ಸಾರಾಂಶ
ತಾಲೂಕಿನ ಚೌಡಯ್ಯದಾನಪುರ ಗ್ರಾಮದ ತುಂಗಭದ್ರನದಿ ತಟದಲ್ಲಿರುವ 12ನೇ ಶತಮಾನದ ನಿಜಶರಣ ಅಂಬಿಗರ ಚೌಡಯ್ಯನವರ ಮೂಲಗದ್ದುಗೆ (ಐಕ್ಯಮಂಟಪ)ವನ್ನು ಕೂಡಲ ಸಂಗಮ ಮಾದರಿಯ ಹಾಗೆ ಅಭಿವೃದ್ಧಿಗೊಳಿಸಬೇಕು ಎಂದು ಮನವಿ
ರಾಣಿಬೆನ್ನೂರು: ತಾಲೂಕಿನ ಚೌಡಯ್ಯದಾನಪುರ ಗ್ರಾಮದ ತುಂಗಭದ್ರನದಿ ತಟದಲ್ಲಿರುವ 12ನೇ ಶತಮಾನದ ನಿಜಶರಣ ಅಂಬಿಗರ ಚೌಡಯ್ಯನವರ ಮೂಲಗದ್ದುಗೆ (ಐಕ್ಯಮಂಟಪ)ವನ್ನು ಕೂಡಲ ಸಂಗಮ ಮಾದರಿಯ ಹಾಗೆ ಅಭಿವೃದ್ಧಿಗೊಳಿಸಬೇಕು ಎಂದು ನಿಜಶರಣ ಅಂಬಿಗರ ಚೌಡಯ್ಯನವರ ಮೂಲಮಠದ ಪೀಠಾಧಿಪತಿ ಅಭಿನವ ಅಂಬಿಗರ ಚೌಡಯ್ಯ ಮಹಾಸ್ವಾಮಿಗಳು ನಗರದ ಸಾಲೇಶ್ವರ ಕಲ್ಯಾಣ ಮಂಟಪದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರಿಗೆ ಮನವಿ ಸಲ್ಲಿಸಿದರು.
ಈಗಾಗಲೇ 32 ಕೋಟಿ ಐಕ್ಯಮಂಟಪದ ಅಭಿವೃದ್ದಿಗೆ ನೀರಾವರಿ ಇಲಾಖೆಯಿಂದ ಈ ಹಿಂದೆ ಸಿದ್ದರಾಮಯ್ಯನವರ ಮುಖ್ಯಮಂತ್ರಿ ಅವಧಿಯಲ್ಲಿ ಬಿಡುಗಡೆಯಾಗಿತ್ತು. ಈಗ ಅವರೇ ಇದ್ದರೂ ಶರಣ ಚೌಡಯ್ಯನವರ ಐಕ್ಯಮಂಟಪದ ಅಭಿವೃದ್ಧಿಯತ್ತ ಗಮನ ಹರಿಸಿಲ್ಲ ಅಲ್ಲದೆ ಅದೇ ಹಣದಲ್ಲಿ ವಿವಿಧ ಕಾಮಗಾರಿಗಳು ಕಟ್ಟಡಗಳು ನಿರ್ಮಾಣವಾಗುತ್ತಿವೆ ಐಕ್ಯಮಂಟಪ ಮಾತ್ರ ಅಭಿವೃದ್ದಿಯಾಗಿಲ್ಲ ಎಂದು ಶ್ರೀಗಳು ವಿವರಿಸಿದರು.
ಗ್ರಾಮದ ಹೊರವಲಯದಲ್ಲಿರುವ 100ಎಕರೆ ಜಾಗೆಯಲ್ಲಿ ಚೌಡಯ್ಯನವರ ಹೆಸರಲ್ಲಿ ಪ್ರಾಧಿಕಾರ ರಚನೆ ಮಾಡಬೇಕು. ಐಕ್ಯಮಂಟಪ ಅಭಿವೃದ್ಧಿ ವಿಚಾರವಾಗಿ ಭಾರತೀಯ ಪುರಾತತ್ವ ಇಲಾಖೆಯ ಆಕ್ಷೇಪಣೆಯನ್ನು ಸಡಿಲುಗೊಳಿಸಿ ಅಭಿವೃದ್ಧಿಗೆ ಮುಂದಾಗಬೇಕು ಎಂದು ಮನವಿಯಲ್ಲಿನ ವಿಷಯಗಳನ್ನು ವಿವರಿಸಿದರು.ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಎಸ್. ಸಿದ್ದಬಸಪ್ಪ ಯಾದವ್, ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ಗಂಗಾಮತ ಸಮಾಜದ ಮುಖಂಡರಾದ ಲಕ್ಷ್ಮಣ ದೀಪಾವಳಿ, ವೀರಣ್ಣ ಗಂಗಮ್ಮನವರ, ಪ್ರಕಾಶ ದೀಪಾವಳಿ, ಬಸವರಾಜ ಲಕ್ಷ್ಮೇಶ್ವರ, ಪರಮೇಶ ದೀಪಾವಳಿ, ಮಂಜುನಾಥ ಶಿವಪ್ಪನವರ ಸೇರಿದಂತೆ ಮತ್ತಿತರರು ಇದ್ದರು.