ಪೊಲೀಸರ ಬೇಜವಾಬ್ದಾರಿಯಿಂದ ಮಗು ಸಾವು ಪ್ರಕರಣ ಸೂಕ್ತ ತನಿಖೆ: ಚಲುವರಾಯಸ್ವಾಮಿ

| Published : May 28 2025, 12:17 AM IST / Updated: May 28 2025, 12:18 AM IST

ಪೊಲೀಸರ ಬೇಜವಾಬ್ದಾರಿಯಿಂದ ಮಗು ಸಾವು ಪ್ರಕರಣ ಸೂಕ್ತ ತನಿಖೆ: ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಸಂಚಾರಿ ಪೊಲೀಸರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ. ಪೋಷಕರು ಹೇಳಿರುವುದು ನ್ಯಾಯಯುತವಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಪೊಲೀಸರು ಕೆಲಸ ಮಾಡಬೇಕು. ಘಟನೆ ನಂತರ ಮುನ್ನೆಚ್ಚರಿಕೆಯಾಗಿ ಮೂರು ಜನ ಪೊಲೀಸರನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ತನಿಖೆ ಮಾಡಿಸಿ ಮುಂದಿನ ಕ್ರಮಕೈಗೊಳ್ಳಲು ಐಜಿ, ಎಸ್ಪಿ ಜೊತೆ ಮಾತನಾಡಿದ್ದೇನೆ.

ಕನ್ನಡಪ್ರಭ ವಾರ್ತೆ ಮದ್ದೂರು

ಮಗು ಮೃತಪಟ್ಟ ಹಿನ್ನೆಲೆಯಲ್ಲಿ ಐಜಿ, ಎಸ್ಪಿ ಜೊತೆ ಮಾತನಾಡಿದ್ದೇನೆ. ಘಟನೆ ಕುರಿತು ಸೂಕ್ತ ತನಿಖೆಗೆ ಮಾಡಿ ಮುಂದಿನ ಕ್ರಮಕ್ಕೆ ಸೂಚಿಸಿರುವುದಾಗಿ ಜಿಲ್ಲಾ ಉಸ್ತುವಾರಿ ಎನ್.ಚಲುವರಾಯಸ್ವಾಮಿ ತಿಳಿಸಿದರು.

ತಾಲೂಕಿನ ಗೊರವನಹಳ್ಳಿಗೆ ಮಂಡ್ಯ ಕ್ಷೇತ್ರದ ಶಾಸಕ ರವಿಕುಮಾರ್ ರೊಂದಿಗೆ ಭೇಟಿ ನೀಡಿದ ಸಚಿವರು ಮಂಡ್ಯದಲ್ಲಿ ಸೋಮವಾರ ಪೊಲೀಸರ ನಿರ್ಲಕ್ಷ್ಯದಿಂದ ಮೃತಪಟ್ಟ ಹೃತೀಕ್ಷಾ ಬಾಲಕಿಯ ತಂದೆ ಅಶೋಕ್ ಮತ್ತು ತಾಯಿ ವಾಣಿ ಅವರಿಗೆ ಸಾಂತ್ವನ ಹೇಳಿ, ಇಬ್ಬರು ವೈಯಕ್ತಿಕ ಪರಿಹಾರ ನೀಡಿದರು.

ಸಂಚಾರಿ ಪೊಲೀಸರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ. ಪೋಷಕರು ಹೇಳಿರುವುದು ನ್ಯಾಯಯುತವಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಪೊಲೀಸರು ಕೆಲಸ ಮಾಡಬೇಕು. ಘಟನೆ ನಂತರ ಮುನ್ನೆಚ್ಚರಿಕೆಯಾಗಿ ಮೂರು ಜನ ಪೊಲೀಸರನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ತನಿಖೆ ಮಾಡಿಸಿ ಮುಂದಿನ ಕ್ರಮಕೈಗೊಳ್ಳಲು ಐಜಿ, ಎಸ್ಪಿ ಜೊತೆ ಮಾತನಾಡಿದ್ದೇನೆ ಎಂದರು.

ಪುಟ್ಟ ಹೆಣ್ಣು ಮಗು. ಪೋಷಕರ ಕಣ್ಣೀರು ನೋಡಿದರೆ ಯಂತವರಿಗೂ ದುಃಖ ಬರುತ್ತೆ. ಕಣ್ಣ ಮುಂದೆ ಮಗು ಬದುಕಿಸಿಕೊಳ್ಳಲು ಆಗಿಲ್ಲ. ಇದರಲ್ಲಿ ಡಾಕ್ಟರ್‌ಗಳದು ತಪ್ಪು ಇದೆ. ಅವರು ಕೂಡ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಬೇಕಿತ್ತು. ಡಿಸಿ, ಸಿಇಓ, ಎಸ್ಪಿ ಜೊತೆ ಸಭೆ ಮಾಡಿ ಮುಂದೆ ಇಂತಹ ಘಟನೆಗಳು ಆಗದಂತೆ ಪೊಲೀಸರ ನಿರ್ಲಕ್ಷ್ಯತೆ ಬಗ್ಗೆ ಕ್ರಮ ವಹಿಸಲಾಗುವುದು ಎಂದರು.

ಪೊಲೀಸರ ಪರಿಶೀಲನೆ ಅಡೋದು ಸಹಜ. ಅವರು ವರ್ತನೆ ಬದಲಿಸಿಕೊಳ್ಳಬೇಕು. ಸಾರ್ವಜನಿಕರು ಕೂಡ ಹೆಲ್ಮೆಟ್ ಹಾಕಬೇಕು, ಆಕಸ್ಮಿಕವಾಗಿ ಈ ಘಟನೆ ನಡೆದಿದೆ. ಮುಂದೆ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸುವುದಾಗಿ ತಿಳಿಸಿದರು.

ಪೋಷಕರಿಗೆ ದುಡ್ಡು ಮುಖ್ಯವಲ್ಲ. ಮಗು ಕಳೆದುಕೊಂಡು ಸಂಕಟದಲ್ಲಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿ ಬರೆಯಲು ಹೇಳಿದ್ದೇನೆ. ವಿಶೇಷ ಪ್ರಕರಣ ಸಿಎಂ ಪರಿಹಾರ ನಿಧಿ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ಆಸ್ಪತ್ರೆಯಲ್ಲಿ ಸೌಲಭ್ಯಗಳಿವೆ. ಇದರ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ಪ್ರತಿ ತಾಲೂಕಿನಲ್ಲಿ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಬೇಕು. ಬೀದಿ ನಾಯಿಗಳ ನಿಯಂತ್ರಣ ಮಾಡಬೇಕು. ಆದರೆ, ಪ್ರಾಣಿಗಳ ಹತ್ಯೆ ಕೂಡ ಮಾಡುವಾಗಿಲ್ಲ. ಇದನ್ನು ಕಾನೂನು ಪ್ರಕಾರ ಮಾಡಲಾಗುವುದು ಎಂದರು.