ಪಾಲಕರ ಮಾರ್ಗದರ್ಶನದಲ್ಲಿ ಮಕ್ಕಳ ಭವಿಷ್ಯ ಉಜ್ವಲ: ಡಿಸಿ ಗುರುದತ್ ಹೆಗಡೆ

| Published : Jun 24 2024, 01:34 AM IST

ಸಾರಾಂಶ

ಶಿವಮೊಗ್ಗದ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಏರ್ಪಡಿಸಿದ್ದ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ನೂತನ ಜನಪ್ರತಿನಿಧಿಗಳಿಗೆ ಸನ್ಮಾನ ಮತ್ತು ನವೀಕೃತ ಸರ್ಕಾರಿ ನೌಕರರ ಸಂಘದ ಕಟ್ಟಡದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಕ್ಕಳು ಪಾಲಕರ ಕಷ್ಟವನ್ನು ಅರಿತು, ಅವರ ಮಾರ್ಗದರ್ಶನದಲ್ಲಿ ನಡೆದರೆ ಮುಂದಿನ ಭವಿಷ್ಯ ಉಜ್ವಲವಾಗುತ್ತದೆ ಎಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆ ಸಲಹೆ ನೀಡಿದರು.

ಇಲ್ಲಿನ ಜಿಲ್ಲಾ ಸರ್ಕಾರಿ ನೌಕರರ ಸಂಘದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ನೂತನ ಜನಪ್ರತಿನಿಧಿಗಳಿಗೆ ಸನ್ಮಾನ ಮತ್ತು ನವೀಕೃತ ಸರ್ಕಾರಿ ನೌಕರರ ಸಂಘದ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಪಾಲಕರು ಕಷ್ಟಪಟ್ಟು ಓದಿ ನೌಕರಿ ಹಿಡಿದಿದ್ದಾರೆ. ಈಗ ಅವರು ತಮ್ಮ ಮಕ್ಕಳಿಗೂ ದುಡಿಮೆಯಿಂದ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ಮಕ್ಕಳಿಗೆ ಪಾಲಕರೇ ಪ್ರೇರೇಪಣೆ, ಮಕ್ಕಳ ಬೆಳವಣಿಗೆಗಾಗಿ ಪೋಷಕರು ಸದಾ ಶ್ರಮಿಸುತ್ತಾರೆ. ಇದನ್ನು ಮಕ್ಕಳು ಅರಿಯಬೇಕು ಎಂದರು.

ಸರ್ಕಾರಿ ನೌಕರರೆಲ್ಲ ಒಂದೇ ಕುಟುಂಬದವರು. ಸಮಾಜದ ಮತ್ತು ಜನರ ಸಮಸ್ಯೆ ಅರಿತು ಅವರಿಗೆ ಸ್ಪಂದಿಸಿ ಕೆಲಸ ಮಾಡುವವರು. ಇಂತಹ ಉತ್ತಮ ಮನಃಸ್ಥಿತಿಯಿಂದ ಮಕ್ಕಳು ಉತ್ತೇಜಿತರಾಗಬೇಕು ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ಸಂಘಟನೆ ಚೆನ್ನಾಗಿದ್ದರೆ ಹೆಚ್ಚು ಬಲ ಬರುತ್ತದೆ. ಹಕ್ಕಿಗಳ ಹಿಂಡಿನಂತೆ ಸಂಘಟನೆ ಇರಬೇಕು. ನೌಕರರ ಮಕ್ಕಳೂ ಸಹ ಪಾಲಕರಿಂದ ಕಲಿಯುವ ವಿಷಯಗಳು ಸಾಕಷ್ಟಿವೆ. ನಿಸ್ವಾರ್ಥ ಸೇವೆ ಮಾಡುವ ಪಾಲಕರನ್ನು ಅನುಸರಿಸಬೇಕು. ದಾನ- ಧರ್ಮದ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್ ಮಾತನಾಡಿ, ಯಶಸ್ಸು ಎನ್ನುವುದು ತಲೆಗೆ ಏರಬಾರದು. ಒಂದು ವೇಳೆ ತಲೆಗೇರಿದಲ್ಲಿ ಇನ್ನೊಬ್ಬರನ್ನು ಕೀಳಾಗಿ ಕಾಣುವ ಮನೋಭಾವ ಆರಂಭವಾಗುತ್ತದೆ. ನಿರಂತರ ಓದು, ಶಮ ವಹಿಸಿ ಸಾಧನೆ ಮಾಡಬೇಕು. ಸಿಕ್ಕ ಅವಕಾಶವನ್ನು ಬಿಡಬಾರದು ಎಂದು ಸಲಹೆ ನೀಡಿದರು.

ಕುಟುಂಬದ ಸತತ ಪ್ರೋತ್ಸಾಹ ಪಡೆದುಕೊಂಡು ಹೆಜ್ಜೆ ಇಡಿ. ಯಾವುದೇ ಉದ್ಯೋಗ ಮಾಡಿ ಅದರಲ್ಲಿ ನಿಸ್ವಾರ್ಥತೆ, ನಿಷ್ಠೆ ಇರಲಿ. ಆಗ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ನಡೆದುಬಂದ ಹಾದಿಯನ್ನು ಯಾವತ್ತ್ತೂ ಮರೆಯಬಾರದು. ಸಮಾಜದಲ್ಲಿ ಇಂದಿನ ದಿನಗಳಲ್ಲಿ ಮೌಲ್ಯ ಕಡಿಮೆಯಾಗುತ್ತಿದ್ದು, ಅದನ್ನು ಹೆಚ್ಚೆಚ್ಚು ಕಾಪಾಡಿಕೊಳ್ಳಬೇಕು. ಮೌಲ್ಯಾಧಾರಿತ ಸಮಾಜ ಕಟ್ಟಲು ಮುಂದಾಬೇಕು ಎಂದು ಕರೆ ನೀಡಿದರು.

ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುನಲ್ಲಿ ಉತ್ತಮ ಸಾಧನೆ ಮಾಡಿದ ಸರ್ಕಾರಿ ನೌಕರರ 500 ಮಕ್ಕಳಿಗೆಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಜಿಪಂ ಸಿಇಒ ಸ್ನೇಹಲ್ ಲೋಖಂಡೆ ಮಾತನಾಡಿದರು. ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿ ಕುಮಾರ್, ಪ.ಜಾತಿ, ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ, ಸರಕಾರಿ ನೌಕರರ ಸಂಘದ ಜಿಲ್ಲಾ ಮತ್ತು ರಾಜ್ಯ, ತಾಲೂಕು ಪದಾಧಿಕಾರಿಗಳು ಹಾಜರಿದ್ದರು.