರ ಸಾಹಿತ್ಯದಿಂದ ಪ್ರಭಾವಿತರಾಗಿದ್ದರು. ಅವರು ಓರ್ವ ನಿಸ್ವಾರ್ಥ ರಾಜಕಾರಣಿಯಾಗಿದ್ದರು. ಸಾಂಸ್ಕೃತಿಕ ವ್ಯಕ್ತಿತ್ವವನ್ನು ಹೊಂದಿದ್ದರು. ರಾಜಕೀಯವನ್ನು ಒಂದು ಹವ್ಯಾಸವಾಗಿ ತೆಗೆದುಕೊಂಡಿದ್ದರು. ರಾಜಕೀಯದಿಂದ ಲಾಭ ಪಡೆಯಬೇಕೆಂಬ ಅಭಿಲಾಷೆ ಅವರಿಗೆ ಇರಲಿಲ್ಲ. ತಮ್ಮ ನಡವಳಿಕೆಯಿಂದ ಮಲೆನಾಡಿನ ರಾಜಕೀಯಕ್ಕೆ ಒಂದು ಘನತೆ, ಗಾಂಭೀರ್ಯ ಮತ್ತು ಗೌರವ ತಂದುಕೊಟ್ಟಿದ್ದರು. ಅವರ ಸೇವೆ ಚಿಕ್ಕಮಗಳೂರು ಜಿಲ್ಲೆ ರಾಜ್ಯ ಮತ್ತು ರಾಷ್ಟ್ರಕ್ಕೆ ಅಮೂಲ್ಯವಾಗಿತ್ತು ಎಂದರು.ಸಭೆಯಲ್ಲಿ ಮಾಜಿ ಸಚಿವೆ ಮೊಟಮ್ಮ, ಕೇಂದ್ರದ ಮಾಜಿ ಸಚಿವೆ ಡಿ.ಕೆ. ತಾರದೇವಿ ಮಾತನಾಡಿದರು. ಕುಟುಂಬದ ಪರವಾಗಿ ಡಿ.ಬಿ. ಜಯಪ್ರಕಾಶ್ ಮತ್ತು ಚಂದ್ರೇಗೌಡರ ಪುತ್ರಿ ವೀಣಾಗೌಡ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಚಂದ್ರೇಗೌಡರ ನಿಧನಕ್ಕೆ ಕಳುಹಿಸಿದ್ದ ಸಂತಾಪ ಸಂದೇಶವನ್ನು ಅವರ ಹಿರಿಯ ಪುತ್ರಿ ಪಲ್ಲವಿ ಓದಿದರು.ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಉಪ ಸಭಾಪತಿ ಎಂ. ಕೆ. ಪ್ರಾಣೇಶ್, ಶಾಸಕ ಟಿ.ಡಿ. ರಾಜೇಗೌಡ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ, ಮಾಜಿ ಶಾಸಕರಾದ ಬಿ.ಬಿ.ನಿಂಗಯ್ಯ, ಎಚ್.ಎಂ.ವಿಶ್ವನಾಥ್, ಕಾಫಿ ಮಂಡಳಿ ಅಧ್ಯಕ್ಷ ದೇವರುಂದ ದಿನೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಹಳಸೆ ಶಿವಣ್ಣ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳ ಮುಖಂಡರು, ಚಂದ್ರೇಗೌಡರ ಕುಟುಂಬ ವರ್ಗದವರು ಇದ್ದರು. ಸಾಹಿತಿ ಹಳೆಕೋಟೆ ರಮೇಶ್ ಕಾರ್ಯಕ್ರಮ ನಿರೂಪಿಸಿದರು. 18 ಕೆಸಿಕೆಎಂ 3ಚಿಕ್ಕಮಗಳೂರು ತಾಲೂಕಿನ ಹಾಂದಿಯ ಶಾಲಿಮಾರ್ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಡಿ.ಬಿ. ಚಂದ್ರೇಗೌಡರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪುಷ್ಪ ನಮನ ಸಲ್ಲಿಸಿದರು.