ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಕೇವಲ ಓದು, ಅಂಕಗಳಿಕೆಗೆ ಒತ್ತು ನೀಡಿದಾಗ ಮಕ್ಕಳಲ್ಲಿ ಜಡತ್ವ ಮೂಡಲಿದೆ. ಬೇಸಿಗೆ ಶಿಬಿರ ಮನಸ್ಸಿಗೆ ಉಲ್ಲಾಸ ನೀಡಲಿದೆ ಎಂದು ಚೌಡೇನಹಳ್ಳಿ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ ಶಂಭುಗೌಡ ಹೇಳಿದರು.ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಪಂ, ಗ್ರಂಥಾಲಯ ಹಾಗೂ ಅರಿವು ಕೇಂದ್ರಗಳಿಂದ ಏರ್ಪಡಿಸಿದ್ದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದಲ್ಲಿ ಮಾತನಾಡಿ, ಗ್ರಾಮೀಣ ಮಕ್ಕಳಿಗೆ ಈ ಶಿಬಿರಗಳಿಂದ ಸ್ಥಳೀಯ ಇತಿಹಾಸ, ಆಚಾರ, ವಿಚಾರ, ಸ್ಮಾರಕ ಮತ್ತಿತರ ಪರಿಚಯ ಸರಳವಾಗಿ ತಿಳಿಯಲಿದೆ. ದೇಶೀ ಕ್ರೀಡೆಗಳಿಂದ ಮಕ್ಕಳ ಮನಸ್ಸು ಪ್ರಪುಲ್ಲತೆ ಹೊಂದಲಿದೆ ಎಂದರು.
ಸಂಘ ಸಂಸ್ಥೆಗಳ ಆಯೋಜನೆಯ ಬೇಸಿಗೆ ಶಿಬಿರಗಳು ಬಡಮಕ್ಕಳಿಗೆ ತಲುಪುತ್ತಿಲ್ಲ. ಸರ್ಕಾರದ ಇಂತಹ ಶಿಬಿರವನ್ನು ಸದ್ಭಳಕೆ ಮಾಡಿಕೊಳ್ಳಲು ಮಕ್ಕಳನ್ನು ಕಡ್ಡಾಯವಾಗಿ ಶಿಬಿರಕ್ಕೆ ಕಳುಹಿಸಿ ಎಂದು ಪೋಷಕರಲ್ಲಿ ಮನವಿ ಮಾಡಿದರು.ಚೌಡೇನಹಳ್ಳಿ ಗ್ರಾಪಂ ಪಿಡಿಒ ನಟರಾಜ ಮೂರ್ತಿ ಮಾತನಾಡಿ, ಮಕ್ಕಳಲ್ಲಿ ಓದು ಬರೆಯಲು ಶಿಬಿರ ಟಾನಿಕ್ನಂತೆ ಕೆಲಸ ಮಾಡಲಿದೆ. ಎಲ್ಲವೂ ಉಚಿತವಿದ್ದು ಮಕ್ಕಳನ್ನು ಕಳುಹಿಸಲು ಪೋಷಕರು ಕಾಳಜಿ ವಹಿಸಬೇಕು ಅಷ್ಟೆ ಎಂದರು.
ನೋಡಲು ಅಧಿಕಾರಿ ರಮೇಶ್ ಮಾತನಾಡಿ, ಸಾವಿರಾರು ರುಗಳನ್ನು ನೀಡಿ ನಗರ ಪ್ರದೇಶದಲ್ಲಿ ಬೇಸಿಗೆ ಶಿಬಿರಕ್ಕೆ ಕಳುಹಿಸಲು ಪೈಪೋಟಿ ಇದೆ. ಮನೆ ಬಾಗಿಲಿಗೆ ಬೇಸಿಗೆ ಶಿಬಿರವನ್ನು ಗ್ರಾಮೀಣ ಪ್ರದೇಶಕ್ಕೆ ತಂದಿದೆ. ಮಕ್ಕಳು ಟಿವಿ, ಮೊಬೈಲ್ನಿಂದ ದೂರವಿದ್ದು ಶಿಬಿರವನ್ನು ಸದುಪಯೋಗಪಡಿಸಿಕೊಳ್ಳಲು ಮುಂದಾಗಬೇಕು ಎಂದು ಮನವರಿಕೆ ಮಾಡಿದರು.
ಈ ವೇಳೆ ಗ್ರಾಪಂ ಉಪಾಧ್ಯಕ್ಷೆ ವಿನೋದ ಹರೀಶ್, ನೋಡಲ್ ಅಧಿಕಾರಿ ರಮೇಶ್, ಎಸ್ಡಿಎಂಸಿ ಅಧ್ಯಕ್ಷ ಹರೀಶ್, ಶಿಕ್ಷಕರಾದ ಶಿವನಂಜೇಗೌಡ, ಶೃತಿ ಇದ್ದರು.