ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರಸಭೆ ಅಭಿವೃದ್ಧಿ ದೃಷ್ಟಿಯಿಂದ ನಾಗರಿಕರ ಸಲಹೆಗಳನ್ನು ಕ್ರೋಢಿಕರಿಸಿ ನಗರಸಭೆ ಸದಸ್ಯರೊಂದಿಗೆ ಚರ್ಚಿಸಿ, ಸಮಾಲೋಚನೆ ನಡೆಸಿ 2025-26ನೇ ಸಾಲಿನ ಆಯವ್ಯಯ ಸಿದ್ಧತೆ ಮಾಡಲಾಗುವುದು ಎಂದು ನಗರಸಭೆ ಅಧ್ಯಕ್ಷ ಸುರೇಶ್ ಅವರು ಹೇಳಿದರು.ನಗರದ ಸಿಡಿಎಸ್ ಭವನದಲ್ಲಿ ಚಾಮರಾಜನಗರ ನಗರಸಭೆಯ 2025-26ನೇ ಸಾಲಿನ ಆಯವ್ಯಯದಲ್ಲಿ ಮೂಲ ಸೌಕರ್ಯಗಳನ್ನು ಉತ್ತಮಪಡಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 2025-26ನೇ ಸಾಲಿನ ಆಯವ್ಯಯ ಸಿದ್ಧತೆ ಮಾಡಿಕೊಳ್ಳುವುದಕ್ಕೂ ಮುನ್ನ ನಗರಸಭೆ ನಾಗರಿಕರ ಸಲಹೆ ಪಡೆದುಕೊಳ್ಳುವುದು ಮುಖ್ಯ ಎಂಬ ನಿಟ್ಟಿನಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಸಭೆಗೆ ಆಗಮಿಸಿರುವ ನಾಗರಿಕರು, ಸಂಘ ಸಂಸ್ಥೆಗಳ ಮುಖಂಡರು ನಗರಸಭೆ ಅಭಿವೃದ್ಧಿಗೆ ಸಲಹೆ ಸೂಚನೆಗಳನ್ನು ನೀಡಬೇಕೆಂದು ಮನವಿ ಮಾಡಿದರು.
ನಗರಸಭೆಯ ಅಭಿವೃದ್ಧಿ ಕುಂಟುತ್ತಾ ಸಾಗಿದ್ದು, 26 ವರ್ಷವಾಗಿದ್ದರೂ ಕೂಡ ನಗರಸಭೆ ವ್ಯಾಪ್ತಿ 10 ಕಿ.ಮೀ ಬೆಳೆದಿಲ್ಲ. ನಗರಸಭೆ ವ್ಯಾಪ್ತಿಯನ್ನು ವಿಸ್ತರಣೆ ಮಾಡುವ ನಿಟ್ಟಿನಲ್ಲಿ 10 ಕಿ.ಮೀ. ವ್ಯಾಪ್ತಿಯ ಒಳಗೆ ಬರುವ ಗ್ರಾಮಗಳನ್ನು ನಗರಸಭೆಗೆ ಸೇರಿಸಿಕೊಂಡು ನಗರಸಭೆ ಆದಾಯ ಹೆಚ್ಚು ಮಾಡಿಕೊಳ್ಳಬೇಕು ಎಂದು ನಾಗರಿಕರು ಸಲಹೆ ನೀಡಿದರು.ನಗರಸಭೆ ಅಧ್ಯಕ್ಷ ಸುರೇಶ್ ಮಾತನಾಡಿ, ನಗರಸಭೆಗೆ ಈಗ ಸರ್ಕಾರದಿಂದ ಬರುತ್ತಿರುವ ಅನುದಾನ ಬಹಳ ಕಡಿಮೆಯಿದ್ದು, ಪಟ್ಟಣದ ಸಮಗ್ರ ಅಭಿವೃದ್ಧಿಗೆ ಹಾಗೂ ಏರುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕಷ್ಟಸಾಧ್ಯವಾಗುತ್ತದೆ. ಅಲ್ಲದೇ ಜಿಲ್ಲಾ ಕೇಂದ್ರವಾದ ಬಳಿಕ ನಗರಸಭೆ ವ್ಯಾಪ್ತಿಗೆ ಬರುವಂತೆ ಮಲ್ಲಯ್ಯನಪುರ, ಉತ್ತುವಳ್ಳಿ, ಯಡಪುರ ಹಾಗೂ ವೈದ್ಯಕೀಯ ಕಾಲೇಜು ಸೇರಿದಂತೆ ಅನೇಕ ಗ್ರಾಮಗಳನ್ನು ಒಳಪಡಿಸಿಕೊಂಡು ಗ್ರೇಡ್ -1 ನಗರಸಭೆ ಮಾಡಲು ಎಲ್ಲ ರೀತಿಯ ಪ್ರಯತ್ನವನ್ನು ನಗರಸಭೆಯಿಂದ ಕೈಗೊಳ್ಳಲಾಗಿದೆ ಎಂದರು. ಗ್ರೇಡ್-1 ನಗರಸಭೆಯನ್ನಾಗಿಸಲು ಸುಮಾರು 1 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರಬೇಕು. ಕರ್ನಾಟಕ ಮುನಿಸಿಪಾಲಿಟಿ ಕಾಯ್ದೆ ಪ್ರಕಾರ ಹಿಂದಿನ ಜನಗಣತಿ ಆಧಾರದಲ್ಲಿ ಸ್ಥಳೀಯ ಆಡಳಿತ ದರ್ಜೆಯನ್ನು ನಿಗಧಿಪಡಿಸಲಾಗುತ್ತದೆ. ಅದಕ್ಕಾಗಿ ಸಮೀಪದಲ್ಲಿರುವ ಹಳ್ಳಿಗಳನ್ನು ನಗರಸಭೆ ವ್ಯಾಪ್ತಿಗೆ ಒಳಪಡಿಲಾಗುತ್ತದೆ. ಗ್ರೇಡ್-1 ನಗರಸಭೆಯಾದರೆ ಪೌರಾಡಳಿತ ಸಚಿವಲಾಯದಿಂದ ಹೆಚ್ಚಿನ ಅನುದಾನ ಮತ್ತು ಕರ ವಸೂಲಾತಿ ಹೆಚ್ಚಳವಾಗುತ್ತದೆ. ಅಲ್ಲದೇ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳು ಹೆಚ್ಚು ಬರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಗರಸಭೆಯನ್ನು ಮೇರ್ಲ್ದಜೆಗೇರಿಸಲು ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗುತ್ತದೆ ಎಂದರು.
ನಾಗರೀಕರು ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿರುವ 31 ವಾರ್ಡ್ಗಳಲ್ಲೂ ನೀರಿನ ಕಂದಾಯ ಪಡೆದುಕೊಳ್ಳಬೇಕು ಆದರೆ ಶೇ.20ರಷ್ಠು ಮಾತ್ರ ಕಂದಾಯ ಸಂಗ್ರಹಿಸಲಾಗುತ್ತಿದ್ದು, ಶೇ. 80ರಷ್ಟು ಸಂಗ್ರಹಿಸುತ್ತಿಲ್ಲ ನೀರಿನ ಕಂದಾಯವನ್ನು ಎಲ್ಲಾ ವಾರ್ಡ್ಗಳಲ್ಲೂ ಸಂಗ್ರಹಿಸಿ ನಗರಸಭೆಯ ಅಭಿವೃದ್ಧಿಗೆ ಮುಂದಾಗಬೇಕು ಎಂದರು.ನಗರಸಭೆ ವ್ಯಾಪ್ತಿಯೊಳಗೆ ನಿರ್ಮಾಣವಾಗಿರುವ ಕೆಲವು ಮನೆಗಳು ಸರ್ವೆ ನಂಬರ್ನಲ್ಲಿಯೇ ಇದ್ದು, ನಗರಸಭೆಯಿಂದ ಎಲ್ಲ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ನಗರಸಭೆಗೆ ಕಂದಾಯ ಕಟ್ಟುತ್ತಿಲ್ಲ. ಸರ್ವೆ ನಂಬರ್ಗಳನ್ನು ಪರಿವರ್ತನೆ ಮಾಡಿ ನಗರಸಭೆ ಅಸಸ್ಮೆಂಟ್ಗೆ ಸೇರ್ಪಡೆಗೊಳಿಸಿ ನಗರಸಭೆ ಆದಾಯವನ್ನು ಹೆಚ್ಚಿಸಿ ನಗರದ ರಸ್ತೆಗಳ ಅಭಿವೃದ್ಧಿ ಹಾಗೂ ಬೀದಿ ದೀಪ, ಚರಂಡಿ ಅಭಿವೃದ್ಧಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ನಗರಸಭೆ ವ್ಯಾಪ್ತಿಯ ಖಾಲಿ ಸ್ಥಳ ಗುರುತಿಸಿ ಬಡವರಿಗೆ ಬಾಡಿಗೆಗೆ ನೀಡಿಲು ಮುಂದಾಗಬೇಕು, ಚಾಮರಾಜೇಶ್ವರ ಪಾರ್ಕ್ ಸುತ್ತ ಶೆಡ್ಗಳನ್ನು ನಿರ್ಮಿಸಿ ನಂಬರ್ಗಳನ್ನು ಹಾಕಿ ಅಲ್ಲಿ ವ್ಯಾಪಾರಸ್ಥರಿಗೆ ಬಾಡಿಗೆ ನಿಗದಿ ಮಾಡಬೇಕು ಎಂದರು. ನಗರಸಭೆ ವ್ಯಾಪ್ತಿಯಲ್ಲಿರುವ ತೆರಿಗೆಗಳು ಯಾವುದು ಇದೇ ಅದನ್ನು ಹಾಗೇ ಉಳಿಸಿ ಹೊಸ ತೆರಿಗೆಗಳನ್ನು ಹಾಕುವುದನ್ನು ಕೈಬಿಡಬೇಕು ಎಂದು ಮನವಿ ಮಾಡಿದರು.ನಗರಸಭೆ ಪೌರಾಯುಕ್ತ ರಾಮದಾಸ್ ಮಾತನಾಡಿ, ನಗರಸಭೆ ನಾಗರಿಕರು ಒಳ್ಳೆಯ ಸಲಹೆಗಳನ್ನು ನೀಡಿದ್ದು, ಅಧ್ಯಕ್ಷರು ಒಳ್ಳೆಯ ಆಯವ್ಯಯ ಸಿದ್ದಪಡಿಸಿ ಮಂಡಿಸಲಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಮಮತ, ನಗರಸಭೆ ಲೆಕ್ಕಾ ಅಧೀಕ್ಷಕ ಜಯನಾಯಕ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರೂಪ, ಯೋಜನಾಧಿಕಾರಿ ವೆಂಕಟನಾಯಕ್ ಇದ್ದರು.