ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಎಸ್.ಕುಮಾರ ವಿದ್ಯಾವರ್ಧಕ ಸಂಸ್ಥೆಯ ಸರಸ್ವತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಎಸ್.ಕುಮಾರ, ಮಹೇಶ ಪಿಯು ಸೈನ್ಸ್ ಕಾಲೇಜಿನಲ್ಲಿ ಪಂಡಿತ್ ಜವಾಹರಲಾಲ್ ನೆಹರು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಮಕ್ಕಳ ದಿನಾಚರಣೆ ಆಚರಿಸಲಾಯಿತು.ಸಂಸ್ಥೆಯ ಸಂಸ್ಥಾಪಕ ಎಸ್.ಕುಮಾರ ಮಾತನಾಡಿ, ಪ್ರತಿ ವರ್ಷ ನ.14ರಂದು ಜವಾಹರಲಾಲ್ ನೆಹರು ರವರ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಮಕ್ಕಳು ಇವರನ್ನು ಪ್ರೀತಿಯಿಂದ ಚಾಚಾ ನೆಹರು ಎಂತಲೂ ಕರೆಯುತ್ತಿದ್ದರು. ಮಕ್ಕಳು ದೇವರ ಸ್ವರೂಪ, ರಾಷ್ಟ್ರದ ಭವಿಷ್ಯ. ಅದಕ್ಕಾಗಿ ಅವರಿಗೆ ಪ್ರೀತಿ, ಕಾಳಜಿ ಮತ್ತು ಗುಣಮಟ್ಟದ ಶಿಕ್ಷಣ ಅಗತ್ಯವಿದ್ದು, ಅವರ ಹಕ್ಕುಗಳ ಬಗ್ಗೆ ಸಾಮರ್ಥ್ಯವನ್ನು, ಕನಸುಗಳನ್ನು ಪ್ರೋತ್ಸಾಹಿಸುವ ವಿಶೇಷ ದಿನವಾಗಿದೆ. ಆದ್ದರಿಂದ ಭವಿಷ್ಯದಲ್ಲಿ ನಾಯಕರಾಗಲು ಮಕ್ಕಳ ಸಾಮರ್ಥ್ಯದ ಮೇಲೆ ಶಿಕ್ಷಕರು ಕೇಂದ್ರಿಕರಿಸಿ, ಪ್ರೇರೇಪಿಸಿ ಅವರ ಆಶಯಗಳನ್ನು ಅಭಿವೃದ್ಧಿ ಪಡಿಸುವುದು ಶಿಕ್ಷಕರ ಮತ್ತು ಪಾಲಕರ ಕರ್ತವ್ಯವಾಗಿದೆ ಎಂದು ತಿಳಿಸಿದರು.ಸಂಸ್ಥೆಯ ಅಧ್ಯಕ್ಷೆ ಡಾ.ಎಚ್.ಟಿ.ಲತಾದೇವಿ ಮಾತನಾಡಿ, ವಿದ್ಯಾರ್ಥಿಗಳಾದ ನೀವು ಅಸ್ಥಿರ ಶಿಸ್ತು, ಕೆಟ್ಟ ಕೆಟ್ಟ ಸಂವಹನ, ಶಿಕ್ಷಣವನ್ನು ಕಡೆಗಣಿಸುವುದು, ನಕರಾತ್ಮಕ ಭಾವನೆ ಕಡೆ ಗಮನ, ವಾಸ್ತವಿಕ ನಿರೀಕ್ಷೆಗಳ ವಿಫಲರಾಗುವುದು ಮುಂತಾದ ನಕರಾತ್ಮಕ ವಿಚಾರಗಳನ್ನು ತೊರೆದು ಧನಾತ್ಮಕ ವಿಚಾರಗಳನ್ನು ಅಳವಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.ನಂತರ ವಿದ್ಯಾರ್ಥಿಗಳಿಗೆ ವಿವಿಧ ಆಟೋಟಗಳನ್ನು ಶಿಕ್ಷಕರು ಆಡಿಸುವುದರ ಮೂಲಕ ಮನರಂಜನೆಯನ್ನು ನೀಡಿದರು. ಈ ವೇಳೆ ಕಾಲೇಜಿನ ಪ್ರಾಚಾರ್ಯ ಸದಾಶಿವ ವಾಲಿಕಾರ, ಶಾಲೆಯ ಮುಖ್ಯ ಗುರುಗಳಾದ ಸಿ.ಎನ್ ಕಾಂಬಳೆ ಹಾಗೂ ಶಾಲಾ-ಕಾಲೇಜಿನ ಎಲ್ಲ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
14BIJ03