ಚೆಲುವನಾರಾಯಣಸ್ವಾಮಿ ಫೆ.10 ರಂದು ಪುನರ್ವಸು ಉತ್ಸವ

| Published : Feb 09 2025, 01:17 AM IST

ಸಾರಾಂಶ

ರಾಮಾನುಜಾಚಾರ್ಯರು ಯದುಗಿರಿಯ ಬೆಟ್ಟದ ಮೇಲೆ ಕಗ್ಗತ್ತಲ ಕಾಡಿನ ಮಧ್ಯೆ ಇದ್ದ ಹುತ್ತ ಕರಗಿಸಿ ಚೆಲುವನಾರಾಯಣ ಸ್ವಾಮಿಯ ದಿವ್ಯ ಮಂಗಳ ರೂಪವನ್ನು ಮಕರ ಶುಕ್ಲ ಪುನರ್ವಸು ನಕ್ಷತ್ರದಂದು ಜಗತ್ತಿಗೆ ಪ್ರಕಾಶಪಡಿಸಿ ಕರ್ನಾಟಕದ ಧೀಮಂತ ಅರಸ ವಿಷ್ಣುವರ್ಘನನಿಂದ ದೇಗುಲ ನಿರ್ಮಿಸಿದ್ದರು. ಈ ಕಾರಣ ಪ್ರತಿವರ್ಷ ತೈ ಪುನರ್ವಸು ಉತ್ಸವ ನಡೆಯುತ್ತಾ ಬಂದಿದೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಚೆಲುವನಾರಾಯಣಸ್ವಾಮಿ ದಿವ್ಯಕ್ಷೇತ್ರ ಜೀರ್ಣೋದ್ಧಾರಗೊಂಡ ವಾರ್ಷಿಕ ವಿಶೇಷ ಪುನರ್ವಸು ಉತ್ಸವ ಫೆ.10 ರಂದು ವೈಭವದಿಂದ ನಡೆಯಲಿದೆ.

ರಾಮಾನುಜಾಚಾರ್ಯರು ಯದುಗಿರಿಯ ಬೆಟ್ಟದ ಮೇಲೆ ಕಗ್ಗತ್ತಲ ಕಾಡಿನ ಮಧ್ಯೆ ಇದ್ದ ಹುತ್ತ ಕರಗಿಸಿ ಚೆಲುವನಾರಾಯಣ ಸ್ವಾಮಿಯ ದಿವ್ಯ ಮಂಗಳ ರೂಪವನ್ನು ಮಕರ ಶುಕ್ಲ ಪುನರ್ವಸು ನಕ್ಷತ್ರದಂದು ಜಗತ್ತಿಗೆ ಪ್ರಕಾಶಪಡಿಸಿ ಕರ್ನಾಟಕದ ಧೀಮಂತ ಅರಸ ವಿಷ್ಣುವರ್ಘನನಿಂದ ದೇಗುಲ ನಿರ್ಮಿಸಿದ್ದರು. ಈ ಕಾರಣ ಪ್ರತಿವರ್ಷ ತೈ ಪುನರ್ವಸು ಉತ್ಸವ ನಡೆಯುತ್ತಾ ಬಂದಿದೆ.ಪುನರ್ವಸು ಅಂಗವಾಗಿ ಮೇಲಕೋಟೆ ದೇವಾಲಯದಲ್ಲಿ ಇಡೀ ದಿನ ಧಾರ್ಮಿಕ ಕೈಂಕರ್ಯಗಳು ನೆರವೇರಲಿದೆ. ಶ್ರೀ ಭಾಷ್ಯಕಾರ ಸನ್ನಿಧಿ ವಂಗೀಪುರಂ ನಂಬಿ ಮನೆತನ ಪ್ರತಿವರ್ಷ ಈ ಮಹೋತ್ಸವವನ್ನು ವೈಭವದಿಂದ ನಡೆಸಿಕೊಂಡು ಬರುತ್ತಿದೆ. ರಾಮಾನುಜರ ಸನ್ನಿಧಿ ಅರ್ಚಕ ವಿದ್ವಾನ್ ಬಿ.ವಿ ಆನಂದಾಳ್ವಾರ್ ನೇತೃತ್ವದಲ್ಲಿ ಉತ್ಸವದ ಕೈಂಕರ್ಯಗಳು ನಡೆಯಲಿದೆ. ಪುನರ್ವಸು ಉತ್ಸವಕ್ಕಾಗಿ ದೇವಾಲಯ ಸಜ್ಜುಗೊಳ್ಳುತ್ತಿದೆ

ಸೋಮವಾರ ಬೆಳಗ್ಗೆ 4 ಗಂಟೆಗೆ ರಾಮಾನುಜರಿಗೆ ಅಭಿಷೇಕ 6 ಗಂಟೆಗೆ ಕಲ್ಯಾಣಿಗೆ ಉತ್ಸವ, 8.30ಕ್ಕೆ ಶ್ವೇತವಸ್ತ್ರಧಾರಣೆ ಗಧ್ಯತ್ರಯಗೋಷ್ಟಿ ತಿರುಪ್ಪಾವೈ ಶಾತ್ತುಮೊರೆ ನಡೆದು 9 ಗಂಟೆಗೆ ದೇವಾಲಯಕ್ಕೆ ರಾಮಾನುಜರ ಉತ್ಸವ ಆರಂಭವಾಗಲಿದೆ.

11 ಗಂಟೆಗೆ ದೇವಾಲಯದ ರಾಜಗೋಪುರದ ಬಳಿ ರಾಮಾನುಜ ನೂತ್ತಂದಾದಿ ಶಾತ್ತುಮೊರೆ ರಾಮಾನುಜರು ತಿರುನಾರಾಯಣನನ್ನು ಕಂಡು ನಿಜವಾದ ಬೆಳಕುಕಂಡೆ ನಾರಾಯಣನ ದರ್ಶನ ಮಾಡಿದೆ ಎಂದು ಸ್ತುತಿಸಿದ ಪಾಶುರದ ಪಾರಾಯಣ ನಡೆಯಲಿದೆ.

12 ಗಂಟೆಗೆ ವಂಗೀಪುರಂ ಮನೆತನದಿಂದ ಸ್ವಾಮಿಗೆ ನೂರಾರು ತಟ್ಟೆಗಳಲ್ಲಿ ಫಲಪುಷ್ಪ ಸಮರ್ಪಣೆಯ ಕೈಂಕರ್ಯ ನಡೆಯಲಿದೆ. 1.30 ರ ವೇಳೆಗೆ ತಿರುವಾರಾಧನೆ, ತೀರ್ಥಗೋಷ್ಠಿಗಳು ನಡೆಯಲಿವೆ. ರಾತ್ರಿ 8 ಗಂಟೆಗೆ ರಾತ್ರಿ ಪೂಜೆ ನಂತರ ರಾಮಾನುಜರ ಉತ್ಸವ ಸ್ವಸ್ಥಾನಕ್ಕೆ ತಲುಪಲಿದೆ.

ಫೆ.10 ಭಕ್ತರಿಗೆ ದೇವರದರ್ಶನ ಇಲ್ಲ

ಫೆ.೧೦ರಂದು ಪುನರ್ವಸು ಉತ್ಸವದ ಧಾರ್ಮಿಕ ಕೈಂಕರ್ಯ ನಡೆಯುವ ಕಾರಣ ಮಧ್ಯಾಹ್ನ ೪ ಗಂಟೆಯವರೆಗೆ ಭಕ್ತರಿಗೆ ಚೆಲುವನಾರಾಯಣಸ್ವಾಮಿ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಧಾರ್ಮಿಕ ಕೈಂಕರ್ಯಗಳು ಮುಕ್ತಾಯವಾದ ನಂತರ ದರ್ಶನಕ್ಕೆ ಅವಕಾಶವಿದೆ. ಆದರೆ, ಬೆಟ್ಟದೊಡೆಯ ಯೋಗಾನರಸಿಂಹನ ದೇವಾಲಯದಲ್ಲಿ ದೇವರದರ್ಶನ ಎಂದಿನಂತೆ ಇರಲಿದೆ ಎಂದು ದೇಗುಲದ ಮೂಲಗಳು ತಿಳಿಸಿವೆ.