ಸಾರಾಂಶ
ಮಕ್ಕಳಿಗೆ ದಾರ್ಶನಿಕರ, ಮಹಾತ್ಮರ ಸಂದೇಶಗಳ ತಿಳಿವಳಿಕೆ ನೀಡುವುದು ಅವಶ್ಯಕ. ಮಕ್ಕಳು, ಯುವಜನರು ವಿದ್ಯಾರ್ಜನೆ ಎಂಬ ಬಂಡಿಯನ್ನು ಓಡಿಸುವ ಮೂಲಕ ಪ್ರಜ್ಞಾವಂತರಾಗಿ ಈ ದೇಶದ ಉತ್ತಮ ಪ್ರಜೆಗಳಾಗಬೇಕು.
ಧಾರವಾಡ: ಮಕ್ಕಳಲ್ಲಿ ಸಂಸ್ಕೃತಿಯನ್ನು ಬಿಂಬಿಸಿದಾಗ ಮಾತ್ರ ಸುಂಸ್ಕೃತರನ್ನಾಗಿ ಮಾಡಲು ಸಾಧ್ಯ ಎಂದು ಸ್ತ್ರೀರೋಗ ತಜ್ಞೆ ಡಾ. ಮಾಧುರಿ ಕಬಾಡಿ ಪೂಜಾರಿ ಹೇಳಿದರು.
ಚರಂತಿಮಠ ಗಾರ್ಡನದಲ್ಲಿರುವ ಶ್ರೀ ಬನಶಂಕರಿ ಭವನದಲ್ಲಿಂದು ಶರಣ ಸಂಗಮ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಸತ್ಕಾರ ಮತ್ತು ಸೇವಾ ನಿವೃತ್ತರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಮಕ್ಕಳಿಗೆ ದಾರ್ಶನಿಕರ, ಮಹಾತ್ಮರ ಸಂದೇಶಗಳ ತಿಳಿವಳಿಕೆ ನೀಡುವುದು ಅವಶ್ಯಕ. ಮಕ್ಕಳು, ಯುವಜನರು ವಿದ್ಯಾರ್ಜನೆ ಎಂಬ ಬಂಡಿಯನ್ನು ಓಡಿಸುವ ಮೂಲಕ ಪ್ರಜ್ಞಾವಂತರಾಗಿ ಈ ದೇಶದ ಉತ್ತಮ ಪ್ರಜೆಗಳಾಗಬೇಕು. ಸಮಯದ ಸದ್ಬಳಕೆ ಮಾಡುವ ಮೂಲಕ ಸದ್ವಿಚಾರದ ಮಾರ್ಗದತ್ತ ಸಾಗಿ ಸಾತ್ವಿಕ ಗುಣ ಬೆಳೆಸಿಕೊಂಡು ನಿಮ್ಮ ಜೀವನದ ಬಂಡಿಯನ್ನು ಸುಗಮವಾಗಿ, ಸ್ವಾಸ್ಥ್ಯವಾಗಿ ನಡೆಸಬೇಕು ಎಂದರು.
ಶ್ರೀ ಬನಶಂಕರಿ ಭವನ ಸಂಸ್ಥಾಪಕ ಅಧ್ಯಕ್ಷ ಶಿವಾನಂದ ಲೋಲೇನವರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿ, ಸಾಧನೆಯಲ್ಲಿ ಸಾಮರಸ್ಯ ಪಡೆಯುವುದಕ್ಕೆ ಅರಿವು ಅವಶ್ಯ. ನಮ್ಮ ಶರೀರದಲ್ಲಿ ಸುಪ್ತವಾದ ಜ್ಯೋತಿಯನ್ನು ಜಾಗೃತಗೊಳಿಸಿ ಸಹಜ ರೀತಿಯಲ್ಲಿ ನೈಸರ್ಗಿಕ, ವೈಚಾರಿಕತೆಯ ಅನುಭಾವವನ್ನು ನಮ್ಮ ಮನದಾಳದಲ್ಲಿ ತುಂಬಿಸಿಕೊಳ್ಳಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಬಸವ ಕೇಂದ್ರ ಅಧ್ಯಕ್ಷ ಸಿದ್ದರಾಮಣ್ಣ ನಡಕಟ್ಟಿ ಮಾತನಾಡಿ, ಆಧ್ಯಾತ್ಮಿಕ ಚಿಂತನೆ, ಉಪನ್ಯಾಸ ಹಾಗೂ ಸತ್ಸಂಗ, ಪ್ರವಚನ, ಸಾಮಾಜಿಕ, ಕಾರ್ಯಕ್ರಮದಲ್ಲಿ ಜ್ಞಾನಿಗಳಿಂದ ಅನುಭಾವ ಒದಗಿಸುವುದು ಅವಶ್ಯವಾಗಿದೆ ಎಂದರು.
ಆಕಾಶವಾಣಿ ಕಾರ್ಯಕ್ರಮ ನಿರ್ದೇಶಕ ಶರಣಬಸವ ಚೋಳಿನ, ಬಸವಕೇಂದ್ರ ಕಾರ್ಯದರ್ಶಿ ಬಸವಂತ ತೋಟದ, ರೋಟರಿ ಕ್ಲಬ್ ಅಧ್ಯಕ್ಷ ಪಿ.ಕೆ. ನಂದ್ಯಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಗೀತಾ ಮಠಪತಿ ನಿರೂಪಿಸಿದರು. ಲತಾ ದೇವಾಂಗದ ಸ್ವಾಗತಿಸಿದರು. ರವಿಕುಮಾರ ಪ್ರಾಸ್ತಾವಿಕ ಮಾತನಾಡಿದರು. ರಾಘವೇಂದ್ರ ವಂದಿಸಿದರು.