ಸಾರಾಂಶ
ಔರಾದ್ ತಾಲೂಕಿನ ಎಕಲಾರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇತ್ತಿಚೆಗೆ ರಿಶೈನ್ ಸಂಸ್ಥೆಯಿಂದ ಶಾಲಾ ಮಕ್ಕಳಿಗೆ ಸ್ವೆಟರ್ ಹಾಗೂ ಬಟ್ಟೆಗಳನ್ನು ವಿತರಿಸಿ ಪತ್ರಕರ್ತ ಬಾಲಾಜಿ ಕುಂಬಾರ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಔರಾದ್
ಬಡ ಪ್ರತಿಭಾವಂತ ಮಕ್ಕಳ ಜೀವನ ಸಾಧನೆಗೆ ನಾಗರಿಕರು ಸಹಕರಿಸಬೇಕು ಎಂದು ಪತ್ರಕರ್ತ ಬಾಲಾಜಿ ಕುಂಬಾರ ಹೇಳಿದರು.ತಾಲೂಕಿನ ಎಕಲಾರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇತ್ತಿಚೆಗೆ ರಿಶೈನ್ ಸಂಸ್ಥೆಯಿಂದ ಶಾಲಾ ಮಕ್ಕಳಿಗೆ ನೀಡುವ ಸ್ವೆಟರ್ ಹಾಗೂ ಬಟ್ಟೆಗಳನ್ನು ವಿತರಣೆ ಮಾಡಿ, ಜಿಲ್ಲೆಯ ಗಡಿ ಭಾಗದ ಶಾಲೆಯ ಮಕ್ಕಳು ಪ್ರತಿಭಾವಂತರಾಗಿದ್ದು, ಅವರಿಗೆ ನೆರವಿನ ಹಸ್ತ ಬೇಕಾಗಿದೆ. ಪ್ರತಿಭಾವಂತ ಮಕ್ಕಳ ಏಳ್ಗೆಗೆ ಸಮುದಾಯದ ಪ್ರತಿಯೊಬ್ಬ ಜವಾಬ್ದಾರಿ ವ್ಯಕ್ತಿ ಸಹಕಾರ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ರಿಶೈನ್ ಸಂಸ್ಥೆ ಕಳೆದ 8 ವರ್ಷಗಳಿಂದ ನಿರಂತರ ಸಮಾಜಮುಖಿ ಕಾರ್ಯಗಳು ಮಾಡುತ್ತ ಜನಸಾಮಾನ್ಯರ ಹೃದಯ ಗೆಲ್ಲುವ ಕೆಲಸ ಮಾಡುತ್ತಲಿದೆ. ಸಂಸ್ಥೆಯ ಕೆಲಸ ಕಾರ್ಯ ಅನುಕರಣೀಯ ಎಂದರು.
ಸಂಸ್ಥೆ ಅಧ್ಯಕ್ಷ ರೋಹನ ಕುಮಾರ್ ಮಾತನಾಡಿ, ಮಕ್ಕಳು ಇಂದಿನಿಂದಲೆ ಒಳ್ಳೆಯ ನಡತೆ ರೂಢಿಸಿಕೊಂಡು ಬದುಕಬೇಕು. ಇಂದಿನ ಗುಣಗಳೇ ಭವಿಷ್ಯವನ್ನು ರೂಪಿಸಬಲ್ಲ ಮಾರ್ಗದರ್ಶಿ ಸೂತ್ರಗಳಾಗಿವೆ ಎಂದರು. ಶಾಲೆಯ ಎಲ್ಕೆಜಿ, ಯುಕೆಜಿ ಮಕ್ಕಳಿಗೆ ಸ್ವೆಟರ್ ಹಾಗೂ ಇನ್ನುಳಿದ ತರಗತಿ ಮಕ್ಕಳಿಗೆ ಬಟ್ಟೆಗಳನ್ನು ಉಚಿತವಾಗಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಪ್ರಭುರಾವ ಬಾಳೂರೆ, ಸಂಸ್ಥೆ ಸದಸ್ಯ ಅಜಯಕುಮಾರ್, ಸ್ಟೀಫನ್, ಶಿಕ್ಷಕರಾದ ಬಾಲಾಜಿ ಅಮರವಾಡಿ, ವೀರಶೆಟ್ಟಿ ಗಾದಗೆ, ಅಂಕುಶ ಪಾಟೀಲ್, ರೂಪಾ ಸೇರಿದಂತೆ ಇನ್ನಿತರರಿದ್ದರು.