ಪುರಂದರದಾಸರು, ತ್ಯಾಗರಾಜರ ಆರಾಧನೆ ಗಾನಚಂದ್ರಿಕೆ-2026 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬಳ್ಳಾರಿ: ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಚಿನ್ಮಯಿ ಸಂಗೀತ ಕಲಾ ಟ್ರಸ್ಟ್ ನ 18ನೇ ವಾರ್ಷಿಕೋತ್ಸವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಪುರಂದರದಾಸರು, ತ್ಯಾಗರಾಜರ ಆರಾಧನೆ ಗಾನಚಂದ್ರಿಕೆ-2026 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಪಾಲಿಕೆ ಸದಸ್ಯ ಕೆ.ಎಸ್. ಅಶೋಕಕುಮಾರ್, ಚಿನ್ಮಯಿ ಸಂಗೀತ ಕಲಾ ಟ್ರಸ್ಟ್ ಸೇವಾ ಕೈಂಕರ್ಯ ಕುರಿತು ತಿಳಿಸಿದರು.
ಬಳ್ಳಾರಿಯಲ್ಲಿ ಸಂಗೀತ ಸೇವೆಯಲ್ಲಿ ನಿರತವಾಗಿರುವ ಸೇವಾ ಟ್ರಸ್ಟ್ನ ಅಧ್ಯಕ್ಷ ಬಿ.ಲಕ್ಷ್ಮಿನಾರಾಯಣ ಹಾಗೂ ಟ್ರಸ್ಟ್ನ ಕಾರ್ಯದರ್ಶಿ ಮತ್ತು ಸಂಗೀತ ಶಿಕ್ಷಕಿ ಎ.ರಾಜೇಶ್ವರಿ ಅಪಾರ ಶಿಷ್ಯ ವೃಂದ ಹುಟ್ಟು ಹಾಕಿದ್ದಾರೆ. ಬಳ್ಳಾರಿಯಲ್ಲಿ ಸಂಗೀತ ಲೋಕ ಉನ್ನತ ಮಟ್ಟಕ್ಕೆ ಬೆಳೆಯಲು ಟ್ರಸ್ಟ್ನ ಪದಾಧಿಕಾರಿಗಳು ಮಾಡುತ್ತಿರುವ ಸೇವೆ ಅನನ್ಯವಾದದ್ದು ಎಂದು ಹೇಳಿದರು. ಕಾರ್ಯಕ್ರಮದ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಬಿಐಟಿಎಂ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಯಡಹಳ್ಳಿ ಬಸವರಾಜ್, ಪುರಂದರದಾಸರು, ತ್ಯಾಗರಾಜರು ಅವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.ಅರುಣೋದಯ ಸುಗಂಧಿನಿ ಶಾಲೆಯ ಸಂಸ್ಥಾಪಕಿ, ಲೇಖಕಿ ಬಿ.ಸುಗಂಧಿನಿ ನಾಯ್ಡು ಮಾತನಾಡಿದರು. ಕೃಷ್ಣ ಗ್ರೂಪ್ ಆಫ್ ಕಂಪನೀಸ್ನ ಡಿ.ಎಲ್. ರಮೇಶ್ ಗೋಪಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚಿನ್ಮಯಿ ಸಂಗೀತ ಕಲಾ ಟ್ರಸ್ಟ್ನ ಅಧ್ಯಕ್ಷ ಬಿ.ಲಕ್ಷ್ಮಿ ನಾರಾಯಣ ಉಪಸ್ಥಿತರಿದ್ದರು. ಚಿಕ್ಕಬಳ್ಳಾಪುರ ತಾಲೂಕು ಮುದ್ದೇನಹಳ್ಳಿಯ ಸಂಗೀತ ಸಹಾಯಕ ಪ್ರಾಧ್ಯಾಪಕ ವಿದ್ವಾನ್ ಪ್ರಣವ್ ಕಶ್ಯಪ್ ಅವರಿಗೆ ಯುವ ಸಂಗೀತ ಭಾಸ್ಕರ ಪ್ರಶಸ್ತಿ ನೀಡಲಾಯಿತು. ಓಬಳಾಪುರಂನ ಮಹಾಲಕ್ಷ್ಮಿ ಅನ್ನದಾನ ಆಶ್ರಮದ ಜೆ.ರಾಘವೇಂದ್ರ ಸ್ವಾಮಿ, ವೀಣಾ ವಾದಕಿ ಕೆ.ಸುಭದ್ರಾ, ಸಂಗೀತ ಶಿಕ್ಷಕಿ ಕೆ.ಶಾಂತಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು. ಬಿ.ಸಾಯಿನಾಥ್ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ವಾನ್ ಪ್ರಣವ್ ಕಶ್ಯಪ್ ದಾಸರ ಕೀರ್ತನೆ ಹಾಡಿದರು. ಟ್ರಸ್ಟ್ ವಿದ್ಯಾರ್ಥಿಗಳು ತ್ಯಾಗರಾಜರು ಹಾಗೂ ಪುರಂದರದಾಸರ ಗೀತೆಗಳನ್ನು ಪ್ರಸ್ತುತಪಡಿಸಿದರು. ಸಂಗೀತ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ರೂಪಶ್ರೀ ಕಾರ್ಯಕ್ರಮ ನಿರ್ವಹಿಸಿದರು.