ಸಾರಾಂಶ
ಹಲವು ವರ್ಷಗಳ ಬೇಡಿಕೆಯಾಗಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಪ್ರಾರಂಭಿಸಲಾಗಿದೆ. ನಮ್ಮ ಗ್ರಾಪಂ ವ್ಯಾಪ್ತಿಯ ರೈತರು ಬೇರೆ ಸಹಕಾರ ಸಂಘ ಇರುವ ಗ್ರಾಮಗಳಿಗೆ ಹೋಗಿ ರಸಗೊಬ್ಬರ, ಬೀಜಗಳನ್ನು ಖರೀದಿಸಬೇಕಾಗಿತ್ತು.
ಕುಕನೂರು: ನೂತನವಾಗಿ ಭಾನಾಪುರ ಗ್ರಾಮದಲ್ಲಿ ಪ್ರಾರಂಭಗೊಂಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬಲವರ್ಧನೆಗೆ ಶ್ರಮಿಸಲಾಗುವುದು ಎಂದು ನೂತನ ಅಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ ಹೇಳಿದರು.ತಾಲೂಕಿನ ಭಾನಾಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆ ಆದ ನಂತರ ಮಾತನಾಡಿದ ಅವರು, ಹಲವು ವರ್ಷಗಳ ಬೇಡಿಕೆಯಾಗಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಪ್ರಾರಂಭಿಸಲಾಗಿದೆ. ನಮ್ಮ ಗ್ರಾಪಂ ವ್ಯಾಪ್ತಿಯ ರೈತರು ಬೇರೆ ಸಹಕಾರ ಸಂಘ ಇರುವ ಗ್ರಾಮಗಳಿಗೆ ಹೋಗಿ ರಸಗೊಬ್ಬರ, ಬೀಜಗಳನ್ನು ಖರೀದಿಸಬೇಕಾಗಿತ್ತು. ಸದ್ಯ ನಮ್ಮ ಗ್ರಾಮದಲ್ಲಿಯೇ ಸಹಕಾರ ಸಂಘ ಪ್ರಾರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಪಂ ವ್ಯಾಪ್ತಿಯ ರೈತರಿಗೆ ಹೆಚ್ಚಿನ ಸಹಕಾರವಾಗಲಿದೆ. ಎಲ್ಲರ ಸಹಕಾರ ಅಗತ್ಯವಿದ್ದು, ಸಂಘದ ಬೆಳೆವಣಿಗೆ ಸಹಕರಿಸಬೇಕು ಎಂದರು.
ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ:ಅಧ್ಯಕ್ಷರಾಗಿ ಚಂದ್ರಶೇಖರಯ್ಯ ಹಿರೇಮಠ, ಉಪಾಧ್ಯಕ್ಷರಾಗಿ ಸಕ್ರಪ್ಪ ಜಗ್ಲಿ, ನಿರ್ದೇಶಕರಾಗಿ ಪರಶುರಾಮ ಮಡಿವಾಳರ, ಕಲ್ಯಾಣಪ್ಪ ಕುಂಬಾರ, ನೀಲಮ್ಮ ಕಿನ್ನಾಳ, ವೀರಪ್ಪ ಮೈನಳ್ಳಿ, ನಿಂಗಪ್ಪ ಹೊಸಮನಿ, ಕುಮಾರ ರಮೇಶ ತಳವಾರ, ಮಲ್ಲಪ್ಪ ಸಾದರ, ರಮೇಶ ಕುಂಡಿ, ಗಂಗಮ್ಮ ಲಕಮಾಪುರಮಠ, ಶಶಿಕಲಾ ಹಿರೇಮಠ ಆಯ್ಕೆಗೊಂಡಿದ್ದಾರೆ.ಈ ಸಂದರ್ಭದಲ್ಲಿ ಸಹಕಾರ ಅಭಿವೃದ್ಧಿ ಅಧಿಕಾರಿ, ಚುನಾವಣಾಧಿಕಾರಿ ಚಂದ್ರಶೇಖರ್, ಸಂಘದ ಕಾರ್ಯದರ್ಶಿ ಬಸವರಾಜ ಮಠದ ಇದ್ದರು.