ಕನ್ನಡಪ್ರಭ ವಾರ್ತೆ ಮಂಡ್ಯ
ಛತ್ರಪತಿ ಶಾಹು ಮಹಾರಾಜ್ ಮೀಸಲಾತಿಯ ಜನಕ. ಕರ್ನಾಟಕದ ಮೈಸೂರು ಸಂಸ್ಥಾನದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಶೇ.75 ಮೀಸಲಾತಿ ನೀಡಲು ಪ್ರೇರಣೆಯಾಗಿದ್ದು ಇದೇ ಶಾಹು ಮಹಾರಾಜ್ ಎಂದು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ತಿಳಿಸಿದರು.ಬಿಎಸ್ಪಿ ಪಕ್ಷದ ವತಿಯಿಂದ ಮಂಡ್ಯದಲ್ಲಿ ಛತ್ರಪತಿ ಶಾಹು ಮಹಾರಾಜ ಮೀಸಲಾತಿ ಜಾರಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ 1902ರ ಜುಲೈ 26ರಂದು ಕೊಲ್ಲಾಪುರ ಸಂಸ್ಥಾನದಲ್ಲಿ ಬ್ರಾಹ್ಮಣೇತರರಿಗೆ ಮೀಸಲಾತಿ ಜಾರಿಗೆ ತಂದ ಮಹಾಪುರುಷ ಛತ್ರಪತಿ ಶಾಹು ಮಹಾರಾಜ್. ಅವರು ಮೀಸಲಾತಿ ಜಾರಿಗೆ ತರದಿದ್ದರೆ ಇಂದಿಗೂ ಸಹ ಓಬಿಸಿ ವರ್ಗಗಳು ಮತ್ತಷ್ಟು ಹಿಂದುಳಿದಿರುತ್ತಿದ್ದವು ಎಂದರು.
ಈ ಇಬ್ಬರು ಮಹಾಪುರುಷರಿಂದಾಗಿ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡಲು ಸಾಧ್ಯವಾಯಿತು. ಹಾಗಾಗಿ ಅಂಬೇಡ್ಕರ್ ಅವರು ಛತ್ರಪತಿ ಶಾಹು ಮಹಾರಾಜರನ್ನು ಸಾಮಾಜಿಕ ಪ್ರಜಾಪ್ರಭುತ್ವದ ಪಿತಾಮಹ ಎಂದು ಕರೆದಿದ್ದಾರೆ ಎಂದರು.ದೇಶದಲ್ಲಿ ಇಂದು ಹಿಂದುಳಿದ ಜಾತಿಗಳಲ್ಲಿ ಶಿಕ್ಷಣ ಮತ್ತು ಉದ್ಯೋಗಗಳನ್ನು ಪಡೆದಿರುವ ಎಲ್ಲರೂ ಈ ಮಹಾಪುರುಷರನ್ನು ಸ್ಮರಿಸಿಕೊಳ್ಳಬೇಕು. ಇಂದಿಗೂ ಸಹ ಮೇಲ್ವರ್ಗಗಳು ಮೀಸಲಾತಿಯನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ವಿರೋಧಿಸುತ್ತಾರೆ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಶೇ.70 ಕ್ಕಿಂತ ಹೆಚ್ಚು ಉನ್ನತ ಉದ್ಯೋಗಗಳನ್ನು ಪಡೆದಿರುವ ಮೇಲ್ವರ್ಗಗಳು ಆರ್ಥಿಕವಾಗಿ ಹಿಂದುಳಿದಿರುವ ಹೆಸರಿನಲ್ಲಿ ಶೇ.10 ರಷ್ಟು ಮೀಸಲಾತಿ ಪಡೆಯುತ್ತಿರುವುದರ ಬಗ್ಗೆ ಚಕಾರ ಎತ್ತುವುದಿಲ್ಲ ಎಂದು ಟೀಕಿಸಿದರು.
ಹಿಂದುಳಿದ ವರ್ಗಗಳು ಜಾತಿ ಮತ್ತು ಧರ್ಮದ ಆಧಾರದಲ್ಲಿ ಕಿತ್ತಾಡುತ್ತಾ ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಕಾನ್ಷಿರಾಮ್ ಅವರು ಬಹುಜನ ಸಮಾಜ ಪಾರ್ಟಿ ಕಟ್ಟಿ ‘ಮಂಡಲ ವರದಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ’ ಮಾಡಿ ಇಂದು ಹೋರಾಡಿ ಮಂಡಲ್ ವರದಿಯನ್ನು ಜಾರಿಗೊಳಿಸಲು ಮುನ್ನುಡಿ ಬರೆದರು. ಈ ದೇಶದಲ್ಲಿ ಸಂವಿಧಾನ ಮತ್ತು ಮೀಸಲಾತಿ ಉಳಿಯಬೇಕೆಂದರೆ ದೇಶದ ಬಡವರು ಮತ್ತು ಹಿಂದುಳಿದ ಜಾತಿಗಳು ಬಿಎಸ್ಪಿಯನ್ನು ಬೆಂಬಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಎಸ್.ಶಿವಶಂಕರ್, ರಾಜ್ಯ ಸಮಿತಿ ಸದಸ್ಯ ಚೆಲುವರಾಜು, ಜಿಲ್ಲಾ ಉಸ್ತುವಾರಿ ವಕೀಲ ಮಹದೇವ್, ವೀರಭದ್ರಯ್ಯ, ನಿವೃತ್ತ ನೌಕರರ ಸಂಘದ ಗುರುಮೂರ್ತಿ, ತಮ್ಮಯ್ಯ, ಕುಮಾರ್, ಅನಿಲ್, ಗಂಗಾಧರ್, ನವೀನ್, ಸತೀಶ್, ದಿನೇಶ್ ಮುಂತಾದವರಿದ್ದರು.