ಚಿತ್ರದುರ್ಗ: ನಾರಾಯಣಗೌಡ ಬಿಡುಗಡೆಗೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮುತ್ತಿಗೆ ಯತ್ನ

| Published : Dec 30 2023, 01:15 AM IST

ಚಿತ್ರದುರ್ಗ: ನಾರಾಯಣಗೌಡ ಬಿಡುಗಡೆಗೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮುತ್ತಿಗೆ ಯತ್ನ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ನಾಮಫಲಕ ಬಳಕೆ ವಿಚಾರದಲ್ಲಿ ಕರ್ನಾಟಕ ಸರ್ಕಾರ ಮಾಡಬೇಕಾಗಿರುವ ಕೆಲಸವನ್ನು ಟಿ.ಎ.ನಾರಾಯಣಗೌಡರು ಸೇರಿ ಕರವೇ ಕಾರ್ಯಕರ್ತರು ಮಾಡಿರುತ್ತಾರೆ. ಇದನ್ನು ಪೊಲೀಸರ ಮುಖಾಂತರ ಹತ್ತಿಕ್ಕುವ ಕೆಲಸ ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಬಂಧನ ವಿರೋಧಿಸಿ ಕರವೇ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ವಿಫಲ ಯತ್ನ ನಡೆಸಿದರು. ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಬಂದ ಕಾರ್ಯಕರ್ತರು ಡಿಸಿ ಕಚೇರಿಯತ್ತ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಬಾಗಿಲಲ್ಲಿಯೇ ತಡೆದರು. ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ನಿರ್ಗಮಿಸಿದರು.

ಈ ವೇಳೆ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ರಮೇಶ್, ಕನ್ನಡ ನಾಮಫಲಕ ಬಳಕೆ ವಿಚಾರದಲ್ಲಿ ಕರ್ನಾಟಕ ಸರ್ಕಾರ ಮಾಡಬೇಕಾಗಿರುವ ಕೆಲಸವನ್ನು ಟಿ.ಎ.ನಾರಾಯಣಗೌಡರು ಸೇರಿ ಕರವೇ ಕಾರ್ಯಕರ್ತರು ಮಾಡಿರುತ್ತಾರೆ. ಇದನ್ನು ಪೊಲೀಸರ ಮುಖಾಂತರ ಹತ್ತಿಕ್ಕುವ ಕೆಲಸ ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ. ರಾಜ್ಯ ಸರ್ಕಾರ ತನ್ನ ನಿಲುವು ಬದಲಾಯಿಸಿ ಬಂಧಿತರಾಗಿರುವ ಟಿ.ಎ.ನಾರಾಯಣಗೌಡರು ಸೇರಿ ಕರವೇ ಕಾರ್ಯಕರ್ತರನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಶೇ.60ರಷ್ಟು ವಾಣಿಜ್ಯ ಮಳಿಗೆಗಳು, ಕಟ್ಟಡಗಳು ಮತ್ತು ಇತರೆ ವ್ಯಾಪಾರ ಸ್ಥಳಗಳಲ್ಲಿ ನಾಮಫಲಕ ಬದಲಾಯಿಸಲು ನಾರಾಯಣಗೌಡರು ಗಡುವು ಕೊಟ್ಟಿದ್ದಾರೆ. ಆದರೆ ಬೆಂಗಳೂರು ನಗರದ ಸಾದರಹಳ್ಳಿ ಗೇಟ್‍ನಲ್ಲಿ ಸಾವಿರಾರು ಕರವೇ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸುತ್ತಿರುವ ಸಂದರ್ಭದಲ್ಲಿ ಟಿ.ಎ.ನಾರಾಯಣಗೌಡ ರವರು ಪ್ರತಿಭಟನೆ ಸ್ಥಳಕ್ಕೆ ಬರುವ ಮುನ್ನ ಅವರನ್ನು ಬಂಧಿಸಿ, ಬಾಗನೂರು ಕ್ರಾಸ್ ಬಳಿ ಇರುವ ಯಲಹಂಕ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಕೂಡಿಹಾಕಿರುತ್ತಾರೆ. ಇವರ ಜೊತೆಯಲ್ಲಿ ಸುಮಾರು 3000 ಕ್ಕೂ ಹೆಚ್ಚು ಕರವೇ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ ಎಂದು ದೂರಿದರು.

ಇದಲ್ಲದೇ ಬೆಂಗಳೂರು ನಗರದ ಬೇರೆ ಬೇರೆ ಪೊಲೀಸ್ ಠಾಣೆಯಲ್ಲಿ ಕರವೇ ಕಾರ್ಯಕರ್ತರನ್ನು ಬಂಧಿಸಿ, ನಂತರ ಬಿಡುಗಡೆಗೊಳಿಸುತ್ತಾರೆ. ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆಯಲ್ಲಿ ಸುಮಾರು 14 ಜನ ಕಾರ್ಯಕರ್ತರನ್ನು ಬಟ್ಟೆ ಬಿಚ್ಚಿಸಿ ಕನ್ನಡ ಪೊಲೀಸ್ ಠಾಣೆಯಲ್ಲಿ ಕೂಡಿಹಾಕಿದ್ದಾರೆ. ಒಬ್ಬ ಕಾರ್ಯಕರ್ತರ ಕೈ ಮುರಿಯುವ ರೀತಿಯಲ್ಲಿ ಪೊಲೀಸ್ ಇನ್ಸ್‍ಪೆಕ್ಟರ್ ಹೊಡೆದಿದ್ದಾರೆ. ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಅವರಿಂದ ದೂರನ್ನು ತೆಗೆದುಕೊಂಡು ಟಿ.ಎ.ನಾರಾಯಣಗೌಡರು ಮತ್ತು 29 ಜನ ಕರವೇ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲು ಮಾಡಿ, ಬೆಳಗಿನ ಜಾವ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನಂತರ ಜೈಲಿಗೆ ಕಳುಹಿಸಿದ್ದಾರೆ ಎಂದು ರಮೇಶ್ ಆರೋಪಿಸಿದರು.

ಕನ್ನಡಪರ ಹೋರಾಟಗಾರರನ್ನು ಪೊಲೀಸರ ಮುಖಾಂತರ ಹತ್ತಿಕ್ಕುವ ಮತ್ತು ಹೋರಾಟ ಧಮನ ಮಾಡುವುದ ಕೈಬಿಡಬೇಕೆಂದು ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ. ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ಜಿಲ್ಲಾ ಸಂಚಾಲಕ ಎಸ್.ಬಿ.ಗಣೇಶ್, ಚಿತ್ರದುರ್ಗ ತಾಲೂಕು ಅಧ್ಯಕ್ಷ ರಾಜಪ್ಪ,ಜಿ. ಜಿಲ್ಲಾ ಯುವ ಘಟಕದ ಅಧ್ಯಕ್ಷ ಘನಶ್ಯಾಮ್ ಜಿಲ್ಲಾ ಸಂಘಟನಾ ಕಾಯದರ್ಶಿ ಪ್ರಸಾದ್ ಮಲ್ಲ, ಜಿಲ್ಲಾ ಉಪಾಧ್ಯಕ್ಷ ಬಿ.ವೆಂಕಟೇಶ್, ಟಿ.ಕೆ.ಶಿವಮೂರ್ತಿ, ಆರ್.ಜಿ.ಲಕ್ಷ್ಮಣ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಮೇಶ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಚಂದ್ರಕಲಾ, ಚಳ್ಳಕೆರೆ ತಾಲೂಕು ಅಧ್ಯಕ್ಷೆ ಜಯಲಕ್ಷ್ಮಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.