ಸಾರಾಂಶ
ಗುರು ಹಿರಿಯರು ಹಾಗೂ ತಂದೆತಾಯಿಗಳನ್ನು ಗೌರವದಿಂದ ಕಂಡು ವಿನಯವಂತಿಕೆ ಹಾಗೂ ಶಿಸ್ತನ್ನು ಜೀವನದುದ್ದಕ್ಕೂ ಪಾಲಿಸುವ ಮೂಲಕ ಯಶಸ್ವಿ ವ್ಯಕ್ತಿಗಳಾಗಿ ಬದಲಾಗಬೇಕು. ಪದವಿ ವ್ಯಾಸಂಗವು ವಿದ್ಯಾರ್ಥಿ ಜೀವನದಲ್ಲಿ ನಿರ್ಣಾಯಕ ಘಟ್ಟ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಅತ್ಯುನ್ನತವಾದ ಹುದ್ದೆ ಅಲಂಕರಿಸಿ ಅತ್ಯುತ್ತಮ ಸಾಧನೆ ಮಾಡಬೇಕು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ವಿದ್ಯಾರ್ಥಿಗಳು ಏಕಾಗ್ರತೆಯಿಂದ ವ್ಯಾಸಂಗದ ಮೂಲಕ ಗುರಿಸಾಧನೆ ಮಾಡಬೇಕು ಎಂದು ಪಾಂಡವಪುರ ಉಪ ವಿಭಾಗಾಧಿಕಾರಿ ಡಾ.ಕೆ.ಆರ್.ಶ್ರೀನಿವಾಸ್ ಕರೆ ನೀಡಿದರು.ಪಟ್ಟಣದ ಕಲ್ಪತರು ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಎ, ಬಿಕಾಂ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಹಾಗೂ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಯುವಜನರು ಹಾಗೂ ವಿದ್ಯಾರ್ಥಿಗಳು ಜೀವನದಲ್ಲಿ ಎದುರಾಗುವ ಸಮಸ್ಯೆಗಳು ಹಾಗೂ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು. ಗುರಿ ಸಾಧಿಸಲು ಏಕಾಗ್ರತೆ ಹಾಗೂ ಛಲದಿಂದ ಮುನ್ನಡೆಯಬೇಕು ಎಂದರು.
ಗುರು ಹಿರಿಯರು ಹಾಗೂ ತಂದೆತಾಯಿಗಳನ್ನು ಗೌರವದಿಂದ ಕಂಡು ವಿನಯವಂತಿಕೆ ಹಾಗೂ ಶಿಸ್ತನ್ನು ಜೀವನದುದ್ದಕ್ಕೂ ಪಾಲಿಸುವ ಮೂಲಕ ಯಶಸ್ವಿ ವ್ಯಕ್ತಿಗಳಾಗಿ ಬದಲಾಗಬೇಕು. ಪದವಿ ವ್ಯಾಸಂಗವು ವಿದ್ಯಾರ್ಥಿ ಜೀವನದಲ್ಲಿ ನಿರ್ಣಾಯಕ ಘಟ್ಟ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಅತ್ಯುನ್ನತವಾದ ಹುದ್ದೆ ಅಲಂಕರಿಸಿ ಅತ್ಯುತ್ತಮ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.ಫೇಸ್ ಬುಕ್, ವ್ಯಾಟ್ಸಪ್ ನಲ್ಲಿ ಚಾಟಿಂಗ್ ಮಾಡಿಕೊಂಡು ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳದೇ ವಿದ್ಯಾರ್ಥಿಗಳು ಹಾಗೂ ಯುವಜನರು ಮೊಬೈಲ್ ಫೋನ್ ಪ್ರಪಂಚದಿಂದ ಹೊರಬಂದು ಪುಸ್ತಕಗಳು ಹಾಗೂ ಪತ್ರಿಕೆಗಳನ್ನು ಓದುವ ಮೂಲಕ ಜ್ಞಾನವಂತರಾಗಬೇಕು ಎಂದರು.
ಕಾಲೇಜು ಸಂಸ್ಥಾಪಕ ಅಧ್ಯಕ್ಷ ವಿಠಲಾಪುರ ಜಯರಾಮ್ ಅಧ್ಯಕ್ಷತೆ ವಹಿಸಿದ್ದರು. ಕೆಪಿಎಸ್ ಶಾಲೆ ಪ್ರಾಂಶುಪಾಲ ಡಿ.ಬಿ.ಸತ್ಯ, ಪುರಸಭೆ ಮಾಜಿ ಸದಸ್ಯ ಕೆ.ಆರ್.ನೀಲಕಂಠ ಮಾತನಾಡಿದರು. ಇದೇ ವೇಳೆ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.