ಸಾರಾಂಶ
ಜಿಲ್ಲೆಯಾದ್ಯಂತ ಸಂಭ್ರಮ । ಶಾಲೆಗಳಿಗೆ ಶೃಂಗಾರ । ಮಕ್ಕಳಿಗೆ ಪುಷ್ಪಾರ್ಚನೆ, ಆರತಿ ಮಾಡಿ ಸ್ವಾಗತ
ಕನ್ನಡಪ್ರಭ ವಾರ್ತೆ ಶಿವಮೊಗ್ಗ2025-26ನೇ ಶೈಕ್ಷಣಿಕ ಸಾಲು ಆರಂಭಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಏಕಕಾಲಕ್ಕೆ ಶುಕ್ರವಾರ ಸರ್ಕಾರಿ ಶಾಲೆಗಳು ಶುರುವಾದವು. ಮೊದಲ ಮಕ್ಕಳು ಬಹಳ ಹುರುಪಿನಿಂದ ಆಗಮಿಸಿದರು. ಇದರೊಂದಿಗೆ ಶಾಲೆಗಳಲ್ಲಿ ಮಕ್ಕಳಿಂದಾಗಿ ಮತ್ತೆ ಕಳೆಗಟ್ಟಿದ ವಾತಾವರಣ ನಿರ್ಮಾಣವಾಗಿತ್ತು.
ಸರ್ಕಾರದ ಆದೇಶದಂತೆ ಮೇ 29 ರಿಂದಲೇ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭಗೊಂಡರೂ, ಸರ್ಕಾರಿ ಶಾಲೆಗಳಲ್ಲಿನ ಶಾಲಾ ಪ್ರಾರಂಭೋತ್ಸವನ್ನು ಜಿಲ್ಲಾ ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಶುಕ್ರವಾರ ಹಮ್ಮಿಕೊಂಡಿತ್ತು.ಈ ಹಿನ್ನೆಲೆಯಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿ ಶಾಲೆಗಳನ್ನು ತಳಿರು ತೋರಣಗಳಿಂದ ಶೃಂಗರಿಸಿ, ಮಕ್ಕಳನ್ನು ಶಾಲೆಗಳಿಗೆ ವಿಶೇಷವಾಗಿ ಬರಮಾಡಿಕೊಂಡರು. ಬೆಳಿಗ್ಗೆ ಶಾಲಾ ಆರಂಭದ ಸಮಯಕ್ಕೆ ಮಕ್ಕಳು ಶಾಲೆಯ ಆವರಣಕ್ಕೆ ಪ್ರವೇಶಿಸುತ್ತಿದ್ದಂತೆ ಶಿಕ್ಷಕರು ಪುಷ್ಪಾರ್ಚನೆ ಮಾಡಿ, ಹೂವು, ಬಲೂನ್ ನೀಡಿ, ಶೈಕ್ಷಣಿಕ ವರ್ಷಕ್ಕೆ ಸ್ವಾಗತಿಸಿದರು.
ಮಕ್ಕಳಿಗೆ ಆರತಿ ಎತ್ತುವ ಮೂಲಕ, ಸಮವಸ್ತ್ರ ವಿತರಣೆ, ಪುಠ್ಯಪುಸ್ತಕ ವಿತರಣೆ ಸೇರಿದಂತೆ ಹೀಗೆ ವಿವಿಧ ಬಗೆಯಲ್ಲಿ ಮಕ್ಕಳನ್ನು ಬರಮಾಡಿಕೊಳ್ಳಲಾಯಿತು. ಅಲ್ಲದೆ, 1ನೇ ತರಗತಿಗೆ 12 ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳುವುದರ ಮೂಲಕ ದಾಖಲಾತಿ ಪ್ರಕ್ರಿಯೆಗೆ ಶುಕ್ರವಾರವೇ ಚಾಲನೆ ನೀಡಲಾಯಿತು.ಶಿವಮೊಗ್ಗ ನಗರ ಸೇರಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮೊದಲ ದಿನವೇ ಮಕ್ಕಳು ಹೊಸ ಹುರುಪಿನೊಂದಿಗೆ ಉತ್ಸಾಹದಿಂದ ಶಾಲೆಗಳತ್ತ ಹೆಜ್ಜೆ ಹಾಕಿದರು. ಶಿವಮೊಗ್ಗದ ದುರ್ಗಿಗುಡಿ ಸರ್ಕಾರಿ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ವಿಶೇಷವಾಗಿ ಗಮನ ಸೆಳೆಯಿತು. ಬೆಳಗ್ಗೆ ಮಕ್ಕಳು ಶಾಲೆಗೆ ಆಗಮಿಸುತ್ತಿದ್ದಂತೆ ಶಾಲಾ ಪ್ರವೇಶದ ಮುಂಬಾಗಿಲಿನಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿ ಮಕ್ಕಳಿಗೆ ಆರತಿ ಎತ್ತಿ ಶಾಲೆಗೆ ಬರಮಾಡಿಕೊಂಡರು.
ಶಾಲಾ ಆರಂಭದ ಹಿನ್ನೆಲೆ ಶಾಲೆಯ ಆವರಣ, ತರಗತಿ ಕೊಠಡಿಗಳು, ಬಿಸಿಯೂಟದ ತಯಾರಿಕೆ ಮನೆಗಳನ್ನು ಮೂರು ದಿನದ ಮುಂಚೆಯೇ ಸಚ್ಚಗೊಳಿಸಲಾಗಿತ್ತು. ಈ ಸಂಬಂಧ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಸುತ್ತೂಲೆ ಹೊರಡಿಸಿದ್ದರು. ಈ ಆದೇಶದ ಹಿನ್ನೆಲೆಯಲ್ಲಿ ನಿನ್ನೆ ಶಿವಮೊಗ್ಗ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ನಾಯ್ಕ್ ಅಬ್ಬಲಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶಾಲಾ ಶಿಕ್ಷಕರೊಂದಿಗೆ ಕಳೆದ ವರ್ಷದ ಅನುದಾನದಲ್ಲಿ ತೆಗೆದುಕೊಂಡಿರುವ ವಾಟರ್ ಗನ್ನೊಂದಿಗೆ ಶಾಲಾ ಸ್ವಚ್ಛತೆಯಲ್ಲಿ ಭಾಗವಹಿಸಿದ್ದರು. ಅದೇ ರೀತಿ ಶಿವಮೊಗ್ಗ ನಗರದ ದುರ್ಗಿ ಗುಡಿ ಶಾಲೆಯಲ್ಲೂ ನಿನ್ನೆ ಶಾಲಾ ಆರಂಭದ ದಿನ ಸ್ಚಚ್ಛತಾ ಕಾರ್ಯ ಜೋರಾಗಿತ್ತು.ಶಾಲಾ ಪ್ರಾರಂಭೋತ್ಸವನ್ನು ಶಿಕ್ಷಕರು ಮಕ್ಕಳಿಗೆ ಸಮವಸ್ತ್ರ ಮತ್ತು ಪಠ್ಯ ಪುಸ್ತಕ ವಿತರಣೆಯ ಮೂಲಕ ಆರಂಭಿಸಿದ್ದು ವಿಶೇಷವಾಗಿತ್ತು.
14.83 ಲಕ್ಷ ಪುಸ್ತಕ ಪೂರೈಕೆಶಿವಮೊಗ್ಗ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲು ಒಟ್ಟು 20.07 ಲಕ್ಷ ಪಠ್ಯಪುಸ್ತಕಗಳಿಗೆ ಬೇಡಿಕೆ ಇದೆ. ಅದರಲ್ಲಿ ಈಗಾಗಲೇ 14.83 ಲಕ್ಷ ಪುಸ್ತಕ ಪೂರೈಕೆ ಆಗಿದೆ. ಶೇ 73.89ರಷ್ಟು ಪುಸ್ತಕ ಬಂದಿವೆ.ಆ ಪೈಕಿ ಭದ್ರಾವತಿ ತಾಲೂಕಿಗೆ ಶೇ 73.71, ಹೊಸನಗರ ಶೇ. 73.44, ಶಿಕಾರಿಪುರ ಶೇ 72.51, ಶಿವಮೊಗ್ಗ ಶೇ 74.23, ಸೊರಬ ಶೇ 74.45 ಹಾಗೂ ತೀರ್ಥಹಳ್ಳಿ ತಾಲ್ಲೂಕಿಗೆ ಶೇ 73.15ರಷ್ಟು ಪೂರೈಸಲಾಗಿದೆ.ಮಾರಾಟದ ಉದ್ದೇಶಕ್ಕೆ 9.80 ಲಕ್ಷ ಪಠ್ಯಪುಸ್ತಕಗಳಿಗೆ ಬೇಡಿಕೆ ಇದೆ. ಆ ಪೈಕಿ 8.07 ಲಕ್ಷ ಪುಸ್ತಕ ಪೂರೈಕೆ ಆಗಿದೆ. ಶೇ 82.40ರಷ್ಟು ಪುಸ್ತಕಗಳು ಬಂದಿವೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಿಸಿಯೂಟ ಸವಿದ ಮಕ್ಕಳುಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ವ್ಯವಸ್ಥೆ ಶಾಲೆ ಆರಂಭದೊಂದಿಗೆ ಶುರುವಾಗಿದೆ. ಗುರುವಾರದಿಂದಲೇ ಶಾಲೆಗಳಲ್ಲಿ ಬಿಸಿಯೂಟ ತಯಾರಿಕೆಗೆ ಸಜ್ಜಾಗಿದೆ. ಶುಕ್ರವಾರ ಶಾಲಾ ಪ್ರಾರಂಭೋತ್ಸವದ ಹಿನ್ನೆಲೆ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳಿಗೆ ಬಿಸಿಯೂಟ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ ಶಿಕ್ಷಕರ ಭವ್ಯ ಸ್ವಾಗತದೊಂದಿಗೆ ಸಂಭ್ರಮದಲ್ಲಿಯೇ ಶಾಲೆಗೆ ಬಂದಿದ್ದ ಮಕ್ಕಳು ಮಧ್ಯಾಹ್ನ ಬಿಸಿಯೂಟ ಸವಿದು, ಖುಷಿಪಟ್ಟರು.