ಸಾರಾಂಶ
ತಾಲೂಕಿನ ಮುದ್ನಾಳ ಗ್ರಾಮದ ಉಮ್ಲಾ ನಾಯಕ ತಾಂಡಾದ ರೈತ ವಿಜಯ ಜಮೀನಿನಲ್ಲಿ ಚರಗ ಚೆಲ್ಲಿ ಸಡಗರದಿಂದ ಎಳ್ಳ ಅಮವಾಸ್ಯೆ ಹಬ್ಬವನ್ನು ಆಚರಿಸಿದರು.
ಜೋಳ ರೈತನಿಗೆ ಹಬ್ಬದ ಸಂಭ್ರಮ ಹೆಚ್ಚಿಸುವ ಬೆಳೆ : ಉಮೇಶ್ ಕನ್ನಡಪ್ರಭ ವಾರ್ತೆ ಯಾದಗಿರಿ
ತಾಲೂಕಿನ ಮುದ್ನಾಳ ಗ್ರಾಮದ ಉಮ್ಲಾ ನಾಯಕ ತಾಂಡಾದ ರೈತ ವಿಜಯ ಜಮೀನಿನಲ್ಲಿ ಚರಗ ಚೆಲ್ಲಿ ಸಡಗರದಿಂದ ಎಳ್ಳ ಅಮವಾಸ್ಯೆ ಹಬ್ಬವನ್ನು ಆಚರಿಸಿದರು.ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಮಾತನಾಡಿ, ಇದು ಅಪ್ಪಟ ದೇಶಿ ಆಹಾರ ಸಂಸ್ಕೃತಿಯ ಅಮವಾಸ್ಯೆಯಾಗಿದ್ದು, ಪುರಾತನ ಕಾಲದಿಂದಲೂ ನಮ್ಮ ಹಿರಿಯರು ಮಾಡಿಕೊಂಡು ಬಂದ ಸಾಂಪ್ರದಾಯಿಕ ಹಬ್ಬವನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಒಳ್ಳೆಯ ಬೆಳವಣಿಗೆ. ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗೆ ಚರಗ ಚೆಲ್ಲುವ ಮೂಲಕ ಭೂಮಿ ತಾಯಿಗೆ ಸ್ಮರಿಸುವ ವಿಶಿಷ್ಟವಾದ ಈ ಹಬ್ಬದಿಂದಾಗಿ ರೈತರು ನೋವಿನಲ್ಲಿ ಕೂಡ ಸಂತಸ, ಹರ್ಷ ಪಡುತ್ತಾರೆ ಎಂದು ನುಡಿದರು.ಈ ಹಬ್ಬದಂದು ವಿಶೇಷವಾಗಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೇವಲ ಒಂದೇ ಬಾರಿ ಮಳೆ ಬಂದರೆ ಸಾಕು. ಕೇವಲ ಇಬ್ಬನಿಗೆ ಬೆಳೆದು ನಿಲ್ಲುವ ಬೆಳೆ ಜೋಳದ ಬೆಳೆಯಾಗಿದೆ. ಈ ಬೆಳೆ ಬೆಳೆಯುವುದರಿಂದ ರೈತರಿಗೆ ಹೊಟ್ಟೆ ತುಂಬುತ್ತದೆ. ವರ್ಷಪೂರ್ತಿ ರೈತರ ಮಿತ್ರರಾದ ಎತ್ತು ಹಾಗೂ ದನ-ಕರುಗಳಿಗೆ ಸೊಪ್ಪೆ ಲಭಿಸುತ್ತದೆ. ಆದರೆ, ಈಚೆಗೆ ರೈತರು ಕೇವಲ ದುಡ್ಡಿನ ಬೆಳೆಗೆ ಒತ್ತು ಕೊಡುತ್ತಿರುವುದು ಸಾಮಾನ್ಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಹತ್ತಿ, ಸೂರ್ಯಪಾನ ಮುಂತಾದ ವಾಣಿಜ್ಯ ಬೆಳೆಗಳಿಗೆ ಮುಂದಾದ ಸಂದರ್ಭದಲ್ಲಿ ಈದೀಗ ಅತಿವೃಷ್ಟಿಯಲ್ಲಿ ಜೋಳ ಹೆಚ್ಚಿಗೆ ಬೆಳೆದಿರುವುದು ಕಂಡುಬರುತ್ತಿದೆ. ಜೋಳ ಅತಿವೃಷ್ಟಿಯಲ್ಲಿ ರೈತನ ಕೈ ಹಿಡಿದು ರೈತನಿಗೆ ಹಬ್ಬದ ಸಂಭ್ರಮ ತಂದುಕೊಡುವ ಬೆಳೆಯಾಗಿದೆ ಎಂದರು.ಈ ಹಬ್ಬದ ಸಂದರ್ಭದಲ್ಲಿ ರೈತರು ತಮ್ಮ ಮನೆಯನ್ನು ಸ್ವಚ್ಛಗೊಳಿಸಿ ಎತ್ತು ಬಂಡಿಗಳನ್ನು ಸಿಂಗರಿಸಿ ಹೊಲಕ್ಕೆ ಹೋಗಿ ಸಂಭ್ರಮದಿಂದ ಭೂಮಿ ತಾಯಿಗೆ ಎಲ್ಲ ಮೂಲೆಗಳಿಗೆ ಅನ್ನದ ತುತ್ತುಗಳನ್ನು ಚರಗ ಚೆಲ್ಲಿ ಬೆಳೆ ಸಮೃದ್ಧಿಯಾಗಿ ಬೆಳೆಯಿಲಿ ಎಂದು ಪ್ರಾರ್ಥಿಸಿದರು. ಬಳಿಕ ಎತ್ತುಗಳಿಗೆ ಅನ್ನದ ತುತ್ತುಗಳನ್ನು ತಿನ್ನಿಸಿ, ಸಾಮೂಹಿಕ ವನಭೋಜನ ಸವಿದರು.ಗೋಪಾಲ, ಜೈರಾಮ, ಚಾಂಧಿ ಬಾಯಿ, ಹೆಮಲಿ ಬಾಯಿ, ಗನ್ನಿ ಬಾಯಿ, ಶಾಂತಿ ಬಾಯಿ ಪೂರಿ ಬಾಯಿ, ದೇವಿ ಬಾಯಿ, ಜಮಲಿ ಬಾಯಿ, ಚಂದ್ರು, ರಾಜು, ಸೋನಿ ಬಾಯಿ, ಕರಿ ಬಾಯಿ, ಚಾಂದಿ ಬಾಯಿ, ಗಂಗಿ ಬಾಯಿ ಸೇರಿದಂತೆ ಇತರರಿದ್ದರು.