ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
೧೬ನೇ ಸಿಐಟಿಯು ರಾಜ್ಯ ಸಮ್ಮೇಳನದ ಮೂರನೇ ದಿನದಂದು ಕೆಂಪು ಸಮವಸ್ತ್ರ ಧರಿಸಿದ ಕಾರ್ಮಿಕರು ಮತ್ತು ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಕಾರ್ಮಿಕರ ಬೃಹತ್ ಮೆರವಣಿಗೆ ನಗರದ ಪ್ರಮುಖ ರಾಜಬೀದಿಗಳಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿಯ ಹಿಂಭಾಗದಲ್ಲಿ ಬಹಿರಂಗ ಸಮಾವೇಶದೊಂದಿಗೆ ಮುಕ್ತಾಯಗೊಂಡಿತು. ಸಿಐಟಿಯುವ ಪ್ರಧಾನ ಕಾರ್ಯದರ್ಶಿ ವರಲಕ್ಷ್ಮಿ ಮಾಧ್ಯಮದೊಂದಿಗೆ ಮಾತನಾಡಿ, ಸಿಐಟಿಯುನ ೧೬ನೇ ರಾಜ್ಯ ಸಮ್ಮೇಳನಾ ಮೂರು ದಿನಗಳ ಕಾಲ ಹಾಸನ ನಗರದಲ್ಲಿ ಯಶಸ್ವಿಯಾಗಿ ನಡೆದು ಮುಕ್ತಾಯವಾಗಿದೆ. ಕಾರ್ಮಿಕರ ಪರವಾದ ಹಲವಾರು ಬೇಡಿಕೆಯ ನಿರ್ಣಯವನ್ನು ನಾವು ತೆಗೆದುಕೊಳ್ಳಲಾಗಿದೆ. ಈ ಸಮ್ಮೇಳನದ ಭಾಗವಾಗಿ ಬಹಿರಂಗ ಸಭೆ ಭಾಗವಾಗಿ ಈ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಈ ಸಮಿತಿಯಲ್ಲಿ ಮೀನಾಕ್ಷಿ ಸುಂದರಂ ಅವರು ಸಿಐಟಿಯು ರಾಜ್ಯ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರೆ. ವರಲಕ್ಷ್ಮೀ ಪ್ರಧಾನ ಕಾರ್ಯದರ್ಶಿಯಾಗಿ, ಪರಮೇಶ್ ಅವರು ಖಜಾಂಚಿಯಾಗಿದ್ದು, ಒಟ್ಟು ೩೬ ಜನರು ನೂತನ ಪದಾಧಿಕಾರಿಗಳಾಗಿ ಈ ಸಮ್ಮೇಳನವು ಆಯ್ಕೆ ಮಾಡಿದೆ ಎಂದರು.ಈ ವೇಳೆ ಸುಮಾರು ೨೫ ನಿರ್ಣಯವನ್ನು ತೆಗೆದುಕೊಂಡಿದ್ದೇವೆ. ಮುಕ್ತ ಕಾರ್ಮಿಕ ಸಮಿತಿಗಳನ್ನು ವಿರೋಧಿಸಿ ಕನಿಷ್ಠ ವೇತನ ಜಾರಿಗೊಳಿಸಬೇಕು. ಗುತ್ತಿಗೆ ಕಾರ್ಮಿಕರ ಕಾಯಂ ಶಾಸನ ತರಬೇಕು. ಗುತ್ತಿಗೆ ಕಾರ್ಮಿಕರ ಕಾಯಂ: ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿನ ಶೇ.೫೦- ೬೦ರಷ್ಟು ಗುತ್ತಿಗೆ ಮತ್ತು ಹೊರಗುತ್ತಿಗೆ ಕಾರ್ಮಿಕರನ್ನು ಶೋಷಣೆಯಿಂದ ಮುಕ್ತಗೊಳಿಸಿ, ವಿಶೇಷ ಕಾನೂನಿನ ಮೂಲಕ ಕಾಯಂಗೊಳಿಸಬೇಕು. ಸರ್ಕಾರ ತನ್ನ ಕರಡು ಅಧಿಸೂಚನೆಯಲ್ಲಿ ಕೌಶಲ್ಯ ಮತ್ತು ವಲಯಗಳ ಆಧಾರದ ಮೇಲೆ ೨೩,೦೦೦-೩೦,೦೦೦ ದವರೆಗೆ ವೇತನ ಪ್ರಸ್ತಾಪಿಸಿದೆ. ಆದರೆ ಸಿಐಟಿಯು ಇದನ್ನು ತಿರಸ್ಕರಿಸಿದ್ದು, ೩೬,೦೦೦ ವೇತನ ನ್ಯಾಯಸಮ್ಮತ ಎಂದು ಪ್ರತಿಪಾದಿಸಿದೆ.
ಪ್ಲಾಂಟೇಶನ್ ಕಾರ್ಮಿಕರಿಗೆ ದಿನಕ್ಕೆ ಕೇವಲ ೪೬೧, ಬೀಡಿ ಕಾರ್ಮಿಕರಿಗೆ ದಿನಕ್ಕೆ ೩೫೦ ರು. ಕೂಲಿ ದಾಟಿಲ್ಲ. ಇದು ಸರಿಯಾಗಬೇಕೆಂದರು. ಖಾಸಗಿ ಉತ್ಪಾದನಾ ವಲಯದಲ್ಲಿ ಶೇ.೫೦ಕ್ಕಿಂತ ಹೆಚ್ಚು ಮತ್ತು ಸರ್ಕಾರಿ ಸೇವೆಗಳಲ್ಲಿ ಶೇ. ೬೦ಕ್ಕಿಂತ ಹೆಚ್ಚು ಕಾರ್ಮಿಕರು ಅಸುರಕ್ಷಿತ ಉದ್ಯೋಗಗಳಲ್ಲೇ ದುಡಿಯುತ್ತಿದ್ದಾರೆ. ಪ್ರತಿ ವರ್ಷ ಗುತ್ತಿಗೆ ನವೀಕರಣವಾಗುವುದೋ, ಇಲ್ಲವೋ ಎಂಬ ಭಯ, ಶಾಸನಾತ್ಮಕ ಸೌಲಭ್ಯಗಳ ನಿರಾಕರಣೆ ಮತ್ತು ಹಕ್ಕುಗಳ ದಮನವನ್ನು ಕಾರ್ಮಿಕರು ಎದುರಿಸುತ್ತಿದ್ದಾರೆ. ಸಹಕಾರಿ ಸಂಘಗಳ ಸ್ಥಾಪನೆ ಕಾಯಂ ಉದ್ಯೋಗಕ್ಕೆ ಪರ್ಯಾಯವಲ್ಲ ಮತ್ತು ಇದರಿಂದ ಉದ್ಯೋಗ ಭದ್ರತೆ ಅಥವಾ ಶಾಸನಾತ್ಮಕ ಸೌಲಭ್ಯ ಖಾತ್ರಿಯಾಗುವುದಿಲ್ಲ ಎಂದು ತಿಳಿಸಿದರು. ಈ ಎಲ್ಲಾ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.ಮೆರವಣಿಗೆಯಲ್ಲಿ ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ ಕೆ.ಎನ್. ಉಮೇಶ್, ಸಮ್ಮೇಳನ ನಿರ್ಣಯ ಸಮಿತಿ ಸಂಚಾಲಕಿ ಯಮುನಾ ಗಾಂವ್ಕರ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎಂಬಿ. ಪುಷ್ಪ, ರಾಜ್ಯ ಉಪಾಧ್ಯಕ್ಷ ವಿ.ಜೆ.ಕೆ. ನಾಯರ್, ಕಾಂ. ಹರೀಶ್ ನಾಯಕ್, ಸ್ವಾಗತ ಸಮಿತಿ ಗೌರವಾಧ್ಯಕ್ಷ ಎಚ್.ಎನ್. ಪರಮಶಿವಯ್ಯ, ಸ್ವಾಗತ ಸಮಿತಿ ಅಧ್ಯಕ್ಷ ಧರ್ಮೇಶ್, ಸ್ವಾಗತ ಸಮಿತಿಯ ಉಪಾಧ್ಯಕ್ಷ ರಾಜು ಗೊರೂರ್, ಜಿಲ್ಲಾ ಖಜಾಂಚಿ ಅರವಿಂದ್, ಕಾರ್ಯದರ್ಶಿ ಎಂ.ಜಿ. ಪೃಥ್ವಿ ಮತ್ತು ಸ್ವಾಗತ ಸಮಿತಿಯ ಕಾರ್ಯದರ್ಶಿ ಎಚ್.ಆರ್. ನವೀನ್ ಕುಮಾರ್ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ೫ ಸಾವಿರಕ್ಕೂ ಹೆಚ್ಚು ಕಾರ್ಮಿಕ ಪ್ರತಿನಿಧಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
;Resize=(128,128))
;Resize=(128,128))