ವೈಜ್ಞಾನಿಕತೆಗೆ ತಕ್ಕಂತೆ ಬದಲಾವಣೆ ಅಗತ್ಯ: ಜಿಲ್ಲಾ ಉಸ್ತುವಾರಿ ಶಿವಾನಂದ ಪಾಟೀಲ

| Published : Apr 09 2025, 12:32 AM IST

ವೈಜ್ಞಾನಿಕತೆಗೆ ತಕ್ಕಂತೆ ಬದಲಾವಣೆ ಅಗತ್ಯ: ಜಿಲ್ಲಾ ಉಸ್ತುವಾರಿ ಶಿವಾನಂದ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ದಿನಗಳಲ್ಲಿ ಜಗತ್ತಿನಾದ್ಯಂತ ಕಂಪ್ಯೂಟರ್ ಕ್ಷೇತ್ರದ ಪರಿಣಿತರೆ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ದೇಶದ ಎಲ್ಲ ರಾಜ್ಯಗಳಿಗೆ ಹೋಲಿಸಿದರೆ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ.

ರಾಣಿಬೆನ್ನೂರು: ಜಗತ್ತು ವೈಜ್ಞಾನಿಕವಾಗಿ ಮುಂದುವರಿಯುತ್ತಿದ್ದು, ಅದಕ್ಕೆ ತಕ್ಕಂತೆ ವ್ಯವಸ್ಥೆ ಬದಲಾವಣೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಸೋಮವಾರ ಸ್ಥಳೀಯ ಪಿಕೆಕೆ ಇನಿಷಿಯೇಟಿವ್ಸ್ ಸಹಯೋಗದಲ್ಲಿ ಏರ್ಪಡಿಸಿದ್ದ ಡಿಜಿಟಲ್ ಲೈಬ್ರರಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಜಗತ್ತಿನಾದ್ಯಂತ ಕಂಪ್ಯೂಟರ್ ಕ್ಷೇತ್ರದ ಪರಿಣಿತರೆ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ದೇಶದ ಎಲ್ಲ ರಾಜ್ಯಗಳಿಗೆ ಹೋಲಿಸಿದರೆ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದರು. ರಾಜ್ಯದಲ್ಲಿ ಅನೇಕ ಸಿಎಂಗಳು ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಸಮವಸ್ತ್ರ, ಬಿಸಿಯೂಟ, ಸೈಕಲ್, ಬಸ್‌ಪಾಸ್‌ನಂತಹ ಸೌಲಭ್ಯ ಕಲ್ಪಿಸಿದರು. ಇಂದಿನ ಸ್ಮರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಇನ್ನಷ್ಟು ಸವಲತ್ತುಗಳನ್ನು ಕೊಡಬೇಕು. ಶಾಸಕರು ತಮ್ಮ ಅನುದಾನವನ್ನು ಶಿಕ್ಷಣಕ್ಕೆ ಮೀಸಲಿಟ್ಟಿರುವುದು ಹೆಮ್ಮೆಯ ಸಂಗತಿ. ಇದು ರಾಜ್ಯದ ಇತರ ಶಾಸಕರಿಗೆ ಮಾದರಿಯಾಗಿದೆ. ತಂತ್ರಜ್ಞಾನದ ಅವಿಷ್ಕಾರದಿಂದಾಗಿ ಜಗತ್ತು ಇಂದು ಅಂಗೈಯಲ್ಲಿದ್ದು, ಅದಕ್ಕೆ ತಕ್ಕಂತೆ ನಡೆಯಬೇಕಾಗಿದೆ ಎಂದರು.

ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಹಿಂದುಳಿದಿದ್ದಾರೆ. ಮುಂದಿನ ದಿನಗಳಲ್ಲಿ ತಾಲೂಕಿನ ಪ್ರತಿ ಗ್ರಾಪಂನಲ್ಲಿ ಡಿಜಿಟಲ್ ಗ್ರಂಥಾಲಯ ಮಾಡಲಾಗುವುದು. ನನ್ನ ಅನುದಾನದಲ್ಲಿ ಈ ಕೆಲಸ ಹಮ್ಮಿಕೊಂಡಿದ್ದೇನೆ. ಇದರಿಂದ ತಾಲೂಕಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ರೀತಿಯಲ್ಲಿ ತಯಾರಾಗಲು ಸಹಕಾರಿಯಾಗುತ್ತದೆ. ಮೊದಲನೆ ವರ್ಷ ನನ್ನ ಅನುದಾನದಲ್ಲಿ ಸ್ಮಾರ್ಟ್ ತರಗತಿ ಮಾಡಲಾಗಿತ್ತು. ಶಿಕ್ಷಕರ ಕೊರತೆ ನೀಗಿಸಲು ಸ್ಮಾರ್ಟ್ ಕ್ಲಾಸ್ ಸಹಕಾರಿಯಾಗಲಿದೆ. ಪ್ರತಿ ಗ್ರಾಮದಲ್ಲಿ ಡಿಜಿಟಲ್ ಗ್ರಂಥಾಲಯ ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಡಾ. ವಿಜಯಕುಮಾರ ದಾನಮ್ಮನವರ ಮಾತನಾಡಿ, ಸಮಾಜ ಬೆಳವಣಿಗೆಯಾದಂತೆ ಜನರ ಅಲೊಚನೆ ಹಾಗೂ ಬೇಡಿಕೆಗಳು ಬದಲಾವಣೆಯಾಗುತ್ತೇವೆ. ಸ್ವಾತಂತ್ರ‍್ಯ ಸಮಯದಲ್ಲಿ ಊಟ, ವಸತಿ, ಕೆಲಸ ಸಾಕಾಗಿತ್ತು. ನಂತರ ನೀರು ಹಾಗೂ ಖಾಸಗೀಕರಣಕ್ಕೆ ಒತ್ತು ನೀಡಲಾಯಿತು. ಇದೀಗ ಕೌಶಲ್ಯ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ ಎಂದರು.

ಹಾವೆಮುಲ್ ಅಧ್ಯಕ್ಷ ಎಂ.ಎಚ್. ಪಾಟೀಲ, ಜಿಪಂ ರುಚಿ ಬಿಂದಲ್, ಎಸ್‌ಪಿ ಅಂಶುಕುಮಾರ, ಪಿಕೆಕೆ ಇನಿಷಿಯೇಟಿವ್ಸ್ ಅಧ್ಯಕ್ಷೆ ಪೂರ್ಣಿಮಾ ಕೋಳಿವಾಡ, ಪ್ರಾ. ರವಿಕುಮಾರ ನಾಯಕ, ನಗರಸಭಾ ಸದಸ್ಯರಾದ ಜಯಶ್ರೀ ಪಿಸೆ, ಚಂದ್ರಕಲಾ ಬಿಷ್ಟಣ್ಣನವರ, ಇರ್ಫಾನ್ ದಿಡಗೂರ ಮತ್ತಿತರರಿದ್ದರು.

ರಾಮಕೃಷ್ಣ ಹೆಗಡೆ ಸ್ಮರಿಸಿದ ಸಚಿವರು: ರಾಜ್ಯದಲ್ಲಿ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಶೈಕ್ಷಣಿಕ ಅಭ್ಯುದಯಕ್ಕೆ ಹಲವಾರು ಮುಖ್ಯಮಂತ್ರಿಗಳು ಸಾಕಷ್ಟು ಕೊಡುಗೆ ನೀಡಿದ್ದು, ಮೊಟ್ಟ ಮೊದಲಿಗೆ ರಾಮಕೃಷ್ಣ ಹೆಗಡೆ ಅವರು ಮಕ್ಕಳಿಗೆ ಸಮವಸ್ತ್ರ ನೀಡುವ ವ್ಯವಸ್ಥೆ ಜಾರಿಗೆ ತಂದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸ್ಮರಿಸಿದರು.