ಧಾರವಾಡ:

ಮದುವೆಯಾಗಿ ಎರಡು ವರ್ಷದ ಮಗುವಿದ್ದರೂ ಅನ್ಯ ಹೆಸರಿನಲ್ಲಿ ಪ್ರೀತಿಯ ನಾಟಕವಾಡಿ ಯುವಕರಿಂದ ಹಣ ಪೀಕುತ್ತಿದ್ದ ಯುವತಿಯಿಂದ ₹ 7 ಲಕ್ಷ ಕಳೆದುಕೊಂಡಿದ್ದ ಯುವಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ಸಂಜೆ ನಡೆದಿದೆ.

ತಾಲೂಕಿನ ಕವಲಗೇರಿ ಗ್ರಾಮದ ಗುರು ವಕ್ಕುಂದ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಮಾಳಮಡ್ಡಿಯ ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಐಶ್ಚರ್ಯ ಮೋಸ ಮಾಡಿದ್ದಾಳೆ. ಇವಳು ಆರೋಹಿ, ರೇಣುಕಾ ಎಂಬ ಹೆಸರು ಇಟ್ಟುಕೊಂಡು ಯುವಕರೊಂದಿಗೆ ಪ್ರೀತಿಯ ನಾಟಕವಾಡಿ ಯುವಕರಿಂದ ಹಣ ಪಡೆಯುತ್ತಿದ್ದಳು. ಇದೀಗ ಮೋಸ ಮಾಡಿ ಸಿಕ್ಕುಬಿದ್ದಿದ್ದರಿಂದ ಆತ್ಮಹತ್ಯೆಗೆ ಯತ್ನಿಸಿದ ಯುವಕನ ಕುಟುಂಬದವರಿಂದ ಆಕೆಗೆ ಏಟುಗಳು ಸಹ ಬಿದ್ದಿವೆ.

ಗುರು ವಕ್ಕುಂದ ಪರಿಚಯ ಮಾಡಿಕೊಂಡ ಐಶ್ಚರ್ಯ, ಆತನ ಜೊತೆ ಪ್ರೀತಿಸುವ ನಾಟಕವಾಡಿದ್ದಾಳೆ. ತೀವ್ರ ಹಣಕಾಸಿನ ಸಮಸ್ಯೆ ಇದ್ದು, ₹ 7 ಲಕ್ಷ ನೀಡಿದರೆ ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದಿದ್ದಾಳೆ. ಮೂರು ವರ್ಷದ ಬಳಿಕ ಗುರು ಮನೆಯವರಿಗೆ ಈ ವಿಚಾರ ಗೊತ್ತಾಗಿ, ಮೊದಲು ವಿರೋಧಿಸಿದ್ದಾರೆ. ಬಳಿಕ ಮದುವೆಗೂ ಒಪ್ಪಿಗೆ ಸೂಚಿಸಿದ್ದಾರೆ.

ಈ ಮಧ್ಯೆ ಐಶ್ವರ್ಯಳಿಗೆ ಸಂಜು ದೊಡ್ಡಮನಿ ಎಂಬಾತನ ಜತೆಗೂ ಸ್ನೇಹ ಬೆಳೆದಿದೆ. ಈಕೆಯ ಎಲ್ಲ ಸಂಗತಿ ತಿಳಿದ ಬಳಿಕ ಗುರು ವಕ್ಕುಂದ, ಹಣವನ್ನೂ ಕಳೆದುಕೊಂಡು, ಮದುವೆಯೂ ಇಲ್ಲದೇ ಕಂಗಾಲಾಗಿ ಸೋಮವಾರ ಸಂಜೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ವೇಳೆ ತಾನು ವಿಷ ಸೇವಿಸಿರುವುದಾಗಿ ಗುರು ಐಶ್ವರ್ಯಗೆ ಫೋನ್ ಮಾಡಿ ಹೇಳಿದ್ದಾನೆ.


ಗುರುವಿನ ಕುಟುಂಬ ಹಾಗೂ ಐಶ್ಚರ್ಯ ಜಿಲ್ಲಾಸ್ಪತ್ರೆಗೆ ಬಂದಿದ್ದಾರೆ. ಮಗನನ್ನು ನೋಡಲು ಬಂದ ಗುರು ತಾಯಿ ರತ್ನಮ್ಮ ಹಾಗೂ ಕುಟುಂಬದವರಿಗೆ ಐಶ್ಚರ್ಯ ಮೋಸ ಮಾಡಿರುವುದು ತಿಳಿದಿದ್ದು, ಜಿಲ್ಲಾಸ್ಪತ್ರೆ ಆವರಣದಲ್ಲಿಯೇ ಆಕೆ ಹಾಗೂ ಜೊತೆಗೆ ಬಂದಿದ್ದ ಯುವಕನನ್ನೂ ಥಳಿಸಿದ್ದಾರೆ.

ಧಾರವಾಡ ನಗರ ಠಾಣಾ ಪೊಲೀಸರು ವಿಷ ಸೇವನೆಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದಾದ ಬಳಿಕ ತನ್ನ ಮೇಲೆ ಗುರು ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಐಶ್ವರ್ಯಾ ಉಪನಗರ ಠಾಣೆ ಪೊಲೀಸರಿಗೆ ದೂರು ನೀಡಲು ಹೋಗಿದ್ದು, ಘಟನೆ ಬಗ್ಗೆ ಪರಿಶೀಲನೆ ನಡೆಯುತ್ತಿದೆ.