ಸಾರಾಂಶ
ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಹಾಗೂ ಅಧಿಕ ಮೌಲ್ಯದ ಮತ್ತು ವಿದೇಶಿ ತೋಟಗಾರಿಕಾ ಬೆಳೆಗಳ ಅಭಿವೃದ್ಧಿ ಸಂಘದ ಸಹಯೋಗದಲ್ಲಿ ಮಾಡಹಾಗಲ ಮತ್ತು ಫ್ಯಾಷನ್ ಫ್ರುಟ್ ಹಣ್ಣಿನ ಕ್ಷೇತ್ರೋತ್ಸವ ಮತ್ತು ತರಬೇತಿ ಕಾರ್ಯಕ್ರಮ ಚೆಟ್ಟಳ್ಳಿಯ ತೋಟಗಾರಿಕಾ ಕೇಂದ್ರದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಹಾಗೂ ಅಧಿಕ ಮೌಲ್ಯದ ಮತ್ತು ವಿದೇಶಿ ತೋಟಗಾರಿಕಾ ಬೆಳೆಗಳ ಅಭಿವೃದ್ಧಿ ಸಂಘದ ಸಹಯೋಗದಲ್ಲಿ ಮಾಡಹಾಗಲ ಮತ್ತು ಫ್ಯಾಷನ್ ಫ್ರುಟ್ ಹಣ್ಣಿನ ಕ್ಷೇತ್ರೋತ್ಸವ ಮತ್ತು ತರಬೇತಿ ಕಾರ್ಯಕ್ರಮ ಚೆಟ್ಟಳ್ಳಿಯ ತೋಟಗಾರಿಕಾ ಕೇಂದ್ರದಲ್ಲಿ ನಡೆಯಿತು.ಮಾಡಹಾಗಲ ಮತ್ತು ಫ್ಯಾಷನ್ ಫ್ರುಟ್ ಹಣ್ಣಿನ ಪ್ರದರ್ಶನವನ್ನು ದಕ್ಷಿಣ ಕನ್ನಡ ಪುತ್ತೂರು ಗೇರು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಜೆ.ದಿನಕರ ಅಡಿಗ ಉದ್ಘಾಟಿಸಿ, ಮಾಡಹಾಗಲ ಮತ್ತು ಫ್ಯಾಷನ್ ಫ್ರುಟ್ ಹಣ್ಣಿನ ಆರೋಗ್ಯಕರ ಲಾಭ ಹಾಗೂ ರೈತರು ಮೌಲ್ಯವರ್ಧಿತ ಆದಾಯದ ಮೂಲವಾಗಿಸಿ ಹೆಚ್ಚಿನ ಲಾಭ ಪಡೆಯಲು ತಿಳಿಸಿದರು.
ಪ್ರಗತಿ ಪರ ರೈತ ಹಾಗೂ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ನಡಿಕೇರಿಯಂಡ ಬೋಸ್ ಮಂದಣ್ಣ ಮಾತನಾಡಿ, ಸಂಘದ ಉದ್ದೇಶ ಹಾಗೂ ಗುರಿಯ ಬಗ್ಗೆ ತಿಳಿಸುವ ಮೂಲಕ ಹೆಚ್ಚಿನ ರೈತರು ಸಂಘದ ಸದಸ್ಯರಾಗಬೇಕೆಂದರು.ಹಿರಿವಿಜ್ಞಾನಿ ಹಾಗೂ ಕೇಂದ್ರದ ಪ್ರಭಾರ ಮುಖ್ಯಸ್ಥ ಡಾ. ಮುರುಳಿಧರ್ ಬಿ.ಎಂ. ಮಾತನಾಡಿ, ಕೇಂದ್ರದ ಅಭಿವೃದ್ಧಿಯ ಫ್ಯಾಷನ್ ಫ್ರುಟ್ನ ಕಾವೇರಿ ತಳಿ ಹಾಗೂ ಮಾಡಹಾಗಲ ಕಾಯಿಯ ಅರ್ಕಾ ಭಾರತ್ ತಳಿಯ ವಿಶೇಷತೆಗಳನ್ನು ವಿಸ್ತರಣೆಗೊಳಿಸಿರುವ ಬಗ್ಗೆ ತಿಳಿಸಿದರು.
ತಾಂತ್ರಿಕ ವಿಷಯ ಮಂಡನೆ:ಫ್ಯಾಷನ್ ಫ್ರುಟ್ ಹಣ್ಣಿನ ವೈಜ್ಞಾನಿಕ ಕೃಷಿಯ ಬಗ್ಗೆ ಡಾ. ನಯನ್ ದೀಪಕ್, ಕೃಷಿ ವಿಜ್ಞಾನಿಗಳು ಹಾಗೂ ಮಾಡಹಾಗಲ ಕಾಯಿಯ ವೈಜ್ಞಾನಿಕ ಕೃಷಿಯ ಬಗ್ಗೆ ಹಿರಿಯ ವಿಜ್ಞಾನಿ ಡಾ. ರಾಜೇಂದಿರನ್ ಎಸ್. ತಿಳಿಸಿದರು. ನಂತರ ರೈತರು - ಕೃಷಿ ವಿಜ್ಞಾನಿಗಳ ಸಂವಾದ ನಡೆಯಿತು. ನಂತರ ಮಾಡಹಾಗಲ ಮತ್ತು ಫ್ಯಾಷನ್ ಫ್ರುಟ್ ಹಣ್ಣಿನ ಕ್ಷೇತ್ರ ಭೇಟಿ ನಡೆಯಿತು.
ಐಎಚ್ಆರ್ ಗೀತೆಯೊಂದಿಗೆ ಪ್ರಾರಂಭಗೊಂಡ ಸಭಾ ಕಾರ್ಯಕ್ರಮದಲ್ಲಿ ಡಾ.ರಾಜೇಂದಿರನ್ ಸ್ವಾಗತಿಸಿದರು. ಡಾ.ನಯನ ದೀಪಕ್ ಜಿ. ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಮಾಡಹಾಗಲ ಮತ್ತು ಫ್ಯಾಷನ್ ಫ್ರುಟ್ ಹಣ್ಣಿನ ಕೈಪಿಡಿ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಧಾರವಾಡ, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳ ರೈತರು ಭಾಗವಹಿಸಿದ್ದರು.